ಪುತ್ತೂರಿನಲ್ಲಿ ಸಹಪಾಠಿ ಯುವತಿಗೆ ಮಗು ಪ್ರಕರಣ ; ಮದುವೆಯೇ ಸೂಕ್ತವೆಂದು ಹೈಕೋರ್ಟ್ ಸಲಹೆ, ಜೈವಿಕ ತಂದೆ ಸಾಬೀತಾಗಿದ್ದರಿಂದ ಮದುವೆಗೆ ಹಿಂಜರಿಕೆ ಸರಿಯಲ್ಲ!

23-04-26 01:07 pm       HK News Staffer   ಕರ್ನಾಟಕ

ಸಹಪಾಠಿ ಯುವತಿಯನ್ನು ಪ್ರೀತಿಸಿ ಮಗು ಕರುಣಿಸಿದ ಪ್ರಕರಣದಲ್ಲಿ ಕೇಸು ರದ್ದು ಕೋರಿ ಸಲ್ಲಿಸಿದ್ದ ಬಿಜೆಪಿ ಮುಖಂಡನ ಪುತ್ರ ಕೃಷ್ಣ ರಾವ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಒಪ್ಪಿತ ಸಂಬಂಧದಲ್ಲಿ ಮಗುವಾದ ಮೇಲೆ ಯುವತಿಯನ್ನು ಮದುವೆಯಾಗಿ ಸಲಹುವುದೇ ಉತ್ತಮ. ಡಿಎನ್ಎ ವರದಿಯಲ್ಲಿ ಮಗುವಿಗೆ ಜೈವಿಕ ತಂದೆ ಆತನೇ ಎಂದು ಸಾಬೀತಾದ ಬಳಿಕ ಮದುವೆಗೆ ಹಿಂಜರಿಯುವುದು ಸರಿಯಲ್ಲ ಎಂದು ಹೇಳಿದೆ.

ಪುತ್ತೂರು, ಎಪ್ರಿಲ್ 23: ಸಹಪಾಠಿ ಯುವತಿಯನ್ನು ಪ್ರೀತಿಸಿ ಮಗು ಕರುಣಿಸಿದ ಪ್ರಕರಣದಲ್ಲಿ ಕೇಸು ರದ್ದು ಕೋರಿ ಸಲ್ಲಿಸಿದ್ದ ಬಿಜೆಪಿ ಮುಖಂಡನ ಪುತ್ರ ಕೃಷ್ಣ ರಾವ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಒಪ್ಪಿತ ಸಂಬಂಧದಲ್ಲಿ ಮಗುವಾದ ಮೇಲೆ ಯುವತಿಯನ್ನು ಮದುವೆಯಾಗಿ ಸಲಹುವುದೇ ಉತ್ತಮ. ಡಿಎನ್ಎ ವರದಿಯಲ್ಲಿ ಮಗುವಿಗೆ ಜೈವಿಕ ತಂದೆ ಆತನೇ ಎಂದು ಸಾಬೀತಾದ ಬಳಿಕ ಮದುವೆಗೆ ಹಿಂಜರಿಯುವುದು ಸರಿಯಲ್ಲ ಎಂದು ಹೇಳಿದೆ. 

ತನ್ನ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿದೆ. ಈ ಸಂದರ್ಭದಲ್ಲಿ ಡಿಎನ್ಎ ವರದಿ ಉಲ್ಲೇಖಿಸಿದ ಪೀಠವು, ಆರೋಪಿಯೇ ಮಗುವಿನ ಜೈವಿಕ ತಂದೆ ಎಂಬುದು ದೃಢಪಟ್ಟಿರುವುದರಿಂದ ಸಂತ್ರಸ್ತೆಯನ್ನು ಮದುವೆಯಾಗುವುದೇ ಸೂಕ್ತ ಎಂದು ಸಲಹೆ ಮಾಡಿದೆ.

ಇದಲ್ಲದೆ, ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ. ​ಮಗು ಮತ್ತು ತಾಯಿಯನ್ನು ಬೀದಿಗೆ ತಳ್ಳುವುದು ನ್ಯಾಯವೇ? ​ಮಗುವಿನ ಆರೈಕೆ ಮಾಡುವುದು ತಂದೆಯಾಗಿ ಆರೋಪಿಯ ಆದ್ಯ ಕರ್ತವ್ಯವಲ್ಲವೇ? ​ಸಂತ್ರಸ್ತೆಗೆ ಮಾಸಿಕ ಜೀವನಾಂಶ ನೀಡಲು ಆರೋಪಿ ಸಿದ್ಧನಿದ್ದಾನೆಯೇ? ​ಈ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ತನ್ನ ನಿಲುವು ತಿಳಿಸಲು ಆರೋಪಿ ಪರ ವಕೀಲರಿಗೆ ಸೂಚಿಸಿದ ಪೀಠವು, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.

​ವಿಚಾರಣೆ ವೇಳೆ ಆರೋಪಿ ಪರ ವಕೀಲ ಪಿ.ಪಿ. ಹೆಗ್ಡೆ ಅವರು ಇದು ರಾಜಕೀಯ ವಿರೋಧಿಗಳ ಸಂಚು. ಆರೋಪಿಯ ತಂದೆಯ ತೇಜೋವಧೆ ಮಾಡಲು ಈ ಪ್ರಕರಣವನ್ನು ಬಳಸಲಾಗುತ್ತಿದೆ ಎಂದು ವಾದಿಸಿದರು. ಆದರೆ, ಡಿಎನ್ಎ ವರದಿ ಆರೋಪಿ ವಿರುದ್ಧ ಇರುವುದರಿಂದ ನ್ಯಾಯಾಲಯವು ರಾಜಕೀಯ ವಾದ ಬದಿಗಿಟ್ಟು ಮಾನವೀಯ ನೆಲೆಯಲ್ಲಿ ಮಗುವಿನ ಭವಿಷ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಲು ಸಲಹೆ ಮಾಡಿತು. 

ಶಾಲಾ ದಿನಗಳಿಂದಲೂ ​ಸಹಪಾಠಿಯಾಗಿದ್ದ ಯುವತಿಯನ್ನು ಕೃಷ್ಣ ಜೆ. ರಾವ್ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಹೊಂದಿದ್ದ. ಯುವತಿ ಗರ್ಭವತಿಯಾದ ಬಳಿಕ ಕುಟುಂಬಸ್ಥರು ಮದುವೆಯಾಗುವುದಾಗಿ ಹೇಳಿ ನಂಬಿಸಿ ವಯಸ್ಸಿನ ಕಾರಣಕ್ಕೆ ಮುಂದೂಡಿದ್ದರು. ಮಗು ಜನಿಸಿದ ನಂತರ ‘ಮಗು ನನ್ನದಲ್ಲ’ ಎಂದು ಹೇಳಿ ಆರೋಪಿ ಮದುವೆಗೆ ನಿರಾಕರಣೆ ಮಾಡಿದ್ದ. ಆದರೆ ಡಿಎನ್ಎ ಪರೀಕ್ಷೆಯಲ್ಲಿ ಮಗು ಆನದ್ದೇ ಎಂದು ವರದಿ ನೀಡಿತ್ತು.‌ 

​ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು ಮದುವೆಗಾಗಿ ಹಿಂದು ಸಂಘಟನೆ ಮತ್ತು ಬಿಜೆಪಿ ನಾಯಕರನ್ನು ಭೇಟಿಯಾಗಿ ಪ್ರಯತ್ನ ಮಾಡಿದ್ದರು. ಆದರೆ ಕೃಷ್ಣ ರಾವ್ ಪ್ರತಿಷ್ಠೆಯ ಕಾರಣಕ್ಕೆ ಮದುವೆಯನ್ನು ನಿರಾಕರಿಸುತ್ತ ಬಂದಿದ್ದಲ್ಲದೆ, ಪ್ರಕರಣ ರದ್ದುಗೊಳಿಸಲು ಪ್ರಭಾವಿ ವಕೀಲರನ್ನು ಮುಂದಿಟ್ಟು ಹೈಕೋರ್ಟ್ ಮೆಟ್ಟಿಲೇರಿದೆ.