ಸಂಪುಟ ಕಗ್ಗಂಟಿನ ಮಧ್ಯೆ ಕೋರ್ ಕಮಿಟಿ ಸಭೆ ; ಉರಿವ ಬೆಂಕಿಗೆ ತುಪ್ಪ ಸುರೀತಾರಾ ಉಸ್ತುವಾರಿ !?

04-12-20 02:43 pm       Headline Karnataka News Network   ಕರ್ನಾಟಕ

ರಾಜ್ಯದ ನೂತನ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಿಎಂ ಯಡಿಯೂರಪ್ಪ ಸೇರಿ 14 ಮಂದಿ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಬೆಂಗಳೂರು, ಡಿ.4: ಸಂಪುಟ ವಿಸ್ತರಣೆ ವಿಚಾರ ಕಗ್ಗಂಟಾಗಿರುವ ನಡುವೆಯೇ ಇಂದು ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ರಾಜ್ಯದ ನೂತನ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ 14 ಮಂದಿ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಒಂದೆಡೆ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲೇಬೇಕೆಂದು ಒಂದು ಬಣ ಪಟ್ಟು ಹಿಡಿದಿದ್ದರೆ, ಯಡಿಯೂರಪ್ಪ ಅಂಡ್ ಟೀಂ ಸಿಎಂ ಬದಲಾವಣೆಗೆ ಸುತರಾಂ ತಯಾರಿಲ್ಲ. ಇದೇ ಕಾರಣಕ್ಕೆ ಯಡಿಯೂರಪ್ಪ ಜೊತೆಗಿರುವ ಮಂದಿ ಪದೇ ಪದೇ ಸಿಎಂ ಬದಲಾವಣೆ ಸಾಧ್ಯವೇ ಇಲ್ಲ ಎಂಬ ಮಾತನ್ನು ಹೇಳುತ್ತ ಬಂದಿದ್ದಾರೆ. ಇದೇ ವಿಷಯದಲ್ಲಿ ಸಂಪುಟ ವಿಸ್ತರಣೆ ವಿಚಾರದಲ್ಲಿ ಕಂಡುಬಂದ ಮೂಲ ಬಿಜೆಪಿಗರು ಮತ್ತು ವಲಸಿಗರ ನಡುವಿನ ಪೈಪೋಟಿ ರಾಜ್ಯ ಉಸ್ತುವಾರಿಯ ಗಮನಕ್ಕೂ ಬಂದಿದ್ದು ಹೀಗಾಗಿ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.‌

ಬೆಳಗಾವಿಯ ಖಾಸಗಿ ಹೊಟೇಲಿನಲ್ಲಿ ಇಂದು ಸಂಜೆ 7.30ಕ್ಕೆ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು ನಾಳೆ ಒಂದು ದಿನದ ಪಕ್ಷದ ರಾಜ್ಯ ಕಾರ್ಯಕಾರಿಣಿಯೂ ನಡೆಯಲಿದೆ. ಕಳೆದ ಕೆಲವು ಸಮಯದಿಂದ ಪಕ್ಷ ಮತ್ತು ಸರ್ಕಾರದ ನಡುವೆ ಹಲವು ವಿಚಾರದಲ್ಲಿ ಸಮನ್ವಯದ ಕೊರತೆ ಎದುರಾಗಿದೆ. ಇದೇ ಹಿನ್ನೆಲೆಯಲ್ಲಿ ನಿಗಮ ಮಂಡಳಿಗಳಿಗೆ ಸಿಎಂ ಯಡಿಯೂರಪ್ಪ ಏಕಾಏಕಿ ನೇಮಕಾತಿ ನಡೆಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ಅಥವಾ ರಾಜ್ಯಾಧ್ಯಕ್ಷರ ಅಭಿಪ್ರಾಯವನ್ನೂ ಕೇಳಿರಲಿಲ್ಲ. ಸಿಎಂ ಬದಲಾವಣೆ ವಿಚಾರ ರಾಜ್ಯದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದ ಕೂಡಲೇ ಸಿಎಂ ಯಡಿಯೂರಪ್ಪ ವರಿಷ್ಠರಿಗೇ ಸಡ್ಡು ಹೊಡೆಯಲು ಮುಂದಾಗಿದ್ದರು. ಅದರ ಪ್ರತೀಕ ಎಂಬಂತೆ ತಮಗೆ ಆಪ್ತರು ಎನಿಸಿದವರಿಗೆ ನಿಗಮದಲ್ಲಿ ಸ್ಥಾನಗಳಿಗೆ ನಿಯೋಜಿಸಿ ನೇಮಕಾತಿ ಮಾಡಿದ್ದರು. 

ಇದಕ್ಕೂ ಮುನ್ನ ರಾಜ್ಯ ಪದಾಧಿಕಾರಿಗಳ ನೇಮಕಾತಿಯೂ ನಡೆದಿತ್ತು. ಆ ಸಂದರ್ಭದಲ್ಲಿ ಯಡಿಯೂರಪ್ಪ ವಿರೋಧಿ ಬಣವೇ ಮೇಲುಗೈ ಸಾಧಿಸಿತ್ತು. ಈ ವಿಚಾರ ಸರಕಾರದ ಪ್ರಮುಖರು ಮತ್ತು ಪಕ್ಷದ ಪ್ರಮುಖರಲ್ಲಿ ವೈಮನಸ್ಸಿಗೆ ಕಾರಣವಾಗಿತ್ತು. 

ಇನ್ನು ಸದ್ಯದಲ್ಲೇ ಬೀದರ್ ಜಿಲ್ಲೆಯ ಮಸ್ಕಿ,‌ ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆ ಎದುರಾಗಲಿದ್ದು ಅಭ್ಯರ್ಥಿ ಆಯ್ಕೆಯ ಬಗ್ಗೆಯೂ ಕೋರ್ ಕಮಿಟಿಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಕಳೆದ ಬಾರಿ ಮಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ಮತ್ತು ಕಾರ್ಯಕಾರಿಣಿ ನಡೆದಿತ್ತು. ಮಂಗಳೂರಿನ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭಾಗವಹಿಸುವರು ಎಂದು ಹೇಳಿದ್ದರೂ, ಕೊನೆ ಕ್ಷಣದಲ್ಲಿ ಗೈರಾಗಿದ್ದರು.

ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಮತ್ತು ಕೆಲವು ಸಚಿವರು ಹಾಗು ಪಕ್ಷದ ಪ್ರಮುಖರು ಮಾತ್ರ ಪಾಲ್ಗೊಂಡಿದ್ದರು. ಆದರೆ, ಈ ಬಾರಿ ಪಕ್ಷದ ಉಸ್ತುವಾರಿಯಾಗಿ ಅರುಣ್ ಸಿಂಗ್ ಅವರನ್ನು ಹೈಕಮಾಂಡ್ ನೇಮಕ ಮಾಡಿದೆ. ಹೀಗಾಗಿ ಈ ಬಾರಿಯ ಕೋರ್ ಕಮಿಟಿ ಸಭೆಗೆ ಹೆಚ್ಚು ಮಹತ್ವ ಬಂದಿದೆ. ಮೇಲ್ನೋಟಕ್ಕೆ ರಾಜ್ಯ ಸರಕಾರದ ಬಗ್ಗೆ ಉಸ್ತುವಾರಿ ಅರುಣ್ ಸಿಂಗ್ ತೃಪ್ತಿ ಇದೆ ಎಂದಿದ್ದಾರಾದ್ರೂ ಒಳಗಿನ ಗುಟ್ಟು ತಿಳಿದವರಿಲ್ಲ. ಎರಡು ಬಣಗಳ ತಿಕ್ಕಾಟಕ್ಕೆ ಅಂತ್ಯ ಹಾಡುವರೇ ಅಥವಾ ಉರಿವ ಬೆಂಕಿಗೆ ತುಪ್ಪ ಸುರಿಯುತ್ತಾರೆಯೇ ಅನ್ನೋದು ಇಂದೇ ನಿರ್ಧಾರ ಆಗಲಿದೆ.