Headline Karnataka News

24-09-23 11:19 pm       HK News Desk   ಕರ್ನಾಟಕ

ಪೊಲೀಸ್ ಅಧಿಕಾರಿಗಳು ಸಂವಿಧಾನಕ್ಕೆ ನಿಷ್ಠರಾಗಿರಬೇಕು. ಯಾರೋ ದೊಡ್ಡವರಿಗೆ ನಿಷ್ಠರಾಗಿರೋದಲ್ಲ. ಬೆಳ್ತಂಗಡಿ ಪೊಲೀಸರು ಮಾತ್ರ ಸಂವಿಧಾನ ಬದಿಗಿಟ್ಟು ಅಲ್ಲಿನ ದೊಡ್ಡವರಿಗೆ ನಿಷ್ಠೆ ತೋರುತ್ತಿದ್ದಾರೆ. ಕೆಲವರು ಯಾಕೆ ಧರ್ಮಸ್ಥಳದಲ್ಲಿ ಮಾತ್ರ ಕೊಲೆ, ಆತ್ಮಹತ್ಯೆ, ಅಸಹಜ ಸಾವು ಆಗುತ್ತಿದೆ, ಕಾರ್ಕಳದಲ್ಲಿ ಯಾಕೆ ಆಗಲ್ಲ ಅಂತಾರೆ.

ಕಾರ್ಕಳ, ಸೆ.24: ಪೊಲೀಸ್ ಅಧಿಕಾರಿಗಳು ಸಂವಿಧಾನಕ್ಕೆ ನಿಷ್ಠರಾಗಿರಬೇಕು. ಯಾರೋ ದೊಡ್ಡವರಿಗೆ ನಿಷ್ಠರಾಗಿರೋದಲ್ಲ. ಬೆಳ್ತಂಗಡಿ ಪೊಲೀಸರು ಮಾತ್ರ ಸಂವಿಧಾನ ಬದಿಗಿಟ್ಟು ಅಲ್ಲಿನ ದೊಡ್ಡವರಿಗೆ ನಿಷ್ಠೆ ತೋರುತ್ತಿದ್ದಾರೆ. ಕೆಲವರು ಯಾಕೆ ಧರ್ಮಸ್ಥಳದಲ್ಲಿ ಮಾತ್ರ ಕೊಲೆ, ಆತ್ಮಹತ್ಯೆ, ಅಸಹಜ ಸಾವು ಆಗುತ್ತಿದೆ, ಕಾರ್ಕಳದಲ್ಲಿ ಯಾಕೆ ಆಗಲ್ಲ ಅಂತಾರೆ. ಬೆಳ್ತಂಗಡಿ ಪೊಲೀಸರು ಆ ರೀತಿ ಇರೋದ್ರಿಂದಲೇ ಕೊಲೆ ಆಗ್ತಾ ಇದೆ. ಅಲ್ಲಿ ಕೊಲೆ ಮಾಡಿ ಕಾರ್ಕಳಕ್ಕೆ ಶವ ತಂದು ಹಾಕಿದರೆ, ಒದ್ದು ಒಳಗೆ ಹಾಕುತ್ತಾರೆ ಎಂದು ಮಾಜಿ ಪೊಲೀಸ್ ಅಧಿಕಾರಿ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ್ ಹೇಳಿದ್ದಾರೆ.

ಸೌಜನ್ಯಾ ಪರ ಕಾರ್ಕಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದು ಮಟ್ಟೆಣ್ಣವರ್ ವೀರಾವೇಶದ ಭಾಷಣ ಮಾಡಿದ್ದಾರೆ. ಪೊಲೀಸ್ ಟ್ರೈನಿಂಗ್ ಮುಗಿದ ಬೆನ್ನಲ್ಲೇ ಪ್ರತಿಜ್ಞೆ ಸ್ವೀಕಾರ ಮಾಡುತ್ತೇವೆ. ಸಂವಿಧಾನಕ್ಕೆ ತಕ್ಕಂತೆ ಜನಸಾಮಾನ್ಯರ ಹಿತಕ್ಕಾಗಿ ಕೆಲಸ ಮಾಡುತ್ತೇನೆ. ನನ್ನ ಕೆಲಸದಲ್ಲಿ ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗುವುದಿಲ್ಲ ಎನ್ನುತ್ತೇವೆ. ಆದರೆ ನನಗೆ ಪ್ರತಿಜ್ಞಾ ವಿಧಿಯಂತೆ ಕೆಲಸ ಮಾಡಲು ಆಗಿಲ್ಲ ಎಂದೇ ಪೊಲೀಸ್ ಕೆಲಸ ಬಿಟ್ಟು ಬಂದಿದ್ದೇನೆ. ಜನರ ಪರವಾಗಿ ಧ್ವನಿ ಎತ್ತುತ್ತಿದ್ದೇನೆ.

ಸೌಜನ್ಯಾ ಪರ ಯಾಕೆ ನಿಲ್ಲಬೇಕು ಅಂದ್ರೆ, ಆಕೆ ಆವತ್ತು ಬರಿ ಹೊಟ್ಟೆಯಲ್ಲಿದ್ದು ಚಾಮುಂಡೇಶ್ವರಿ ಸಲುವಾಗಿ ಉಪವಾಸ ಮಾಡಿದ್ದವಳು. ಅಂಥ ಹುಡುಗಿಯನ್ನು ಈ ನೀಚರು ತಿಂದು ಮುಗಿಸಿದ್ರಲ್ಲಾ.. ಆ ಚಾಮುಂಡೇಶ್ವರಿ ದೇವಿಯೇ ಈಗ ಎದ್ದು ನಿಂತಿದ್ದಾಳೆ. ಇವರು ಏನೇ ತಿಪ್ಪರಲಾಗ ಹಾಕಿದ್ರೂ ಈ ಹೋರಾಟ ನಿಲ್ಸಕ್ಕಾಗಲ್ಲ. ಕೆಲವರು ದೊಡ್ಡವರ ಮಗ ಆಗ ವಿದೇಶದಲ್ಲಿದ್ದ ಎಂದು ಅದೇನೋ ಡಾಕ್ಯುಮೆಂಟ್ ತೋರಿಸುತ್ತಾರೆ. ಆತ ಇಲ್ಲಾಂದ್ರೆ, ಆತನ ಅಪ್ಪ ಆಗಿರಬಹುದು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಇವರೇನು ಹೇಳಿದರೂ, ಚೆಂಡು ಇವರ ಮನೆಯ ಅಂಗಳದಿಂದ ಹೊರಗೆ ಹೋಗುತ್ತಿಲ್ಲ. ಪದ್ಮಲತಾ, ಮಾವುತನ ಕೊಲೆ ಸೇರಿ ಹೀಗೆ ಅಲ್ಲಿ ಕೊಲೆ ಆಗಿದ್ದಕ್ಕೆಲ್ಲ ಆ ಕುಟುಂಬವೇ ಕಾರಣ ಎನ್ನುತ್ತಿದ್ದಾರೆ. ಇವರು ಅಷ್ಟು ಒಳ್ಳೆಯವರಾಗಿದ್ದರಿಂದ ಇಂಥ ಆರೋಪ ಬರ್ತಿದೆಯಲ್ವಾ ಎಂದು ಹೇಳಿದರು ಮಟ್ಟೆಣ್ಣನವರ್.   

ತಮ್ಮಣ್ಣ ಶೆಟ್ಟಿ ಮಾತನಾಡಿ, ಕಾರ್ಕಳ ಪುಣ್ಯದ ಮಣ್ಣು. ಹಿಂದೆ ಭೈರವರಸರು ಗೊಮ್ಮಟನ ಕೆತ್ತಿದ ಕಲ್ಕುಡ, ಕಲ್ಲುರ್ಟಿಗೆ ಶಿಕ್ಷೆ ಕೊಟ್ಟಾಗ ಅವರೇ ಮುಂದೆ ಭೈರವರಸನ ಅರಮನೆಯನ್ನೇ ಸುಟ್ಟು ಹಾಕಿ ಜನರನ್ನು ಪೊರೆದವರು. ಇಂಥ ಜಾಗದಲ್ಲಿ ಜನರು ಎದ್ದಿದ್ದಾರೆ ಅಂದ್ರೆ, ಸುಲಭದ ಮಾತಲ್ಲ. ಇದು ಅಣ್ಣಪ್ಪ ಸ್ವಾಮಿಯ ಇಚ್ಛೆ. ಸೌಜನ್ಯಾ ರೂಪದಲ್ಲಿ ದೇವಿ ತಲೆ ಎತ್ತಿದ್ದಾಳೆ. ಸೌಜನ್ಯಾ ಹೆಸರು ನಿಮಿತ್ತ ಮಾತ್ರ ಎಂದರು.

ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡುತ್ತಲೇ ಜನರು ಹರ್ಷೋದ್ಗಾರ ಮಾಡಿದ್ದಾರೆ. ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಕೊಡುತ್ತಿದ್ದೇವೆ. ರಾಜ್ಯ ಸರಕಾರವೇ ಈ ಪ್ರಕರಣವನ್ನು ಮರು ತನಿಖೆಗೆ ಘೋಷಣೆ ಮಾಡಿ. ಯಾರು ಅತ್ಯಾಚಾರಿಗಳಿದ್ದಾರೆ ಅವರನ್ನು ಶಿಕ್ಷಿಸಿ ಅಂತ ಹೇಳುತ್ತಿದ್ದೇವೆ. ನೀವು ನಿರ್ಲಕ್ಷ್ಯ ಮಾಡಿದರೆ ಮುಂದೆ ಧರ್ಮಸ್ಥಳಕ್ಕೆ ಮುತ್ತಿಗೆ ಹಾಕುವುದಕ್ಕೂ ಹೇಸುವುದಿಲ್ಲ ಎಂದರು.

Sowjanya case, Girish at Protest in Karkala.