Bangalore, Chief Minister Siddaramaiah, Yuva Nidhi: 'ಯುವ ನಿಧಿ' ಐದನೇ ಗ್ಯಾರಂಟಿ ನೋಂದಣಿಗೆ ಚಾಲನೆ ; ಪದವಿ, ಡಿಪ್ಲೊಮಾ ಆದವರಿಗೆ ಜ.12ರಂದು ಸಿಗಲಿದೆ ಹಣ, ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ ಆಗಿಲ್ಲ ಎಂದ ಸಿದ್ದರಾಮಯ್ಯ 

26-12-23 11:01 pm       Bangalore Correspondent   ಕರ್ನಾಟಕ

ಕಾಂಗ್ರೆಸ್‌ ಸರ್ಕಾರದ ಬಹು ನಿರೀಕ್ಷೆಯ ಐದನೇ ಗ್ಯಾರಂಟಿ ಯೋಜನೆ 'ಯುವ ನಿಧಿ' ನೋಂದಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಚಾಲನೆ ನೀಡಿದರು.

ಬೆಂಗಳೂರು, ಡಿ.26: ಕಾಂಗ್ರೆಸ್‌ ಸರ್ಕಾರದ ಬಹು ನಿರೀಕ್ಷೆಯ ಐದನೇ ಗ್ಯಾರಂಟಿ ಯೋಜನೆ 'ಯುವ ನಿಧಿ' ನೋಂದಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನೋಂದಣಿ ಮಾಡಿಸಿಕೊಂಡವರಿಗೆ ಜನವರಿ 12ರ ವಿವೇಕಾನಂದ ಜಯಂತಿಯ ದಿನ ಹಣ ಜಮಾ ಆಗಲಿದೆ. ಅದೇ ದಿನ ಉದ್ಘಾಟನಾ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ಡಿಪ್ಲೊಮಾ ಇಲ್ಲವೇ ಪದವಿ ಪೂರೈಸಿದ್ದು, ಇನ್ನೂ ಯಾವುದೇ ಉದ್ಯೋಗ ಸಿಗದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಪ್ಲೋಮಾ ಹೋಲ್ಡರ್‌ಗಳಿಗೆ ಮುಂದಿನ ಎರಡು ವರ್ಷ ತಿಂಗಳಿಗೆ 1500 ರೂ. ಹಾಗೂ ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ. ಯಾವುದೇ ಉದ್ಯೋಗ ಸಿಕ್ಕರೆ ತಕ್ಷಣ ಯೋಜನೆ ಸ್ಥಗಿತಗೊಳಿಸಲು ಅರ್ಜಿ ಸಲ್ಲಿಸಬೇಕು ಎಂದು ಮಾನದಂಡದಲ್ಲಿ ಸೂಚಿಸಲಾಗಿದೆ. 

ನರೇಂದ್ರ ಮೋದಿಯವರು ಕಾಂಗ್ರೆಸ್ ಗ್ಯಾರಂಟಿ ಜಾರಿ ಮಾಡೋಕ್ಕಾಗಲ್ಲ ಅಂದಿದ್ದರು. ಗ್ಯಾರಂಟಿ ಜಾರಿ ಮಾಡಿದ್ರೆ ಕರ್ನಾಟಕ ದಿವಾಳಿಯಾಗುತ್ತೆ ಎಂದು ರಾಜಸ್ಥಾನದಲ್ಲಿ ಹೇಳಿಕೆ ನೀಡಿದ್ದರು. 12 ವರ್ಷ ಮುಖ್ಯಮಂತ್ರಿಯಾಗಿ, ಹತ್ತು ವರ್ಷ ಪ್ರಧಾನ ಮಂತ್ರಿ ಆಗಿದ್ದವರು ಈ ಹೇಳಿಕೆ ನೀಡಿದ್ದರು. ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ರಾಜ್ಯ ದಿವಾಳಿ ಆಗಿಲ್ಲ ಎಂದು ಹೇಳಬಯಸುತ್ತೇನೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ಸವಾಲು ಹಾಕಿದರು. ನಾವು ಈ ವರ್ಷ ಗ್ಯಾರಂಟಿಗಾಗಿ 39 ಸಾವಿರ ಕೋಟಿ ನೀಡಿದ್ದೇವೆ. ಉಚಿತ ಯೋಜನೆ ನೀಡಿದ ಮೇಲೂ ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಯುವ ನಿಧಿಯಲ್ಲಿ 5 ಲಕ್ಷದ 29 ಸಾವಿರ ಪದವೀಧರರು ಹಾಗೂ ಡಿಪ್ಲೊಮಾ ಹೋಲ್ಡರ್‌ಗಳಿಗೆ ಯೋಜನೆ ಪಡೆಯಲು ಅವಕಾಶವಿದೆ. ಮಾರ್ಚ್ ಕೊನೆ ವರೆಗೆ 250 ಕೋಟಿ ಖರ್ಚು ಮಾಡಲಿದ್ದೇವೆ ಎಂದು ವಿವರಿಸಿದರು.

Karnataka Chief Minister Siddaramaiah on December 26 launched the registration of the fifth and last poll guarantee ‘Yuva Nidhi’ in Bengaluru offering unemployment assistance to graduates and diploma holders.