Shivamogga Bomb scare Railway Station: ಶಿವಮೊಗ್ಗದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆ ಪ್ರಕರಣ ; ತುಮಕೂರಿನಲ್ಲಿ ಇಬ್ಬರು ವಶಕ್ಕೆ, ಬಾಕ್ಸ್ ನಲ್ಲಿ ಸ್ಫೋಟಕ ಇರಲಿಲ್ಲ, ಅಡುಗೆ ಉಪ್ಪು ಇತ್ತೆಂದ ಎಸ್ಪಿ ಮಿಥುನ್ 

06-11-23 12:47 pm       HK News Desk   ಕರ್ನಾಟಕ

ಬಾಂಬ್ ಬಗ್ಗೆ ತೀವ್ರ ಗುಮಾನಿ ಉಂಟಾಗಿದ್ದ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್ ಅನ್ನು ತಜ್ಞರು ತಪಾಸಣೆಗೆ ಒಳಪಡಿಸಿದ್ದಾರೆ.

ಶಿವಮೊಗ್ಗ, ನ.6: ಬಾಂಬ್ ಬಗ್ಗೆ ತೀವ್ರ ಗುಮಾನಿ ಉಂಟಾಗಿದ್ದ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಕ್ಸ್ ಅನ್ನು ತಜ್ಞರು ತಪಾಸಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ, ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿದ್ದು ಅದರಲ್ಲಿ ಸಿಕ್ಕಿರೋದು ವೈಟ್ ಪೌಡರ್ ಅಲ್ಲ. ಅಲ್ಲಿ ದೊರೆತಿದ್ದು ಬಿಳಿ ಉಪ್ಪು ಮಾತ್ರ ಎಂದು ಹೇಳಿದ್ದಾರೆ. ಇದೇ ವೇಳೆ, ಘಟನೆ ಸಂಬಂಧಿಸಿ ತುಮಕೂರಿನಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಎರಡು ಬಾಕ್ಸ್ ಗಳಲ್ಲಿ ಅಡುಗೆಗೆ ಬಳಸುವ ಉಪ್ಪನ್ನು ಇಡಲಾಗಿತ್ತು. ಟ್ರಂಕ್ ನಲ್ಲಿ ಹಾಕಿಟ್ಟಿರುವ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಟ್ರಂಕ್ ನಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಇರಲಿಲ್ಲ. ಕೆಲವು ರದ್ದಿ ಪೇಪರ್ ಗಳು ಹಾಗೂ ಟೇಬಲ್ ಸಾಲ್ಟ್ ಇದೆ ಎಂದು ಪ್ರಾಥಮಿಕ ತನಿಖೆ ಬಳಿಕ ಎಸ್.ಪಿ. ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. 

ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ಬಾಕ್ಸ್ ಪತ್ತೆಯಾದ ಬಗ್ಗೆ ನಿನ್ನೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ಬಾಂಬ್ ನಿಷ್ಕ್ರಿಯ ದಳದ ಬೆಂಗಳೂರು ಸಿಬ್ಭಂದಿ ತನಿಖೆ ನಡೆಸಿದ್ದಾರೆ. ಅವರು ನಾಲ್ಕು ರೀತಿಯ ಪರೀಕ್ಷೆ ನಡೆಸಿದ್ದು ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಎರಡೂ ಬಾಕ್ಸ್ ಗಳಲ್ಲಿ ವೇಸ್ಟ್ ಪೇಪರ್ ಗಳು ಹಾಗೂ ಟೇಬ್ ಸಾಲ್ಟ್ ದೊರೆತಿದೆ. 

ಸಿಸಿಟಿವಿ ದಾಖಲೆ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಮಾರುತಿ ಓಮಿನಿಯಲ್ಲಿ ಬಂದು ಬಾಕ್ಸ್ ಗಳನ್ನು ಇಟ್ಟು ಹೋಗಿದ್ದು ಕಂಡುಬಂದಿದೆ. ಯಾಕೆ ಈ ಬಾಕ್ಸ್ ಇಟ್ಟರು, ಅವರ ಉದ್ದೇಶ ಏನು ಎಂಬುದು ಗೊತ್ತಾಗಬೇಕು. ಈ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.‌ ವಶಕ್ಕೆ ಪಡೆದವರಲ್ಲಿ ಕ್ರಿಮಿನಲ್ ಹಿನ್ನೆಲೆ ಕಂಡು ಬರುತ್ತಿದೆ. ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ. 

ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆಯಲಾಗಿದ್ದ ಗೋಣಿಚೀಲದಲ್ಲಿ ಬಾಕ್ಸ್ ಸುತ್ತಿಡಲಾಗಿತ್ತು. ರೈಲು ನಿಲ್ದಾಣ ಬಳಿಯಿದ್ದ ಎರಡು ಬಾಕ್ಸ್ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಕಾರಿನಲ್ಲಿ ಬಂದಿದ್ದ ವ್ಯಕ್ತಿಗಳು ಈ ಬಾಕ್ಸ್ ಇಟ್ಟಿದ್ದಾರೆಂಬ ಮಾಹಿತಿ ಆಧರಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭದ್ರಾವತಿ ಮೂಲದ ನಸ್ರುಲ್ಲಾ ಮತ್ತು ತಿಪಟೂರಿನ ಗಾಂಧಿನಗರದ ಜಬ್ಬಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಸ್ರುಲ್ಲಾ ಹಲವು ದಿನಗಳ ಹಿಂದೆ ತಿಪಟೂರು ಪಟ್ಟಣಕ್ಕೆ ಬಂದಿದ್ದು ಬಾಡಿಗೆಗೆ ಕಾರು ಬಿಟ್ಟಿದ್ದ.‌ ಜಬ್ಬಿ ಮತ್ತು ನಸ್ರುಲ್ಲಾ ಇಬ್ಬರೂ ಸ್ನೇಹಿತರಾಗಿದ್ದರು. ಎರಡು ದಿನಗಳ ಹಿಂದೆ ನಸ್ರುಲ್ಲಾಗೆ ಸೇರಿದ ಓಮಿನಿ ಕಾರಿನಲ್ಲಿ ಶಿವಮೊಗ್ಗಕ್ಕೆ ತೆರಳಿದ್ದರು. ಈಗ ಓಮಿನಿ ಕಾರಿನಲ್ಲಿ ಶಂಕಾಸ್ಪ್ ವಸ್ತು ಪತ್ತೆಯಾದ ಹಿನ್ನೆಲೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಸ್ರುಲ್ಲಾ ಹಾಗೂ ಜಬ್ಬಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಶಿವಮೊಗ್ಗದಲ್ಲಿ ನಿನ್ನೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಲಾಗಿತ್ತು. ಅನುಮಾನಿತ ಬಾಕ್ಸ್ ನಲ್ಲಿ ಬಾಂಬ್ ಇದೆಯೆಂದು ವದಂತಿ ಹಬ್ಬಿತ್ತು. ಅಲ್ಲದೆ, ವೈಟ್ ಪೌಡರ್ ಇದೆಯೆಂಬ ಮಾಹಿತಿ ಸ್ಫೋಟಕ ವಸ್ತು ಆಗಿರಬಹುದೆಂಬ ಅನುಮಾನಕ್ಕೆ ಕಾರಣವಾಗಿತ್ತು.

No explosives found in two boxes found at Shivamogga Railway Station says SP. The expert team has found ‘some waste material’ in the two suspicious boxes abandoned near Shivamogga Railway Station.