ರಾಜ್ಯ ಬಿಜೆಪಿಗೆ ವಿಜಯೇಂದ್ರ ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ..! ಲಿಂಗಾಯತ ಓಟ್ ಬ್ಯಾಂಕ್, ಲೋಕಸಭೆ ಗೆಲುವೇ ಗುರಿ, ಹಿರಿತಲೆಗಳನ್ನು ಬದಿಗಿಟ್ಟು ಹೊಸ ತಲೆಮಾರಿಗೆ ಮಣೆ

11-11-23 10:01 pm       Bangalore Correspondent   ಕರ್ನಾಟಕ

ರಾಜ್ಯ ಬಿಜೆಪಿಗೆ ಹೊಸ ಸಾರಥಿಯಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಆಮೂಲಕ ಬಿಜೆಪಿ ಒಂದು ಕಡೆ ಹಿರಿತಲೆಗಳಿಗೆ ನಿವೃತ್ತಿ ಕೊಡುತ್ತಲೇ ಹೊಸ ತಲೆಮಾರಿಗೆ ಪಟ್ಟ ಕಟ್ಟಿರುವುದನ್ನು ಎತ್ತಿ ತೋರಿಸಿದೆ.

ಬೆಂಗಳೂರು, ನ.10: ರಾಜ್ಯ ಬಿಜೆಪಿಗೆ ಹೊಸ ಸಾರಥಿಯಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಆಮೂಲಕ ಬಿಜೆಪಿ ಒಂದು ಕಡೆ ಹಿರಿತಲೆಗಳಿಗೆ ನಿವೃತ್ತಿ ಕೊಡುತ್ತಲೇ ಹೊಸ ತಲೆಮಾರಿಗೆ ಪಟ್ಟ ಕಟ್ಟಿರುವುದನ್ನು ಎತ್ತಿ ತೋರಿಸಿದೆ. ಅಲ್ಲದೆ, ಸಾರಥಿಯಿಲ್ಲದೆ ಸೊರಗಿದ್ದ ರಾಜ್ಯ ಬಿಜೆಪಿಗೆ ಹೊಸ ಹುಮ್ಮಸ್ಸು ದೊರಕುವಂತೆ ಮಾಡಿದೆ. ಇದರೊಂದಿಗೆ ಹೊಸ ಜನರೇಶನ್ ಕಾರ್ಯಕರ್ತರನ್ನು ಸೆಳೆಯುವ ತಂತ್ರಗಾರಿಕೆಯನ್ನೂ ಮಾಡಿದೆ.

ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಇದ್ದಾಗ್ಯೂ ಹೀನಾಯ ಸೋಲುಂಡಿದ್ದರಿಂದ ಪಕ್ಷದ ರಾಜ್ಯ ನಾಯಕರ ಬಗ್ಗೆ ದೆಹಲಿ ನಾಯಕರು ತೀವ್ರ ಸಿಟ್ಟಾಗಿದ್ದರು. ಹೀಗಾಗಿ ಒಂದೆಡೆ ರಾಜ್ಯಾಧ್ಯಕ್ಷ ಸ್ಥಾನಕ್ಕೂ, ವಿಪಕ್ಷ ನಾಯಕನ ಸ್ಥಾನಕ್ಕೂ ಯಾರನ್ನೂ ನೇಮಕ ಮಾಡದೆ ರಾಜ್ಯ ಬಿಜೆಪಿ ಬಗ್ಗೆಯೇ ಅಸಡ್ಡೆ ತೋರಿದ್ದರು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವಧಿ ಮುಗಿದಿದ್ದರೂ, ಹೊಸಬರ ಆಯ್ಕೆಗೆ ಮುಂದಾಗದೇ ಇದ್ದುದು ಪಕ್ಷದ ಕಾರ್ಯಕರ್ತರನ್ನೂ ಭ್ರಮನಿರಶನ ಆಗುವಂತೆ ಮಾಡಿತ್ತು. ಮತ್ತೊಂದೆಡೆ, ಯಡಿಯೂರಪ್ಪ ಜೊತೆಗಿದ್ದ ನಾಯಕರು ಒಬ್ಬೊಬ್ಬರೇ ಪಕ್ಷ ಬಿಡುತ್ತಿರುವುದು, ಪ್ರಬಲ ಲಿಂಗಾಯತ ಓಟ್ ಬ್ಯಾಂಕ್ ಚದುರಿ ಹೋಗುತ್ತಿರುವುದನ್ನು ತಿಳಿದ ದೆಹಲಿ ನಾಯಕರು ಇನ್ನೊಂದೇ ಆಯ್ಕೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

Nalin Kumar Kateel rubbishes reports of resigning as Karnataka BJP chief

ಕಳೆದ ಆರು ತಿಂಗಳಲ್ಲಿ ಕಾಂಗ್ರೆಸ್ ಆಡಳಿತ ಬರುತ್ತಿದ್ದಂತೆ ರಾಜ್ಯದಲ್ಲಿ ಬಹಳಷ್ಟು ಬದಲಾವಣೆ ಆಗಿರುವುದು ಸುಳ್ಳಲ್ಲ. ಒಂದೆಡೆ ಗ್ಯಾರಂಟಿ ಯೋಜನೆಗಳು ಜನರ ಮನಸ್ಸು ನಾಟುತ್ತಿದ್ದರೆ, ಮತ್ತೊಂದೆಡೆ ರಾಜ್ಯ ಬಿಜೆಪಿ ನಾಯಕರ ಮುಸುಕಿನ ಗುದ್ದಾಟ ಪಕ್ಷವನ್ನು ಕಳೆಗುಂದುವಂತೆ ಮಾಡಿತ್ತು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಲ್ಲದೆ, ಚುನಾವಣೆ ಬಳಿಕವೂ ಒಬ್ಬೊಬ್ಬರೇ ಬಿಜೆಪಿ ನಾಯಕರನ್ನು ಕಾಂಗ್ರೆಸಿನತ್ತ ಸೆಳೆಯುತ್ತಿರುವುದು ದೆಹಲಿ ನಾಯಕರಿಗೆ ನುಂಗಲಾರದ ತುತ್ತಾಗಿತ್ತು. ಇದನ್ನು ನಿಯಂತ್ರಣ ಮಾಡುವುದಕ್ಕಾಗಲೀ, ಪಕ್ಷ ಬಿಡುತ್ತಿರುವ ನಾಯಕರನ್ನು ಹಿಡಿದಿಡುವುದಾಗಲೀ ರಾಜ್ಯ ಬಿಜೆಪಿಯ ಇತರೇ ನಾಯಕರಿಂದ ಸಾಧ್ಯವಾಗಿಲ್ಲ. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಮುನ್ನೆಲೆಗೆ ತರುವುದು, ಖಚಿತ ಸ್ಥಾನಗಳನ್ನು ಗೆಲ್ಲುವುದು ದೊಡ್ಡ ಸವಾಲಿದೆ. ಇಂಥ ಸಂದರ್ಭದಲ್ಲಿ ಯಡಿಯೂರಪ್ಪ ಅಲ್ಲದೆ ಬೇರೆ ಯಾರಿಂದಲೂ ಪಕ್ಷವನ್ನು ಮೇಲೆತ್ತಲು ಸಾಧ್ಯವಿಲ್ಲ ಅನ್ನುವ ಮಾತುಗಳು ದೆಹಲಿ ಮಟ್ಟದಲ್ಲಿ ಒತ್ತಡ ಸೃಷ್ಟಿಸಿದ್ದವು.  

BJP leader Renukacharya bids farewell to electoral politics

ಇದೇ ರೀತಿಯ ಮಾತುಗಳನ್ನು ಮಾಜಿ ಶಾಸಕ ರೇಣುಕಾಚಾರ್ಯ ಸೇರಿ ಒಂದಷ್ಟು ನಾಯಕರು ಹೇಳುತ್ತಲೇ ಬಂದಿದ್ದರು. ರೇಣುಕಾ ಬಹಿರಂಗ ಹೇಳಿಕೆ ನೀಡುತ್ತಿದ್ದುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದ್ದುದಲ್ಲದೆ, ಬಿಜೆಪಿಯಲ್ಲಿ ಲಿಂಗಾಯತರಿಗೇ ನೆಲೆ ಇಲ್ಲ ಎನ್ನುವ ಸಂದೇಶವೂ ಸಾಮಾನ್ಯ ಜನರತ್ತ ಹೋಗಿತ್ತು. ರಾಜ್ಯ ಬಿಜೆಪಿಯಲ್ಲಿ ಸಂತೋಷ್ ಮತ್ತು ಯಡಿಯೂರಪ್ಪ ಬಣದ ತಿಕ್ಕಾಟ, ಯಡಿಯೂರಪ್ಪ ಅವರನ್ನು ಪ್ರವಾಸ ಹೋಗಿ ಎಂದರೂ ಅವರಿಗೆ ಸಹಕರಿಸದೆ ರಾಜ್ಯ ಬಿಜೆಪಿ ನಿರ್ಲಕ್ಷ್ಯ ತಾಳುತ್ತಿರುವುದು, ಯಡಿಯೂರಪ್ಪ ಸೈಲಂಟ್ ಆದಲ್ಲಿ ಲೋಕಸಭೆ ಚುನಾವಣೆಯಲ್ಲೂ ಸೋಲಾಗಬಹುದು ಅನ್ನುವ ಭಯ, ಇವೆಲ್ಲ ಕಾರಣದಿಂದ ಸಂತೋಷ್ ಹಿಡಿತದಲ್ಲಿರುವ ರಾಜ್ಯ ಬಿಜೆಪಿ ಹೊಣೆಯನ್ನು ಯುವ ನಾಯಕನಿಗೆ ವಹಿಸಿ ಪಕ್ಷದ ನಾಯಕತ್ವವನ್ನು ಹೊಸ ತಲೆಮಾರಿನತ್ತ ಹೊರಳುವಂತೆ ಮಾಡುವ ದೂರಗಾಮಿ ಚಿಂತನೆ ಇದರ ಹಿಂದಿದೆ.

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಉಪಾಧ್ಯಕ್ಷನಾಗಿ ಸಂಘಟನಾ ಚಾತುರ್ಯ ಮೆರೆದಿದ್ದ ವಿಜಯೇಂದ್ರ ದೆಹಲಿ ನಾಯಕರ ಕಣ್ಣಿಗೆ ಬಿದ್ದಿದ್ದು ಇದು ಮೊದಲೇನಲ್ಲ. ಈ ಹಿಂದೆ ತುಮಕೂರಿನಲ್ಲಿ ಶಿರಾ ಉಪ ಚುನಾವಣೆ ಗೆಲ್ಲುವುದೇ ಅಸಾಧ್ಯ ಎನ್ನುವ ಮಾತಿದ್ದರೂ, ವಿಜಯೇಂದ್ರನ ತಂತ್ರಗಾರಿಕೆ ಅಲ್ಲಿ ಫಲ ಕೊಟ್ಟಿತ್ತು. ಮೈಸೂರು ಭಾಗದಲ್ಲಿಯೂ ವಿಜಯೇಂದ್ರ ಸಾಕಷ್ಟು ಸಂಘಟನಾ ಕೌಶಲ್ಯ ಹೊಂದಿರುವುದು, ಮಂಡ್ಯದಲ್ಲಿ ಕೆಆರ್ ಪೇಟೆ ಉಪ ಚುನಾವಣೆಯಲ್ಲಿ ಸಾಬೀತಾಗಿತ್ತು. ಉತ್ತರ ಕರ್ನಾಟಕದಲ್ಲಿಯೂ ಯಡಿಯೂರಪ್ಪ ಪುತ್ರ ಎನ್ನುವ ನೆಲೆಯಲ್ಲಿ ಚಾರ್ಮ್ ಹೊಂದಿರುವುದಲ್ಲದೆ, ಸಂಘಟನಾ ಚತುರ, ಯುವ ಕಾರ್ಯಕರ್ತರನ್ನು ಸೆಳೆಯುವ ಸಾಮರ್ಥ್ಯ ಇದೆಯೆಂಬ ಕಾರಣಕ್ಕೆ ದೆಹಲಿ ನಾಯಕರು ಕಡೆಗೂ ವಿಜಯೇಂದ್ರನಿಗೆ ಪಟ್ಟ ಕಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಎದುರಿಸಲು ಈ ರೀತಿಯ ನಿರ್ಧಾರ ಹೈಕಮಾಂಡ್ ಪಾಲಿಗೆ ಅನಿವಾರ್ಯವೂ ಆಗಿತ್ತು. ಯಾಕಂದ್ರೆ, ಪಕ್ಷದಿಂದ ಹೊರ ನಡೆಯುತ್ತಿರುವ ಶಾಸಕರನ್ನು ಮತ್ತು ಲಿಂಗಾಯತ ಓಟ್ ಬ್ಯಾಂಕ್ ಹಿಡಿದಿಡುವುದಕ್ಕೆ ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ. ಈಗ ಮಗನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಮೂಲಕ ಸ್ವತಃ ಯಡಿಯೂರಪ್ಪ ಅವರಿಗೇ ಮಣೆ ಹಾಕಿದಂತಾಗಿದೆ.

Yediyurappa to play 'opposition leader' outside Vidhana Soudha- The New  Indian Express

We didn't work like PM Modi, says BJP leader CT Ravi on Karnataka poll loss  | Bengaluru - Hindustan Times

ವಿಜಯೇಂದ್ರ ಆಯ್ಕೆ ಕೆಲವರಿಗೆ ಹಿಡಿಸಿದ ಹಾಗಿಲ್ಲ. ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಅರವಿಂದ ಬೆಲ್ಲದ, ಸಂತೋಷ್ ಬಣದಲ್ಲಿ ಗುರುತಿಸಿರುವ ಸಿಟಿ ರವಿ, ಅಸಹನೆ ರೀತಿಯ ಮಾತುಗಳನ್ನಾಡಿದ್ದಾರೆ. ಈ ಹಿಂದೆ ಒಕ್ಕಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತೆ, ಹಾಗಾದಲ್ಲಿ ಶೋಭಾ ಅಥವಾ ಸಿಟಿ ರವಿಯೇ ಆಯ್ಕೆ ಅನ್ನುವ ಮಾತು ಕೇಳಿಬಂದಿತ್ತು. ಎರಡು ತಿಂಗಳ ಹಿಂದೆ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ತೆರವುಗೊಂಡ ವೇಳೆ ಸಿಟಿ ರವಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಲೋಕಸಭೆ ಚುನಾವಣೆಯೇ ಬಿಜೆಪಿಗೆ ದೊಡ್ಡ ಗುರಿ, ಯಡಿಯೂರಪ್ಪ ಅವರೇ ಸಾರಥಿ ಅನ್ನುವ ದೂರದೃಷ್ಟಿಯಿಂದ ವಿಜಯೇಂದ್ರ ಅವರನ್ನೇ ಆಯ್ಕೆ ಮಾಡಲಾಗಿದೆ. ಲೆಕ್ಕಾಚಾರ ಪ್ರಕಾರ, ರಾಜ್ಯದಲ್ಲಿ 20 ವರ್ಷದಿಂದ 45 ವರ್ಷದ ಮತದಾರರೇ ಅತ್ಯಧಿಕ ಇದ್ದು ಯುವ ಸಮೂಹವನ್ನು ಸೆಳೆಯಲು ಯುವ ಮುಖವೇ ಅಗತ್ಯ ಅನ್ನುವುದನ್ನೂ ಬಿಜೆಪಿ ತೋರಿಸಿಕೊಟ್ಟಿದೆ.

Vijayendra Yediyurappa is new BJP state president, No other option in Party for Lingayath community. After quitting electoral politics, BS Yediyurappa had widely campaigned for the BJP across the state during the assembly election to help the saffron party to retain power. He also campaigned across the Shikaripura for his son and urged the voters of his constituency to help BY Vijayendra to win with a huge majority.