Bangalore Kambala, CM Siddaramaiah, Tulu Language: ಬೆಂಗಳೂರು ಕಂಬಳದಲ್ಲಿ ಮಾರ್ದನಿಸಿದ ತುಳು ಅಧಿಕೃತ ಭಾಷೆ ; ಹಿಂದೆ ನಿಮ್ಮವರೇ ಸಚಿವರಿದ್ದರಲ್ವಾ..? ಯಾಕೆ ಮಾಡಿಲ್ಲ..! ನಾವು ಮಾಡುತ್ತೇವೆಂದ ಸಿದ್ದರಾಮಯ್ಯ 

25-11-23 10:28 pm       Bangalore Correspondent   ಕರ್ನಾಟಕ

ಬೆಂಗಳೂರು ಕಂಬಳದಲ್ಲಿ ತುಳು ಅಧಿಕೃತ ಭಾಷೆಯಾಗಬೇಕೆಂಬ ಧ್ವನಿ ನಾಲ್ಕೂರುಗಳಿಗೆ ಮಾರ್ದನಿಸಿದೆ. ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತುಳು ಭಾಷಿಗರ ಬಗ್ಗೆ ಅಭಿಮಾನ ತೋರಿದ್ದಾರೆ.

ಬೆಂಗಳೂರು, ನ.25: ಬೆಂಗಳೂರು ಕಂಬಳದಲ್ಲಿ ತುಳು ಅಧಿಕೃತ ಭಾಷೆಯಾಗಬೇಕೆಂಬ ಧ್ವನಿ ನಾಲ್ಕೂರುಗಳಿಗೆ ಮಾರ್ದನಿಸಿದೆ. ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತುಳು ಭಾಷಿಗರ ಬಗ್ಗೆ ಅಭಿಮಾನ ತೋರಿದ್ದಾರೆ. ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿಸುವ ವಿಚಾರದಲ್ಲಿ ನಿಮ್ಮ ಭಾಗದವರೇ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿದ್ದರಲ್ವಾ.. ಯಾಕೆ ಮಾಡಿಲ್ಲ ಎಂದು ಕುಹುಕದ ಪ್ರಶ್ನೆಯೆತ್ತಿ ನಾವು ಆ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. 

ಉಡುಪಿ, ಮಂಗಳೂರಿನ ಇಬ್ಬರು ಎಲ್ಲೇ ಸಿಗಲಿ ಅವರು ತುಳುವಿನಲ್ಲೇ ಮಾತಾಡುತ್ತಾರೆ. ನಡುವೆ ನಾವಿದ್ದರೆ ಅವರ ಮುಖ ನೋಡುವ ಸ್ಥಿತಿ. ಬಿ.ಆರ್ ಶೆಟ್ಟಿ ಹಿಂದೆ ದುಬೈನಲ್ಲಿದ್ದರೂ ಕರಾವಳಿಯ ಯಾರೇ ಸಿಕ್ಕಿದರೂ ಅವರಲ್ಲಿ ತುಳುವಲ್ಲೇ ಮಾತಾಡುತ್ತಿದ್ದರು ಅಂತ ವೇದಿಕೆಯಲ್ಲಿದ್ದ ಶೆಟ್ಟರ ಮುಖ ನೋಡಿ ನಕ್ಕರು. ಆ ಭಾಗದವರಿಗೆ ತುಳು ಭಾಷೆ ಅಂದ್ರೆ ಅಷ್ಟೊಂದು ಪ್ರೀತಿ. ಈ ಭಾಷೆಗೆ ಸ್ವಂತ ಲಿಪಿ ಇಲ್ಲ ತಾನೇ ಎಂದು ಕೇಳಿದಾಗ, ಸೇರಿದ್ದ ಜನರು ಇದೆ, ಇದೆ ಎಂದು ಉದ್ಘೋಷ ಹಾಕಿದರು. ತುಳು ಲಿಪಿ ಇದೆಯಾ.. ಓಕೆ.. ತುಳುವನ್ನು ಹೆಚ್ಚುವರಿ ಭಾಷೆ ಮಾಡಬೇಕೆಂದು ಅಶೋಕ್ ರೈ ವಿಧಾನಸಭೆಯಲ್ಲಿ ಮಾತಾಡಿದ್ರು. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರು ಉತ್ತರ ಕೊಟ್ಟಿದ್ರು. ಹಿಂದೆ ನಿಮ್ಮ ಭಾಗದವರೇ ಈ ಖಾತೆಯ ಸಚಿವರಾಗಿದ್ದರು. ಆಗ ಸುಲಭದಲ್ಲಿ ಮಾಡಬಹುದಿತ್ತು. ಮಾಡಿಲ್ಲ ತಾನೇ..? 

ನಾವು ಆ ಪ್ರಯತ್ನ ಮಾಡುತ್ತೇವೆ. ತುಳುವನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾಡುತ್ತೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೆಸರೆತ್ತದೆ ಕಾಲೆಳೆಯುತ್ತ ವ್ಯಂಗ್ಯವಾಡಿದರು. ಅಲ್ಲದೆ, ಕಂಬಳಕ್ಕೆ ಇಷ್ಟೊಂದು ಜನ ಸೇರುತ್ತಾರೆಂದು ಗೊತ್ತಿರಲಿಲ್ಲ. ಬೆಂಗಳೂರಿನಲ್ಲಿ ಕಂಬಳ ಮಾಡಿದ್ದಕ್ಕಾಗಿ ಅಶೋಕ್ ರೈಗೆ ಶಹಭಾಸ್ ಹೇಳುತ್ತೇನೆ. ಪ್ರತಿ ವರ್ಷ ಇಲ್ಲಿ ಕಂಬಳ ಮಾಡಬೇಕೆಂದು ಆಶಿಸುತ್ತೇನೆ, ಇದೊಂದು ದೊಡ್ಡ ಈವೆಂಟ್ ಎಂದು ಹೇಳಿ ಮೆಚ್ಚುಗೆ ಸೂಚಿಸಿದರು. 

ಕಂಬಳ ಸಮಾರಂಭದಲ್ಲಿ ಕರಾವಳಿಯ ಜನಪ್ರತಿನಿಧಿಗಳು ಹೆಚ್ಚಿನವರು ತಾವೂ ತುಳುವರೆಂದು ಹೇಳಿಕೊಳ್ಳಲು ತುಳು ಭಾಷೆಯಲ್ಲೇ ಮಾತನಾಡಿದ್ರು. ಯುಟಿ ಖಾದರ್ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಭಾಗವಹಿಸಿ ತುಳುವಿನಲ್ಲಿ ಮಾತಾಡಿದ್ರು. ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲಿದ್ದಾಗ ಕಂಬಳದ ವಿಶೇಷ ಬಗ್ಗೆ ಖಾದರ್ ಅವರೇ ಹೇಳುತ್ತಿದ್ದರು.

Bangalore Kambala, CM Siddaramaiah assures of making Tulu as official language.