Assault on Chikmagalur lawyer, Police Protest: ಚಿಕ್ಕಮಗಳೂರಿನಲ್ಲಿ ಪೊಲೀಸರ ಹೈಡ್ರಾಮಾ, ಅಹೋರಾತ್ರಿ ಧರಣಿ, ಒಬ್ಬ ಪೊಲೀಸ್ ಸಿಬಂದಿ ಬಂಧನ, ವಕೀಲರ ವಿರುದ್ಧ ಮೂರು ಎಫ್ಐಆರ್ ದಾಖಲು, ತಾರಕಕ್ಕೇರಿದ ಪೊಲೀಸ್- ಲಾಯರ್ ಜಟಾಪಟಿ

03-12-23 03:44 pm       HK News Desk   ಕರ್ನಾಟಕ

ಯುವ ವಕೀಲನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪಿಎಸ್ಐ ಸೇರಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿ ಪೊಲೀಸರ ಕುಟುಂಬಸ್ಥರು ಶನಿವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ.

ಚಿಕ್ಕಮಗಳೂರು, ಡಿ.3: ಯುವ ವಕೀಲನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪಿಎಸ್ಐ ಸೇರಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿ ಪೊಲೀಸರ ಕುಟುಂಬಸ್ಥರು ಶನಿವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಕೆಲಸ ತ್ಯಜಿಸಿ ಚಿಕ್ಕಮಗಳೂರು- ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸಿದ್ದಾರೆ.

ನಡುರಾತ್ರಿ ವೇಳೆಗೆ ಹನುಮಂತಪ್ಪ ವೃತ್ತದಲ್ಲಿ ಸೇರಿದ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು, ನಾವು ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಎಸ್ಪಿ ವಿಕ್ರಮ್ ಅಮಟೆ ಬಳಿ ಪೊಲೀಸರು ತಮ್ಮ ನೋವು ತೋಡಿಕೊಂಡಿದ್ದಾರೆ. ಪೊಲೀಸರ ಪ್ರತಿಭಟನೆ ಮಧ್ಯೆಯೇ ಗುರುಪ್ರಸಾದ್ ಎಂಬ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಆಗಮಿಸಿ ಮನವೊಲಿಕೆ ಮಾಡಿದರೂ ಪೊಲೀಸರು ಕೇಳಲಿಲ್ಲ.  

ರಾತ್ರಿ 9 ಗಂಟೆಯಿಂದ ಶುರುವಾದ ಧರಣಿಗೆ ನಿರಂತರವಾಗಿ ಜಿಲ್ಲೆಯ ನಾನಾ ಕಡೆಯಿಂದ ಪೊಲೀಸರು ಆಗಮಿಸಿ ಬೆಂಬಲ ನೀಡಿದ್ದಾರೆ. ಎಸ್ಪಿ, ಐಜಿಪಿಯ ಮನವೊಲಿಕೆಗೆ ಬಗ್ಗದ ಪೊಲೀಸ್ ಸಿಬಂದಿ, ತಮಗೆ ನ್ಯಾಯ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ವಕೀಲರ ಸಂಘದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಪೊಲೀಸರ ವಿರುದ್ಧ ಕ್ರಮ ಜರುಗಿಸದಂತೆ ನೋಡಿಕೊಳ್ಳಬೇಕು ಎಂದು ಪೊಲೀಸರ ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಶೈಲೇಂದ್ರ, ಆರೋಪಿತ ಗುರುಪ್ರಸಾದ್ ಎಂಬ ಪೊಲೀಸ್ ಪೇದೆಯನ್ನು ಬಂಧಿಸಿ ಜಡ್ಜ್ ಮನೆಯಲ್ಲಿ ಹಾಜರುಪಡಿಸಿದ್ದಾರೆ.

ರಾತ್ರೋರಾತ್ರಿ ಹೈಡ್ರಾಮಾ ಆಗುತ್ತಿದ್ದಂತೆ ಪೊಲೀಸರು ಕ್ರುದ್ಧರಾಗಿ, ರಾಷ್ಟ್ರೀಯ ಹೆದ್ದಾರಿ ಕಡೂರು- ಮಂಗಳೂರು ರಸ್ತೆಯಲ್ಲಿ ಮಲಗಿ ಧರಣಿ ನಡೆಸಿದ್ದಾರೆ. ಪೊಲೀಸ್ ಸಿಬಂದಿ ಬಂಧನ ಕ್ರಮವನ್ನು ಖಂಡಿಸಿದ್ದಾರೆ. ಇದಲ್ಲದೆ, ಪೊಲೀಸರ ಬಂಧನ ಖಂಡಿಸಿ ರಾಜ್ಯಾದ್ಯಂತ ಪೊಲೀಸ್ ಸಿಬಂದಿ ಧರಣಿ ನಡೆಸಬೇಕೆಂದು ಕರೆ ನೀಡಿದ್ದಾರೆ. ಆರೋಪಿತ ಪೊಲೀಸರನ್ನು ಬಂಧಿಸಿದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಚಿಕ್ಕಮಗಳೂರು ಪೊಲೀಸರು ಬೆದರಿಕೆ ಹಾಕಿದ್ದಾರೆ. ಇದೇ ವೇಳೆ, ಪ್ರತಿಭಟನೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ರಸ್ತೆಯಲ್ಲಿ ಮಲಗಿದ ಪೊಲೀಸರನ್ನು ಎಬ್ಬಿಸಲು ಮುಂದಾದ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆಯೂ ನಡೆಯಿತು. ನೂರಾರು ಪೊಲೀಸರ ಕುಟುಂಬಸ್ಥರು,. ಒಂದು ಸಾವಿರಕ್ಕೂ ಹೆಚ್ಚು ಸಿಬಂದಿ ಸೇರಿ ಹನುಮಂತಪ್ಪ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮಂಜು ಬೀಳುತ್ತಿದ್ದ ಕಾರಣ ರಸ್ತೆಯಲ್ಲೇ ಟಾರ್ಪಲ್ ಹಾಕಿ ಪೊಲೀಸರು ಮಲಗಿದ್ದರು.

ಪೊಲೀಸ್ ಸಿಬಂದಿಯ ಹೋರಾಟಕ್ಕೆ ಮಣಿದ ಮೇಲಧಿಕಾರಿಗಳು ಬೆಳಗ್ಗಿನ ವೇಳೆಗೆ, ವಕೀಲರ ವಿರುದ್ಧವೂ ಮೂರು ಎಫ್ಐಆರ್ ದಾಖಲು ಮಾಡಿದ್ದಾರೆ. ಹಲ್ಲೆಗೀಡಾದ ವಕೀಲ ಪ್ರೀತಮ್ ವಿರುದ್ಧ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಎಫ್ಐಆರ್ ದಾಖಲಿಸಿದ್ದಾರೆ. ಗುರುಪ್ರಸಾದ್ ನೀಡಿದ ದೂರಿನಂತೆ ಎಫ್ಐಆರ್ ದಾಖಲಾಗಿದೆ. ಪ್ರೀತಮ್ ಕಪಾಳಕ್ಕೆ ಹೊಡೆದಿದ್ದಾಗಿ ದೂರಿನಲ್ಲಿ ತಿಳಿಸಿದ್ದು, ಅದಕ್ಕಾಗಿ ತಿರುಗಿ ಹೊಡೆದಿದ್ದಾಗಿ ಗುರುಪ್ರಸಾದ್ ತಿಳಿಸಿದ್ದಾರೆ.

Assault on Chikmagalur lawyer by police, police stage protest opposing suspension of 6 police staffs.