ಮಗನ ರೋಗ ಗುಣಪಡಿಸಲು ಸ್ವಂತ ಮಗಳನ್ನೇ ಕೊಂದ ತಾಯಿ! ಮಾಟಗಾತಿಯ ಮಾತು ಕೇಳಿ ಮಗಳ ಹತ್ಯೆ; ಬಾಲಕಿಯ ಹತ್ಯೆ ಪ್ರಕರಣಕ್ಕೆ ಬೆಚ್ಚಿಬಿದ್ದ ಪೊಲೀಸರು

02-04-26 02:46 pm       HK News Staffer   ಕರ್ನಾಟಕ

ಮಗನ ಅನಾರೋಗ್ಯ ಗುಣಪಡಿಸಲು ಮೂಢನಂಬಿಕೆಗೆ ಒಳಗಾಗಿ ತಾಯಿ ತಾನು ಹೆತ್ತ ಮಗಳನ್ನೇ ಬಲಿಕೊಟ್ಟ ಭೀಕರ ಘಟನೆ ಜಾರ್ಖಂಡ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ, ಆಕೆಯ ಪ್ರಿಯಕರ ಹಾಗೂ ಮಾಂತ್ರಿಕ ಎಂದು ಹೇಳಿಕೊಂಡಿದ್ದ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್, ಏಪ್ರಿಲ್ 02: ಮಗನ ಅನಾರೋಗ್ಯ ಗುಣಪಡಿಸಲು ಮೂಢನಂಬಿಕೆಗೆ ಒಳಗಾಗಿ ತಾಯಿ ತಾನು ಹೆತ್ತ ಮಗಳನ್ನೇ ಬಲಿಕೊಟ್ಟ ಭೀಕರ ಘಟನೆ ಜಾರ್ಖಂಡ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ, ಆಕೆಯ ಪ್ರಿಯಕರ ಹಾಗೂ ಮಾಂತ್ರಿಕ ಎಂದು ಹೇಳಿಕೊಂಡಿದ್ದ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 24ರ ರಾತ್ರಿ ಕುಸುಂಭ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆ ದಿನ ರಾಮನವಮಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಬಾಲಕಿ ಕಾಣೆಯಾಗಿದ್ದಳು. ಮರುದಿನ ಬೆಳಗ್ಗೆ ಸ್ಥಳೀಯ ಶಾಲೆಯ ಹಿಂಭಾಗದ ಬಿದಿರಿನ ತೋಪಿನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆರಂಭದಲ್ಲಿ ತಾಯಿ ನೀಡಿದ ದೂರಿನ ಆಧಾರದ ಮೇಲೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಯಿತಾದರೂ, ತನಿಖೆ ಮುಂದುವರಿದಂತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕರ ಸೂಚನೆಯ ಮೇರೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಯಿತು. ತನಿಖೆಯಲ್ಲಿ ತಾಯಿಯೇ ಈ ಕೃತ್ಯದ ಮೂಲ ಕಾರಣ ಎಂಬುದು ಬಹಿರಂಗವಾಯಿತು. ‘ಭಗ್ತಿನ್’ ಎಂದು ಕರೆಯಲ್ಪಡುವ ಶಾಂತಿ ದೇವಿ ಎಂಬ ಮಹಿಳೆ, ಮಗನ ರೋಗ ಗುಣವಾಗಲು ನರಬಲಿ ನೀಡಬೇಕೆಂದು ಹೇಳಿದ್ದಾಳೆ. ಇದನ್ನು ನಂಬಿದ ತಾಯಿ ಕಳೆದ ಮೂರು ತಿಂಗಳಿಂದ ಆಕೆಯ ಸಂಪರ್ಕದಲ್ಲಿದ್ದಳು.

ಪೂಜೆಯ ನೆಪದಲ್ಲಿ ತಾಯಿ ತನ್ನ ಪ್ರಿಯಕರ ಭೀಮ್ ರಾಮ್ ಜೊತೆ ಬಾಲಕಿಯನ್ನು ಮಹಿಳೆಯ  ಮನೆಗೆ ಕರೆದುಕೊಂಡು ಹೋಗಿದ್ದು, ನಂತರ ಹತ್ತಿರದ ಬಿದಿರಿನ ತೋಪಿಗೆ ಕರೆದೊಯ್ದು ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭೀಮ್ ರಾಮ್ ಬಾಲಕಿಯನ್ನು ಕತ್ತು ಹಿಸುಕಿ ಕೊಂದಿದ್ದರೆ, ತಾಯಿ ಮಗುವಿನ ಕಾಲುಗಳನ್ನು ಹಿಡಿದಿದ್ದಾಳೆ ಎಂದು ಆರೋಪಿಸಲಾಗಿದೆ.

ಬಾಲಕಿಯ ಗುಪ್ತಾಂಗಗಳೊಳಗೆ ಮರದ ಕೋಲನ್ನು ಹಾಕಿದ್ದಾರೆ. ಭೀಮ್ ರಾಮ್ ಆಕೆಯ ತಲೆಗೆ ಹೊಡೆದು ರಕ್ತವನ್ನು ತೆಗೆದುಕೊಂಡಿದ್ದಾನೆ. ನಂತರ ಶವವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೂಢನಂಬಿಕೆ ಮತ್ತು ಕುರುಡು ಆಚರಣೆಗಳಿಂದ ಉಂಟಾಗುವ ಅಪಾಯಗಳಿಗೆ ಈ ಘಟನೆ ಭೀಕರ ಉದಾಹರಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.