Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25ಕ್ಕೂ ಹೆಚ್ಚು ಕಡೆ ಬೆಂಕಿ ; 4-5 ದಿನಗಳಿಂದ ಉರಿಯುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ, ಕಿಡಿಗೇಡಿ ಕೃತ್ಯಕ್ಕೆ ಶೋಲಾ ಕಾಡು, ಪ್ರಾಣಿ- ಪಕ್ಷಿಗಳು ಭಸ್ಮ !

21-03-26 06:57 pm       HK News Staffer   ಕರ್ನಾಟಕ

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 25ಕ್ಕೂ ಹೆಚ್ಚು ಕಡೆ ಬೆಂಕಿ ಹಾಕಲಾಗಿದ್ದು ಕಳೆದ 2-3 ದಿನಗಳಿಂದ ಧಗ ಧಗನೆ ಅರಣ್ಯ ಉರಿಯುತ್ತಿದೆ. ಬಿಸಿಲ ಬೇಗೆಯ ನಡುವೆ ಶೋಲಾ ಹುಲ್ಲುಗಾವಲು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿದೆ.‌

ಚಿಕ್ಕಮಗಳೂರು, ಮಾರ್ಚ್ 21: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 25ಕ್ಕೂ ಹೆಚ್ಚು ಕಡೆ ಬೆಂಕಿ ಹಾಕಲಾಗಿದ್ದು ಕಳೆದ 2-3 ದಿನಗಳಿಂದ ಧಗ ಧಗನೆ ಅರಣ್ಯ ಉರಿಯುತ್ತಿದೆ. ಬಿಸಿಲ ಬೇಗೆಯ ನಡುವೆ ಶೋಲಾ ಹುಲ್ಲುಗಾವಲು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿದೆ.‌

ಶೃಂಗೇರಿ ತಾಲೂಕು ವ್ಯಾಪ್ತಿಯ ಕೆರೆಕಟ್ಟೆ ವಲಯದ ಮಾಣಿಕ್ಯ ಬೆಟ್ಟ ಗಿರಿ ಶ್ರೇಣಿ, ವಾಲಿಕುಂಜ, ನರಸಿಂಹ ಪರ್ವತ, ಕಿತ್ಲೆಮನೆಕೊಡಿಗೆ ಸೇರಿದಂತೆ ಬೆಟ್ಟದ ಸಾಲಿನುದ್ದಕ್ಕೂ ಬೆಂಕಿ ಬಿದ್ದಿದೆ. ಮೊದಲಿಗೆ ಸಣ್ಣ ಪ್ರಮಾಣದಲ್ಲಿದ್ದ ಬೆಂಕಿ‌ ದಿನ ಕಳೆದಂತೆ ಬೆಟ್ಟದ ಸಾಲಿನುದ್ದಕ್ಕೂ ಹರಡಿದ್ದು ನೂರಾರು ಪ್ರಾಣಿ, ಪಕ್ಷಿಗಳು ಆಹುತಿಯಾಗಿವೆ. ಬೇಸಿಗೆಯ ಹುಲ್ಲು, ಒಣಗಿದ ತರಗೆಲೆಗಳು, ಭಾರೀ ಬಿಸಿಲು ಬೆಂಕಿ ಮತ್ತಷ್ಟು ಹರಡಲು ಕಾರಣವಾಗಿದೆ.

ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿರುವ ಶಂಕೆಯಿದ್ದು ವಿಷಯ ತಿಳಿದು ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶ ಮಾಡಿದ್ದಾರೆ. ಮಂಗಳೂರು ವಿಭಾಗದ ಅರಣ್ಯಾಧಿಕಾರಿ ಮರಿಯಪ್ಪ ಕರಿಕಳನ್ ಅವರಿಗೆ ತನಿಖೆಗೆ ಸೂಚಿಸಿದ್ದು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. 

ನಾಲ್ಕೈದು ದಿನಗಳಿಂದ ಕಾಡು ಉರಿಯುತ್ತಿದ್ದು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ನೆಲದಲ್ಲಿ ಗೂಡುಕಟ್ಟುವ ಪಕ್ಷಿ, ಪ್ರಾಣಿಗಳು, ಅಪರೂಪದ ಸಸ್ಯಸಂಪತ್ತು ಸುಟ್ಟು ಹೋಗಿದೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನೂರಾರು ಎಕರೆ ಅರಣ್ಯ ನಾಶವಾಗಿದೆ ಎನ್ನುವ ಆರೋಪವನ್ನು ಪರಿಸರ ಪ್ರೇಮಿಗಳು ಮಾಡಿದ್ದಾರೆ. 

ಅರಣ್ಯ ವೀಕ್ಷಕರ ನೇಮಕ ಮಾಡಿಕೊಳ್ಳದೇ ಇರೋದು, ಬೆಂಕಿ ನಿಯಂತ್ರಣ ರೇಖೆ, ವೀಕ್ಷಣಾ ಗೋಪುರ ಮಾಡದೇ ಇರುವುದರಿಂದ ಬೆಂಕಿ ದೊಡ್ಡ ಪ್ರಮಾಣದಲ್ಲಿ ಹರಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಾರದಿಂದ ಕಾಡು ಹೊತ್ತಿ ಉರಿಯುತ್ತಿದ್ದರೂ ಸ್ಥಳಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ಕಾರ್ಕಳ ಡಿಎಫ್ಓ ಶಿವರಾಮ್ ಬಾಬು ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಚಿಕ್ಕಮಗಳೂರು- ಶಿವಮೊಗ್ಗ- ಉಡುಪಿ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಕುದುರೆಮುಖ ಅರಣ್ಯದಲ್ಲಿ ಬೆಂಕಿ ಬಿದ್ದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ದೊಡ್ಡ ಪ್ರಮಾಣದ ನಾಶಕ್ಕೆ ಕಾರಣವಾಗುತ್ತಿದೆ.