Chaitra Kundapura, Halashree Swamiji: ಬಿಜೆಪಿ ಟಿಕೆಟ್ ಡೀಲ್ ಪ್ರಕರಣದಲ್ಲಿ ಮಹತ್ತರ ತಿರುವು ; ಹಾಲಶ್ರೀ ಸ್ವಾಮೀಜಿ 65 ಲಕ್ಷ ಕೊಟ್ಟಿದ್ದಾಗಿ ಮೈಸೂರಿನ ವ್ಯಕ್ತಿ ವಿಡಿಯೋ ಹೇಳಿಕೆ, ಮಠದಲ್ಲಿ ಹಣದ ಚೀಲ ಪತ್ತೆ

20-09-23 08:08 pm       HK News Desk   ಕರ್ನಾಟಕ

ಬಿಜೆಪಿ ಟಿಕೆಟ್ ಡೀಲ್ ಪ್ರಕರಣದಲ್ಲಿ ಮಹತ್ವದ ತಿರುವು ಲಭಿಸಿದ್ದು ಮೂರನೇ ಆರೋಪಿ ಅಭಿನವ ಹಾಲಶ್ರೀಗೆ ಸಂಬಂಧಿಸಿದ 65 ಲಕ್ಷ ರೂ. ನಗದು ಹಣವಿದ್ದ ಚೀಲ ಪತ್ತೆಯಾಗಿದ್ದು ಸ್ವಾಮೀಜಿ ಕೊಟ್ಟಿದ್ದ ಹಣವೆಂದು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಹೊರಬಿಟ್ಟಿದ್ದಾನೆ. 

ವಿಜಯನಗರ, ಸೆ.20: ಬಿಜೆಪಿ ಟಿಕೆಟ್ ಡೀಲ್ ಪ್ರಕರಣದಲ್ಲಿ ಮಹತ್ವದ ತಿರುವು ಲಭಿಸಿದ್ದು ಮೂರನೇ ಆರೋಪಿ ಅಭಿನವ ಹಾಲಶ್ರೀಗೆ ಸಂಬಂಧಿಸಿದ 65 ಲಕ್ಷ ರೂ. ನಗದು ಹಣವಿದ್ದ ಚೀಲ ಪತ್ತೆಯಾಗಿದ್ದು ಸ್ವಾಮೀಜಿ ಕೊಟ್ಟಿದ್ದ ಹಣವೆಂದು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಹೊರಬಿಟ್ಟಿದ್ದಾನೆ. 

ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಸ್ವಾಮೀಜಿ ಮೈಸೂರು ಕಡೆ ಪ್ರಯಾಣ ಬೆಳೆಸಿದ್ದರು. ಅಲ್ಲದೆ, ಈ ವೇಳೆ 65 ಲಕ್ಷ ಹಣ ಇದ್ದ ಬ್ಯಾಗ್ ಅನ್ನು ಸ್ವಾಮೀಜಿಯ ಕಾರು ಚಾಲಕ ವ್ಯಕ್ತಿಯೊಬ್ಬನಿಗೆ ನೀಡಿದ್ದ. ಈ ನಡುವೆ, ಕಾರು ಚಾಲಕ ಮತ್ತು ಸ್ವಾಮೀಜಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಹಣ ಪಡೆದಿದ್ದ ವ್ಯಕ್ತಿ ವಿಡಿಯೋ ಮಾಡಿದ್ದು 65 ಲಕ್ಷ ಹಣ ಇರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾನೆ. 

ನನಗೆ ಸ್ವಾಮೀಜಿ ಹಣ ಕೊಟ್ಟಿದ್ರು, ಈ ಹಣವನ್ನು ಹಿರೇಹಡಗಲಿಯ ಮಠದಲ್ಲಿರುವ ಅವರ ತಂದೆಯವರಿಗೆ ಒಪ್ಪಿಸಲು ತಿಳಿಸಿದ್ದಾರೆ. ‌ಮಠಕ್ಕೆ ಬಂದು ಪಲ್ಲಕ್ಕಿ ಬಳಿ ಹಣದ ಬ್ಯಾಗ್ ಇಟ್ಟು,  ನಾನು ಬ್ಯಾಗ್ ಇಟ್ಟಿದ್ದೇನೆ ಅಂತ ವ್ಯಕ್ತಿ ವಿಡಿಯೋ ಮಾಡಿದ್ದಾನೆ. ಇಂದು ಬೆಳಗ್ಗೆ ಮಠಕ್ಕೆ ಬಂದು ಹಣವಿಟ್ಟು ವ್ಯಕ್ತಿ ತೆರಳಿದ್ದ. ಹಣದ ಬ್ಯಾಗ್ ಪತ್ತೆಯಾದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಬಿ ಪೊಲೀಸರು ಮಠದಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ. ವಿಡಿಯೋದಲ್ಲಿ ಇದರ 65 ಲಕ್ಷದಿಂದ ನಾಲ್ಕು ಲಕ್ಷವನ್ನು ವಕೀಲರಿಗೆಂದು ಕಾರು ಚಾಲಕ ಪಡೆದಿದ್ದಾನೆ. ಉಳಿದ ಹಣ ಇದರಲ್ಲಿ ಇದೆಯೆಂದು ವ್ಯಕ್ತಿ ತಿಳಿಸಿದ್ದ. 

ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಗೆ ಉದ್ಯಮಿ ಗೋವಿಂದ ಪೂಜಾರಿ ಒಂದೂವರೆ ಕೋಟಿ ಹಣ ನೀಡಿದ್ದಾಗಿ ತಿಳಿಸಿದ್ದು ಪ್ರಕರಣದಲ್ಲಿ ಮೂರನೇ ಆರೋಪಿಯಾಗಿ ಗುರುತಿಸಿದ್ದಾರೆ.

Chaitra Kundapura, Halashree Swamiji handovers 65 lakhs to person at Mysuru, Video goes viral.