RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್ಘಾಟನೆಗೂ ಮುನ್ನ ಅಭಿಮಾನಿಗಳ ಹುಚ್ಚು ಭಕ್ತಿ, ಭದ್ರತೆಗೆ 2000 ಪೊಲೀಸರ ನಿಯೋಜನೆ

28-03-26 08:39 pm       HK News Staffer   ಕರ್ನಾಟಕ

ಐಪಿಎಲ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳು ತಮ್ಮ ತಂಡದ ಮೇಲೆ ಇರುವ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಗಿರಿನಗರದ ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು ಅಭಿಮಾನಿಗಳು ಸಾಮೂಹಿಕವಾಗಿ ರಕ್ತದಾನ ಮಾಡಿ ತಂಡದ ಗೆಲುವಿಗಾಗಿ ಶುಭ ಹಾರೈಸಿದ್ದಾರೆ.

ಬೆಂಗಳೂರು, ಮಾರ್ಚ್ 28: ಐಪಿಎಲ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳು ತಮ್ಮ ತಂಡದ ಮೇಲೆ ಇರುವ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಗಿರಿನಗರದ ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು ಅಭಿಮಾನಿಗಳು ಸಾಮೂಹಿಕವಾಗಿ ರಕ್ತದಾನ ಮಾಡಿ ತಂಡದ ಗೆಲುವಿಗಾಗಿ ಶುಭ ಹಾರೈಸಿದ್ದಾರೆ.

ಪ್ರತಿ ವರ್ಷ ಆರ್‌ಸಿಬಿ ಪಂದ್ಯಕ್ಕೂ ಮುನ್ನ ರಕ್ತದಾನ ಮಾಡುವ ಪದ್ಧತಿಯನ್ನು ಮುಂದುವರಿಸಿರುವ ಅಭಿಮಾನಿಗಳು, “ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ ಜಯ ಸಾಧಿಸುವ ವಿಶ್ವಾಸವಿದೆ. ಜೊತೆಗೆ ಈ ಸೀಸನ್‌ನಲ್ಲಿ ಕಪ್ ನಮ್ದೇ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಆರ್‌ಸಿಬಿ ಗಾಡ್ ವಿರಾಟ್ ಕೋಹ್ಲಿಯನ್ನು ಮೈದಾನದಲ್ಲಿ ನೋಡುವುದೇ ನಮಗೆ ದೊಡ್ಡ ಸಂತೋಷ” ಎಂದು ಅಭಿಮಾನಿಗಳು ಉತ್ಸಾಹದಿಂದ ತಿಳಿಸಿದ್ದಾರೆ.

ರಕ್ತದಾನ ನಂತರ ಅಭಿಮಾನಿಗಳು ತಂಡದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದು, ಕಳೆದ ಬಾರಿ ನಡೆದ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ ಅಭಿಮಾನಿಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು. “ಆ ಅಭಿಮಾನಿಗಳಿಗೆ ನ್ಯಾಯ ಸಿಗುವಂತೆ ತಂಡ ಆಡಬೇಕು” ಎಂಬ ಭಾವನಾತ್ಮಕ ಮನವಿ ಕೂಡ ಕೇಳಿಬಂದಿದೆ.

ಇದೇ ವೇಳೆ, 18 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುವ ಐಪಿಎಲ್ ಟೂರ್ನಿಯ 19ನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದೆ. ಕರ್ನಾಟಕ ಕ್ರಿಕೆಟ್‌ನ ಹೃದಯಭೂಮಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಬೆಂಗಳೂರಿನಲ್ಲಿ 18 ವರ್ಷಗಳ ಬಳಿಕ ಈ ಗೌರವ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಕಾಲ್ತುಳಿತ ದುರಂತದ ಬಳಿಕ ಇದೇ ಮೊದಲ ಬಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯುತ್ತಿರುವ ಹಿನ್ನೆಲೆ, ಭದ್ರತೆಗೆ ವಿಶೇಷ ಒತ್ತು ನೀಡಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸುಮಾರು 2000 ಪೊಲೀಸರನ್ನು ನಿಯೋಜಿಸಲಾಗಿದ್ದು, ಬೆಂಗಳೂರು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.