Hit and Run, Accident in Vijayapura: ರಸ್ತೆ ಡಿವೈಡ್‌ರ್ ಮೇಲೆ ಕುಳಿತು ಮಾತನಾಡುತ್ತಿದ್ದ ಯುವಕರ ಮೇಲೆ ಹರಿದ ಟ್ರಕ್, ನಾಲ್ವರು ಯುವಕರ ದುರ್ಮರಣ !

18-10-23 01:03 pm       HK News Desk   ಕರ್ನಾಟಕ

ಸರ್ವಿಸ್ ರಸ್ತೆಯ ಡಿವೈಡರ್ ಮೇಲೆ ಕುಳಿತು ಮಾತನಾಡುತ್ತಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್‌ ಯುವಕರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ಟೋಲ್ ಗೇಟ್ ಬಳಿ ನಡೆದಿದೆ.

ವಿಜಯಪುರ, ಅ.18: ಸರ್ವಿಸ್ ರಸ್ತೆಯ ಡಿವೈಡರ್ ಮೇಲೆ ಕುಳಿತು ಮಾತನಾಡುತ್ತಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್‌ ಯುವಕರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ಟೋಲ್ ಗೇಟ್ ಬಳಿ ನಡೆದಿದೆ.

ಮೃತ ಯುವಕರನ್ನು ವಿಜಯಪುರ ವಜ್ರಹನುಮಾನ ನಗರದ ನಿವಾಸಿಗಳಾದ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ (26), ಈರಣ್ಣ ಕೋಲಾರ (26) ಮತ್ತು ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ನಾಲ್ವರು ಸ್ನೇಹಿತರು ಸೇರಿ ಊಟಕ್ಕೆ ಹೊರಗಡೆ ಹೋಗಿದ್ದಾರೆ. ಊಟ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಟೋಲ್​ಗೇಟ್ ಹತ್ತಿರದ ಟ್ರಕ್ ಬೇ ಬಳಿ ಇರುವ ಡಿವೈಡರ್ ಮೇಲೆ ಯುವಕರು ಕುಳಿತಿದ್ದರು. ಈ ವೇಳೆ ಜವರಾಯನ ರೂಪದಲ್ಲಿ ಬಂದ ಲಾರಿ ಯುವಕರ‌ ಮೇಲೆ ಹರಿದಿದೆ. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಕರೆ ಮಾಡಿ ತೀವ್ರವಾಗಿ ಗಾಯಗೊಂಡ ಯುವಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು‌ ಮುಂದಾಗಿದ್ದರು. ಆದ್ರೆ ಯುವಕರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಇನ್ನು, ಈ ಘಟನೆಯಲ್ಲಿ ಯುವಕರಿಗೆ ಸೇರಿದ ಬೈಕ್​ಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ.

ಸುದ್ದಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಸೇರಿದಂತೆ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪ್ರೆಗೆ ರವಾನಿಸಿದರು. ಬದುಕಿ ಬಾಳಿ ಸುಂದರ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ನಾಲ್ವರು ಸ್ನೇಹಿತರು ದಾರುಣ ಅಂತ್ಯ ಕಂಡಿರುವುದರಿಂದ ಕುಟುಂಬಸ್ಥರು ಮತ್ತು ಸಂಬಂಧಿಕರು ಶೋಕ ಸಾಗರದಲ್ಲಿ‌ ಮುಳುಗಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

In a tragic incident, four persons were killed on the spot when a speeding truck ran over them near a toll gate in Vijayapura district.