ಮಗಳಿಗೆ ಮದುವೆಯಾಗದ ಚಿಂತೆಯಲ್ಲಿ ಆಟೋ ಚಾಲಕ ಆತ್ಮಹತ್ಯೆ ; ತಂದೆಯ ಶವ ಕಂಡು ಪ್ರಾಣ ಕಳೆದುಕೊಂಡ ಮಗಳು !

12-03-26 02:48 pm       HK News Staffer   ಕರ್ನಾಟಕ

ಮಗಳಿಗೆ ಮದುವೆಯಾಗುತ್ತಿಲ್ಲ ಎಂದು ಮನನೊಂದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈ ನಗರದ ವದಪಾಲನಿ ಪ್ರದೇಶದಲ್ಲಿ ಸಂಭವಿಸಿದೆ. 57 ವರ್ಷದ ಆಟೋ ರಿಕ್ಷಾ ಚಾಲಕ ಕೃಷ್ಣಕುಮಾರ್ ಮೃತ ದುರ್ದೈವಿ.

ತಮಿಳುನಾಡಿನ, ಮಾ.13: ಮಗಳಿಗೆ ಮದುವೆಯಾಗುತ್ತಿಲ್ಲ ಎಂದು ಮನನೊಂದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈ ನಗರದ ವದಪಾಲನಿ ಪ್ರದೇಶದಲ್ಲಿ ಸಂಭವಿಸಿದೆ. 57 ವರ್ಷದ ಆಟೋ ರಿಕ್ಷಾ ಚಾಲಕ ಕೃಷ್ಣಕುಮಾರ್ ಮೃತ ದುರ್ದೈವಿ. 
.
ತಂದೆಯ ಸಾವಿನಿಂದ ಮನನೊಂದ ಮಗಳು ಪಾಕಿಯಾ ಕೂಡ ಕೆಲವೇ ಗಂಟೆಗಳ ಬಳಿಕ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣ ಕುಮಾರ್‌ ಮಾರ್ಚ್ 7ರಂದು ಮನೆಬಿಟ್ಟು ಹೊರ ಹೋಗಿದ್ದವರು ಮರಳಿ ಮನೆಗೆ ಬಂದಿರಲಿಲ್ಲ. ಕುಟುಂಬದವರು ಹಲವು ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. 

ಆದರೆ ಮಾರ್ಚ್ 8ರ ರಾತ್ರಿ ಅವರ ಮೊಬೈಲ್ ಫೋನ್ ಮನೆಯ ಸಮೀಪದ ಬಾವಿಯ ಬಳಿ ಪತ್ತೆಯಾದ ಬಳಿಕ ಪರಿಶೀಲಿಸಿದಾಗ, ಬಾವಿಯ ಬಳಿ ಅವರ ಶವ ಪತ್ತೆಯಾಗಿದೆ. ತಂದೆಯ ಮೃತದೇಹವನ್ನು ಕಂಡು ಆಘಾತಕ್ಕೊಳಗಾದ ಪಾಕಿಯಾ, ತಾಯಿಯನ್ನು ಕೋಣೆಯಲ್ಲಿ ಲಾಕ್ ಮಾಡಿ ತಾನು ಅಡುಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ತಾಯಿ ಹಿರಿಯ ಮಗಳು ಬ್ರಿಂಡಾ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬ್ರಿಂಡಾ ಸ್ಥಳಕ್ಕೆ ಬಂದು ತಾಯಿಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ದಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಾವಿಯಿಂದ ಕೃಷ್ಣಕುಮಾರ್ ಅವರ ಶವವನ್ನು ಹೊರತೆಗೆದಿದ್ದಾರೆ. ಪಾಕಿಯಾ ಅವರನ್ನು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಕೃಷ್ಣಕುಮಾರ್ ಅವರಿಗೆ ಇಬ್ಬರು ಪುತ್ರಿಯರಿದ್ದು ಹಿರಿಯ ಮಗಳು ಬ್ರಿಂಡಾಗೆ ಮದುವೆಯಾಗಿದೆ. ಆದರೆ ಅವರ 30 ವರ್ಷದ ಪಾಕಿಯಾ ಇನ್ನೂ ಮದುವೆಯಾಗದೇ ಇರುವುದರಿಂದ ಕುಟುಂಬದ ಮೇಲೆ ಸಾಮಾಜಿಕ ಒತ್ತಡ ಹೆಚ್ಚಾಗಿದ್ದರಿಂದ ಕೃಷ್ಣಕುಮಾರ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ತಿಳಿದುಬಂದಿದೆ. ಇದರಿಂದ ಕೃಷ್ಣಕುಮಾರ್‌ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.