ಬಿಜೆಪಿಯವರು ಹಣದ ಹೊಳೆ ಹರಿಸಿ ಚುನಾವಣೆ ಗೆದಿದ್ದಾರೆ ; ಸಿದ್ದರಾಮಯ್ಯ

10-11-20 05:44 pm       Bangalore Correspondent   ಕರ್ನಾಟಕ

ಉಪ ಚುನಾವಣೆಯಲ್ಲಿ ಅಧಿಕಾರ ಮತ್ತು ಹಣ ಕೆಲಸ ಮಾಡಿದೆ ಎಂದು ವಿಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಾಗಲಕೋಟೆ, ನವೆಂಬರ್ 10: ಉಪ ಚುನಾವಣೆಯಲ್ಲಿ ಅಧಿಕಾರ ಮತ್ತು ಹಣ ಕೆಲಸ ಮಾಡಿದೆ. ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ಗೆದ್ದಿದ್ದಾರೆ ಎಂದು ವಿಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಸಾಮಾನ್ಯ. ಆರ್.ಆರ್. ನಗರ ಮತ್ತು ಶಿರಾದಲ್ಲಿ ಗೆಲ್ಲುತ್ತೇವೆ ಅಂದ್ಕೊಂಡಿದ್ದೆವು. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಸರಕಾರದಲ್ಲಿ ಆಡಳಿತದಲ್ಲಿರುವವರು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು. ಆದರೆ ಬಿಜೆಪಿ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಪಡಿಸಿರುವ ಮಾಹಿತಿ ನನಗಿದೆ. ಬಿಜೆಪಿಯವರು ಹಣದ ಹೊಳೆ ಹರಿಸಿ ಗೆದ್ದಿದ್ದಾರೆ ಎಂದಿದ್ದಾರೆ.

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಇರಲಿಲ್ಲ. ಶಿರಾದಲ್ಲಿ ಅಲ್ಲಿನ ಕಾರ್ಯಕರ್ತರು ಮತ್ತು ಮುಖಂಡರು ಒಮ್ಮತದಿಂದಲೇ ಅಭ್ಯರ್ಥಿ ಹಾಕಿದ್ದರು. ಆರ್.ಆರ್.ನಗರದಲ್ಲಿ ಆಯ್ಕೆ ವಿಳಂಬವಾದರೂ, ವಿದ್ಯಾವಂತೆಯನ್ನು ಕಣಕ್ಕಿಳಿಸಿದ್ದೇವೆ. ಆದರೆ, ಬಿಜೆಪಿ ಅಭ್ಯರ್ಥಿ ಹಣ ಹಂಚಿ ಚುನಾವಣೆ ಗೆದ್ದಿದ್ದಾರೆ. ಜೆಡಿಎಸ್ ನವರು ಅಲ್ಲಿ ವೀಕ್ ಕ್ಯಾಂಡಿಡೇಟ್ ಹಾಕಿ, ಬಿಜೆಪಿಗೆ ಸಹಕಾರ ನೀಡಿದ್ದಾರೆ ಎಂದರು.

ಬಿಹಾರದಲ್ಲಿ ಮಹಾಘಟಬಂಧನ್ ಗೆಲ್ಲುವುದಾಗಿ ಸಮೀಕ್ಷೆಗಳು ಹೇಳಿದ್ದವು. ಆದರೆ, ಫಲಿತಾಂಶ ಭಿನ್ನವಾಗಿ ಬರುತ್ತಿರುವುದನ್ನು ನೋಡಿದರೆ ಅನುಮಾನಕ್ಕೆ ಕಾರಣವಾಗುತ್ತಿದೆ. ಪೂರ್ತಿ ಫಲಿತಾಂಶ ಬಂದಿಲ್ಲ. ಏನಾಗುತ್ತೋ ನೋಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.