ಸಂತ್ರಸ್ತೆ ದೂರು ಕೊಡಬೇಕಿಲ್ಲ, ಸುಮೊಟೋ ಕೇಸು ದಾಖಲಿಸಿ, ಕಠಿಣ ಶಿಕ್ಷೆ ಜಾರಿಗೊಳಿಸಿ ; ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಮಹಿಳಾ ಆಯೋಗದ ಅಧ್ಯಕ್ಷರ ಚಾಟಿ

18-03-26 06:10 pm       HK News Staffer   ಕರ್ನಾಟಕ

ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಸಾಕಷ್ಟು ಆರೋಪಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಪ್ರಾಥಮಿಕ ಮಾಹಿತಿ ಆಧರಿಸಿ ಹಿರಿಯ ಅಧಿಕಾರಿಗಳು ಸುಮೊಟೋ ಕೇಸು ದಾಖಲಿಸಬೇಕು. ಇಂತಹ ಪ್ರಕರಣಗಳಲ್ಲಿ ಕಠಿಣವಾಗಿ ಕಾನೂನು ಜಾರಿ ಮಾಡಬೇಕು, ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

ಬೆಂಗಳೂರು, ಮಾರ್ಚ್ 18: ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಸಾಕಷ್ಟು ಆರೋಪಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಪ್ರಾಥಮಿಕ ಮಾಹಿತಿ ಆಧರಿಸಿ ಹಿರಿಯ ಅಧಿಕಾರಿಗಳು ಸುಮೊಟೋ ಕೇಸು ದಾಖಲಿಸಬೇಕು. ಇಂತಹ ಪ್ರಕರಣಗಳಲ್ಲಿ ಕಠಿಣವಾಗಿ ಕಾನೂನು ಜಾರಿ ಮಾಡಬೇಕು, ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಚೌಧರಿ, ಈಗಾಗಲೇ ಘಟನೆ ಬಗ್ಗೆ ಗೃಹ ಸಚಿವರ ಜೊತೆಗೆ ಮಾತನಾಡಿದ್ದೇನೆ, ಈ ಬಗ್ಗೆ ನಾನೇನೂ ಹೇಳಬೇಕಾಗಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ, ಪ್ರಾಥಮಿಕ ಮಾಹಿತಿ ಮೇಲೆ ಸುಮೋಟೊ ಕೇಸು ದಾಖಲಿಸಿಕೊಳ್ಳಬಹುದು. ಸಂತ್ರಸ್ತೆಯರು ದೂರು ನೀಡಲೇಬೇಕು ಅಂತ ಇಲ್ಲವೆಂದು ಗೃಹ ಸಚಿವರು ಹೇಳಿದ್ದಾರೆ.

ಹಾಗಾಗಿ ನಾವು ಆಯೋಗದಿಂದ ಮಂಗಳೂರು ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿದ್ದು ಸ್ವಯಂಪ್ರೇರಿತ ಕೇಸು ದಾಖಲಿಸಬೇಕು ಜೊತೆಗೆ ಈ ಬಗ್ಗೆ ಎರಡು ದಿನದಲ್ಲಿ ವರದಿ ಸಲ್ಲಿಸಬೇಕು ಎಂದು ಹೇಳಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಇರೋದು ಕಾನೂನು ರಕ್ಷಣೆಗಾಗಿ, ಕಾನೂನು ಭಂಜನೆ ಮಾಡುವುದಕ್ಕಲ್ಲ. ಇಲ್ಲಿ ಮಹಿಳೆಯರಿಗೆ ಅನ್ಯಾಯ, ಕಿರುಕುಳ ಆಗಿದೆಯೆಂಬ ಆರೋಪ ತುಂಬ ಗಂಭೀರವಾದದ್ದು ಮತ್ತು ಸೂಕ್ಷ್ಮ ವಿಚಾರ. ಗಂಡನ ಮೇಲಿನ ಕೇಸಿನಲ್ಲಿ ಪತ್ನಿಯ ಮೇಲೆ ದೌರ್ಜನ್ಯ ಮಾಡುವುದು ತುಂಬ ಅನ್ಯಾಯ ಎಂದು ಹೇಳಿದರು.

ಇಲಾಖೆಯಲ್ಲಿ ಇಂತಹ ತಪ್ಪುಗಳನ್ನು ಸಹಿಸಲು ಸಾಧ್ಯವಿಲ್ಲ. ಅಪರಾಧ ಸಾಬೀತಾದ್ರೆ ಕಠಿಣ ಶಿಕ್ಷೆಯೇ ಆಗಬೇಕು. ಇಂತಹದ್ದನ್ನು ಯಾರೇ ಮಾಡಿದ್ದರೂ ಶಿಕ್ಷೆ ಆಗಬೇಕು. ಇದು ಪೊಲೀಸ್ ಇಲಾಖೆಯಲ್ಲೂ ಒಂದು ಸಂದೇಶ ನೀಡುವಂತಾಗಬೇಕು ಎಂದು ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.