ಟ್ರಾಫಿಕ್ ಉಲ್ಲಂಘಿಸಿದ್ದಕ್ಕೆ ತಹಸೀಲ್ದಾರ್ ಶಿಕ್ಷೆ ; ರಸ್ತೆ ಮಧ್ಯದಲ್ಲೇ ಧರಣಿ ಕುಳಿತ ಪೇದೆ

19-08-20 01:18 pm       Hassan Reporter   ಕರ್ನಾಟಕ

ಟ್ರಾಫಿಕ್ ಪಾಲನೆ ಮಾಡಬೇಕಾದ ಪೊಲೀಸರೇ ರಸ್ತೆ ಮಧ್ಯೆ ಪ್ರತಿಭಟನೆ ಕುಳಿತಿದ್ದನ್ನು ಕೇಳಿದ್ದೀರಾ..? ತಮಗೆ ನ್ಯಾಯ ಬೇಕೆಂದು ನಡು ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ಪೊಲೀಸ್ ಕಾನ್‍ಸ್ಟೇಬಲ್

ಹಾಸನ, ಆಗಸ್ಟ್ 19: ಕೆಲವೊಮ್ಮೆ ಜನಸಾಮಾನ್ಯರು ತಮಗೆ ನ್ಯಾಯ ಬೇಕೆಂದು ನಡುರಸ್ತೆಯಲ್ಲೇ ಪ್ರತಿಭಟನೆ ಮಾಡಿರುವುದನ್ನು ಕೇಳಿರಬಹುದು. ಆದರೆ, ಟ್ರಾಫಿಕ್ ಪಾಲನೆ ಮಾಡಬೇಕಾದ ಪೊಲೀಸರೇ ರಸ್ತೆ ಮಧ್ಯೆ ಪ್ರತಿಭಟನೆ ಕುಳಿತಿದ್ದನ್ನು ಕೇಳಿದ್ದೀರಾ..? ಹೌದು.. ಸಕಲೇಶಪುರ ಪಟ್ಟಣದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ದಯಾನಂದ್ ಹೀಗೆ ರಸ್ತೆ ಮಧ್ಯೆ ಪ್ರತಿಭಟನೆಗೆ ಕುಳಿತು ಅಚ್ಚರಿ ಮೂಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ಹಾದುಹೋಗುವ ಸಕಲೇಶಪುರ ಪೇಟೆಯಲ್ಲಿ ಅಗಲ ಕಿರಿದಾದ ರಸ್ತೆ. ಪೊಲೀಸ್ ಕಾನ್ ಸ್ಟೇಬಲ್ ಎರಡು ನಿಮಿಷ ಇರಲಿ ಎಂದು ರಸ್ತೆ ಬದಿ ಕಾರು ನಿಲ್ಲಿಸಿ ಮೆಡಿಕಲ್ ಶಾಪ್ ಗೆ ತೆರಳಿದ್ದರು. ಇದೇ ವೇಳೆ ತಹಶೀಲ್ದಾರ್ ಮಂಜುನಾಥ್ ಆ ದಾರಿಯಲ್ಲಿ ಬಂದಿದ್ದಾರೆ. ನೋ ಪಾರ್ಕಿಂಗ್ ಏರಿಯಾದಲ್ಲಿ ವಾಹನ ನಿಲ್ಲಿಸಿ ಟ್ರಾಫಿಕ್ ಪ್ರಾಬ್ಲಂ ಆಗಿರುವುದನ್ನು ಗಮನಿಸಿ, ಚಾಲಕನ ಮೂಲಕ ಚಕ್ರದ ಗಾಳಿ ತೆಗೆಯಲು ಸೂಚಿಸಿದ್ದಾರೆ. ಚಾಲಕ ತಹಸೀಲ್ದಾರ್ ವಾಹನದಿಂದ ಇಳಿದು, ನಿಂತಿದ್ದ ಕಾರಿನ ಬಳಿ ತೆರಳಿ ನಾಲ್ಕೂ ಚಕ್ರದ ಗಾಳಿ ತೆಗೆದಿದ್ದಾರೆ. ಇಷ್ಟಾಗುತ್ತಿದ್ದಂತೆ ಮೆಡಿಕಲ್ ಶಾಪ್‍ನಿಂದ ಓಡಿ ಬಂದ ಪೇದೆ, ತಹಸೀಲ್ದಾರ್ ಮಂಜುನಾಥ್ ಜೊತೆ ಮಾತಿಗಿಳಿದಿದ್ದಾರೆ. ನೀವು ಬೇಕಾದರೆ ಫೈನ್ ಹಾಕಿಸಿ, ಗಾಳಿ ತೆಗೆದು ನನ್ನನ್ನು ಅರ್ಧ ದಾರಿಯಲ್ಲಿ ಬಿಟ್ಟರಲ್ಲಾ ಎಂದು ಗೋಗರೆದಿದ್ದಾರೆ. ಆದರೆ, ತಹಸೀಲ್ದಾರ್ ಪೇದೆ ಮಾತು ಕೇಳಲು ಮುಂದಾಗಿಲ್ಲ. ತನ್ನ ಪಾಡಿಗೆ ಮುಂದೆ ಹೋಗಿದ್ದಾರೆ. 

ಇದರಿಂದ ನೊಂದ ಕಾನ್ ಸ್ಟೇಬಲ್ ದಯಾನಂದ್, ಮಹಾತ್ಮ ಗಾಂಧೀಜಿಯ ಫೋಟೋ ಹಿಡಿದು ಕಾರಿನ ಮುಂಭಾಗ ರಸ್ತೆಯಲ್ಲೇ ಪ್ರತಿಭಟನೆ ಕುಳಿತಿದ್ದಾರೆ. ತಹಸೀಲ್ದಾರ್, ಕಾರಿನ ನಾಲ್ಕೂ ಚಕ್ರದ ಗಾಳಿಯನ್ನು ತೆಗೆಸಿದ್ದು ಸರಿಯಲ್ಲ. ಬೇಕಿದಲ್ಲಿ ದಂಡ ಹಾಕಲಿ ಅಥವಾ ನೋಟಿಸ್ ನೀಡಲಿ, ನನಗೆ ನ್ಯಾಯ ಬೇಕು ಎಂದು ಧರಣಿ ಕುಳಿತಿದ್ದಾರೆ.

ಟ್ರಾಫಿಕ್ ಪಾಲನೆ ಮಾಡಿಸುವ ಪೊಲೀಸ್ ಸಿಬಂದಿಯೇ ಈಗ ಹೆದ್ದಾರಿ ಮಧ್ಯೆ ಪ್ರತಿಭಟನೆ ಕುಳಿತಿದ್ದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿತು. ಅಷ್ಟೇ ಅಲ್ಲ , ಕೆಲಸಮಯದಲ್ಲಿಯೇ ಹೆದ್ದಾರಿ ಪೂರ್ತಿ ಬ್ಲಾಕ್ ಆಯ್ತು.  ರಸ್ತೆಯಲ್ಲಿ ಹೋಗುವವರು ಪೇದೆಯ ವರಸೆ ಕಂಡು ಏನೆಂದು ಅರ್ಥವಾಗದೆ,  ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಕೆಲವರಿಗೆ ಪೇದೆಯ ಈ ನಡೆ ಮೋಜಿಗೆ ಕಾರಣವಾದರೆ, ಇನ್ನು ಕೆಲವರು ಪೊಲೀಸರಿಗೆ ಬೇರೆ ಕಾನೂನು ಇದೆಯಾ.. ನೋ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿ ಈಗ ವರಾತ ತೆಗೀತಿದ್ದಾನೆ ಎಂದು ಆಕ್ರೋಶ ಹೊರಗಾಕಿದ್ರು. ಬಳಿಕ ಪೋಲಿಸರು ಬಂದು ಮನವೊಲಿಸಿದರೂ, ಪೇದೆ ದಯಾನಂದ್ ಪಟ್ಟು ಬಿಡಲಿಲ್ಲ. ಕೊನೆಗೆ, ನಗರ ಠಾಣೆ ಪಿಎಸ್‍ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‍ಐ ಚಂದ್ರಶೇಖರ್ ಆಗಮಿಸಿ, ಇತರ ಪೋಲಿಸರ ನೆರವಿನಿಂದ ಪೇದೆಯನ್ನು ಬಲವಂತವಾಗಿ ಎತ್ತಿಕೊಂಡು ನಗರ ಠಾಣೆಗೆ ಕರೆದೊಯ್ದರು. ಕಾರನ್ನು ಪಿಕಪ್ ಮೂಲಕ ಎತ್ತಿ ತೆಗೆದುಕೊಂಡು ಹೋಗುವಂತಾಯ್ತು. ಪೊಲೀಸಪ್ಪನ ಹೈಡ್ರಾಮಾ ಕೆಲಹೊತ್ತು ವಾಹನ ಪ್ರಯಾಣಿಕರಿಗೆ ಮನರಂಜನೆ ಒದಗಿಸಿತ್ತು.