IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ, ಸುಲಿಗೆ ! ಖಾಕಿ ಶಿಕ್ಷಣಾರ್ಥಿಗಳಿಂದ ಹಿರಿಯ ಅಧಿಕಾರಿಗಳ ವಸೂಲಿ, ಎಸ್ಐ, ಇಬ್ಬರು ಕಾನ್ಸ್ ಟೇಬಲ್ ವಿರುದ್ಧ ಕ್ರಿಮಿನಲ್ ಕೇಸು, ಲಂಚಕೋರರ ಬೇಟೆಗಿಳಿದ ಎಡಿಜಿಪಿ ಅಲೋಕ್ ಕುಮಾರ್

14-08-25 01:48 pm       Bangalore Correspondent   ಕರ್ನಾಟಕ

ಭ್ರಷ್ಟಾಚಾರ, ಲಂಚದ ವಿಚಾರದಲ್ಲಿ ಪೊಲೀಸರಿಗೆ ಸೇವೆಗೆ ಸೇರುವವರಿಗೆ ಪಾಠ ಹೇಳಬೇಕಿದ್ದವರೇ ಇಲ್ಲಿ ಲಂಚಕ್ಕೆ ಕೈಯ್ಯೊಡ್ಡಿ ಬಿಕ್ನಾಸಿ ಕೆಲಸ ಮಾಡಿದ್ದಾರೆ. ಬೆಂಗಳೂರು ಮತ್ತು ಚಿತ್ರದುರ್ಗದ ಪೊಲೀಸ್ ತರಬೇತಿ ಶಾಲೆಗಳಲ್ಲಿ ಶಿಕ್ಷಣಾರ್ಥಿ ಪೊಲೀಸರಿಂದಲೇ ಹಿರಿಯ ಅಧಿಕಾರಿಗಳು ಹಣ ಸುಲಿಗೆ ಮಾಡಿರುವ ಕೃತ್ಯ ಬಯಲಿಗೆ ಬಂದಿದೆ. 

ಬೆಂಗಳೂರು, ಆ.14 : ಭ್ರಷ್ಟಾಚಾರ, ಲಂಚದ ವಿಚಾರದಲ್ಲಿ ಪೊಲೀಸರಿಗೆ ಸೇವೆಗೆ ಸೇರುವವರಿಗೆ ಪಾಠ ಹೇಳಬೇಕಿದ್ದವರೇ ಇಲ್ಲಿ ಲಂಚಕ್ಕೆ ಕೈಯ್ಯೊಡ್ಡಿ ಬಿಕ್ನಾಸಿ ಕೆಲಸ ಮಾಡಿದ್ದಾರೆ. ಬೆಂಗಳೂರು ಮತ್ತು ಚಿತ್ರದುರ್ಗದ ಪೊಲೀಸ್ ತರಬೇತಿ ಶಾಲೆಗಳಲ್ಲಿ ಶಿಕ್ಷಣಾರ್ಥಿ ಪೊಲೀಸರಿಂದಲೇ ಹಿರಿಯ ಅಧಿಕಾರಿಗಳು ಹಣ ಸುಲಿಗೆ ಮಾಡಿರುವ ಕೃತ್ಯ ಬಯಲಿಗೆ ಬಂದಿದೆ. 

ಪೊಲೀಸ್ ತರಬೇತಿ ಶಾಲೆಗಳಲ್ಲಿ ಅಕ್ರಮಗಳಿಗೆ ಅವಕಾಶ ಇರಬಾರದು, ನಿಯಮ ಸಡಿಲಿಕೆ ನೆಪದಲ್ಲಿ ವಸೂಲಿ ನಡೆಯಬಾರದು ಎಂದು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಈ ಶಾಲೆಗಳ ಮುಖ್ಯಸ್ಥರಿಗೆ ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ 12ಕ್ಕೂ ಹೆಚ್ಚು ಪೊಲೀಸ್ ತರಬೇತಿ ಶಾಲೆಗಳಲ್ಲಿ ಪ್ರತ್ಯೇಕ ತಪಾಸಣೆ ನಡೆಸಿದ್ದು ಲಂಚಕೋರರ ಬೇಟೆ ಆರಂಭಿಸಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರಿನ ಥಣಿಸಂದ್ರ ಹಾಗೂ ಚಿತ್ರದುರ್ಗದ ಐಮಂಗಲ ತರಬೇತಿ ಶಾಲೆಗಳಲ್ಲಿ ಲಂಚ ಪಡೆದಿದ್ದ ಮೂವರು ಪೊಲೀಸ್ ಅಧಿಕಾರಿಗಳು ಸಿಕ್ಕಿಬಿದ್ದಿದ್ದು, ಎಫ್ಐಆರ್ ಮಾಡಿಸಬೇಕಾದವರೇ ಕಾನೂನು ಉರುಳಿಗೆ ಸಿಲುಕಿದ್ದಾರೆ.

ಥಣಿಸಂದ್ರ ತರಬೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಶಸ್ತ್ರ ಪೊಲೀಸ್ ಸಬ್‌ ಇನ್ಸ್ ಪೆಕ್ಟರ್ (ಎಆರ್‌ ಎಸ್‌ಐ) ಮಂಜ್ಯಾ ನಾಯ್ಕ್, ತನ್ನ ಅಧೀನದಲ್ಲಿ ತರಬೇತಿ ಪಡೆಯುತ್ತಿದ್ದ ಮೂವರು ಪೇದೆಗಳನ್ನು ಬೆದರಿಸಿ 30,500 ರೂ. ಲಂಚ ಸ್ವೀಕರಿಸಿರುವುದು ದೃಢಪಟ್ಟಿದೆ. ಮೂವರು ಶಿಕ್ಷಣಾರ್ಥಿಗಳ ಸ್ನೇಹಿತರಿಂದ ಫೋನ್ ಪೇ ಮುಖಾಂತರ ಮಂಜ್ಯಾ ನಾಯ್ಕ ಹಣ ಸ್ವೀಕರಿಸಿದ್ದರು. ಈ ಬಗ್ಗೆ ದಾಖಲೆ ಸಮೇತ ಶಾಲೆಯ ಪ್ರಾಂಶುಪಾಲ ಎಂ. ಬಾಬು ಅವರು ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಎಆರ್‌ಎಸ್‌ಐ ಮಂಜ್ಯಾ ನಾಯ್ಕ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬರ್ತ್ ಡೇ ಪಾರ್ಟಿಗೂ ಹಣ 

ಚಿತ್ರದುರ್ಗದ ಐಮಂಗಲದ ತರಬೇತಿ ಶಾಲೆಯಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್ ಟೇಬಲ್ ಇ.ಮಹಾಲಿಂಗಪ್ಪ ಹಾಗೂ ಕಾನ್ಸ್ ಟೇಬಲ್ ರವಿ ನಾಯ್ಕ್ ಅವರ ವಿರುದ್ಧವೂ ಪ್ರಶಿಕ್ಷಣಾರ್ಥಿಗಳಿಂದ ಹಣ ಪಡೆದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ‌ಇಬ್ಬರನ್ನೂ ಈಗಾಗಲೇ ಸೇವೆಯಿಂದ ಅಮಾನತುಗೊಳಿಸಿ ಚಿತ್ರದುರ್ಗ ಎಸ್ಪಿ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ತನ್ನ ಅಧೀನದಲ್ಲಿರುವ ಪ್ರಶಿಕ್ಷಣಾರ್ಥಿಗಳಿಂದ 62 ಸಾವಿರಕ್ಕೂ ಹೆಚ್ಚು ಮೊತ್ತವನ್ನು ಮಹಾಲಿಂಗಪ್ಪ ಪಡೆದಿದ್ದರು. ಹಾಗೆಯೇ, ರವಿನಾಯ್ಕ ಕೂಡ ಬರ್ತ್ ಡೇ ಆಚರಣೆ, ಡ್ರೈಫ್ರುಟ್ಸ್ ಖರೀದಿ ಸೇರಿದಂತೆ ವಿವಿಧ ಕಾರಣಗಳಿಗೆ ಹಣ ಪಡೆದಿರುವುದರ ಕುರಿತು ಶಾಲೆಯ ಪ್ರಾಂಶುಪಾಲರು ಐಮಂಗಲ ಠಾಣೆಗೆ ದೂರು ನೀಡಿದ್ದರು.

ಪ್ರಶಿಕ್ಷಣಾರ್ಥಿಗಳು ಮೊಣಕಾಲು ನಡಿಗೆ ಸೇರಿದಂತೆ ಕೆಲವು ಕಠಿಣ ತರಬೇತಿಗಳನ್ನು ಪಡೆಯಬೇಕಾಗುತ್ತದೆ. ಜತೆಗೆ, ಸಮಯ ಪಾಲನೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮಗಳನ್ನೇ ಬಂಡವಾಳ ಮಾಡಿಕೊಂಡ ಬೋಧಕರು ನಿಯಮಗಳಿಂದ ವಿನಾಯಿತಿ ನೀಡಲು ಹಣ ವಸೂಲಿ ಮಾಡುತ್ತಾರೆ. ಕೆಲವರು ಹಣಕ್ಕೆ, ಇನ್ನು ಕೆಲವರು ಮದ್ಯದ ಬಾಟಲಿಗೆ ಡಿಮ್ಯಾಂಡ್ ಮಾಡುತ್ತಾರೆ ಎನ್ನುವುದು ತಿಳಿದುಬಂದಿದೆ.

In a shocking revelation, senior police personnel tasked with training new recruits have themselves been caught taking bribes from trainee constables. The illegal activities were uncovered in police training schools in Bengaluru and Chitradurga.