ಆನೆಗಳ ಕಾದಾಟ; ದುಬಾರೆ ಕ್ಯಾಂಪ್‌ನಲ್ಲಿ ಗಾಯಗೊಂಡಿದ್ದ ‘ಮಾರ್ಥಾಂಡ’ ಆನೆ ಸಾವು

19-05-26 04:27 pm       HK News Staffer   ದೇಶ - ವಿದೇಶ

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ನಡೆದಿದ್ದ ಆನೆಗಳ ಕಾದಾಟದ ದುರ್ಘಟನೆ ಇದೀಗ ಮತ್ತೊಂದು ದುರಂತಕ್ಕೆ ಕಾರಣವಾಗಿದೆ. ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಾಕಾನೆ ‘ಮಾರ್ಥಾಂಡ’ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.

ಮಡಿಕೇರಿ, ಮೇ 19: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ನಡೆದಿದ್ದ ಆನೆಗಳ ಕಾದಾಟದ ದುರ್ಘಟನೆ ಇದೀಗ ಮತ್ತೊಂದು ದುರಂತಕ್ಕೆ ಕಾರಣವಾಗಿದೆ. ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಾಕಾನೆ ‘ಮಾರ್ಥಾಂಡ’ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.

ನಿನ್ನೆ (ಮೇ 18) ಪ್ರವಾಸಕ್ಕೆ ಬಂದಿದ್ದ ಚೆನ್ನೈ ಮೂಲದ ಮಹಿಳೆ ಜಿನ್ಶು ಆನೆಗಳ ನಡುವೆ ಸಿಲುಕಿ ಮೃತಪಟ್ಟ ಘಟನೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಅದೇ ಘಟನೆಯಲ್ಲಿ ಗಾಯಗೊಂಡಿದ್ದ ಆನೆ ಸಾವನ್ನಪ್ಪಿರುವುದು ಮತ್ತಷ್ಟು ನೋವು ತಂದಿದೆ.

ಕಾವೇರಿ ನದಿಯಲ್ಲಿ ಆರಂಭವಾದ ಕಾದಾಟ
ದುಬಾರೆ ಶಿಬಿರದ ಮಾವುತರು ನಿನ್ನೆ ಬೆಳಿಗ್ಗೆ ಕಂಜನ್ ಹಾಗೂ ಮಾರ್ತಾಂಡ ಆನೆಗಳನ್ನು ಕಾವೇರಿ ನದಿಗೆ ಸ್ನಾನಕ್ಕೆಂದು ಕರೆತಂದಿದ್ದರು. ಈ ವೇಳೆ ಏಕಾಏಕಿ ಎರಡೂ ಆನೆಗಳ ನಡುವೆ ಕಾದಾಟ ಶುರುವಾಗಿದೆ.

ಕಂಜನ್ ಆನೆ ತನ್ನ ದಂತದಿಂದ ಮಾರ್ತಾಂಡ ಆನೆಯನ್ನು ತಿವಿದ ಪರಿಣಾಮ ಅದು ನೆಲಕ್ಕುರುಳಿತ್ತು. ನಂತರ ಕೆಲಕಾಲ ಎರಡೂ ಆನೆಗಳು ಅಟ್ಟಹಾಸ ಮೆರೆದಿದ್ದು, ಮಾವುತರು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರೂ ಮದವೇರಿದಂತೆ ವರ್ತಿಸಿದ್ದ ಕಂಜನ್ ಆನೆಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ.

ಮಹಿಳೆ ಸಾವು, ಮಗು-ಪತಿ ಪಾರು
ಆನೆಗಳ ಕಾದಾಟ ನಡೆಯುತ್ತಿದ್ದ ಸಂದರ್ಭದಲ್ಲೇ ಪ್ರವಾಸಕ್ಕೆ ಬಂದಿದ್ದ ಚೆನ್ನೈ ಮೂಲದ ಜಿನ್ಶು ಎಂಬ ಮಹಿಳೆ ಆನೆಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರ ಪತಿ ಹಾಗೂ ಮಗು ಮಾತ್ರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಚಿಕಿತ್ಸೆ ಫಲಿಸದೆ ಮಾರ್ತಾಂಡ ಸಾವು
ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ಶಿಬಿರದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಯಗಳು ತೀವ್ರವಾಗಿದ್ದ ಕಾರಣ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಡಿಎಫ್ಒ ಅಭಿಶೇಕ್ ಮಾಹಿತಿ ನೀಡಿದ್ದಾರೆ.

ವೈರಲ್ ಆದ ವಿಡಿಯೋ, ಸರ್ಕಾರದಿಂದ ಕಠಿಣ ಸೂಚನೆ
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಂಡಿದೆ.

ಇನ್ನು ಮುಂದೆ ರಾಜ್ಯದ ಎಲ್ಲ ಸಾಕಾನೆ ಶಿಬಿರಗಳಲ್ಲಿ:

  • ಪ್ರವಾಸಿಗರು ಆನೆಗಳಿಂದ ಕನಿಷ್ಠ 100 ಅಡಿ ದೂರದಲ್ಲಿರಬೇಕು 
  • ಆನೆಗಳಿಗೆ ಸ್ನಾನ ಮಾಡಿಸುವ ಪ್ರದೇಶಕ್ಕೆ ಪ್ರವೇಶ ನಿಷೇಧ 
  • ಸೆಲ್ಫಿ, ಫೋಟೋ, ವಿಡಿಯೋಗಳಿಗಾಗಿ ಆನೆಗಳ ಬಳಿ ಹೋಗುವುದಕ್ಕೆ ಅವಕಾಶ ಇಲ್ಲ 
  • ಬಾಳೆಹಣ್ಣು, ಬೆಲ್ಲ, ಕಬ್ಬು ಸೇರಿದಂತೆ ಆಹಾರವನ್ನು ಪ್ರವಾಸಿಗರು ಕೈಯಿಂದ ತಿನ್ನಿಸುವುದಕ್ಕೂ ನಿಷೇಧ  ಎಂಬ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಲಾಗಿದೆ.

ಕಾಡುಪ್ರಾಣಿಗಳು ಅಥವಾ ಸಾಕಾನೆಗಳು ಎಷ್ಟೇ ತರಬೇತಿ ಪಡೆದಿದ್ದರೂ ಅವು ಪ್ರಾಣಿಗಳೇ ಎಂಬುದನ್ನು ಮರೆಯಬಾರದು. ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಮುಖ್ಯ. ಸೆಲ್ಫಿ ಅಥವಾ ಹತ್ತಿರದಿಂದ ಫೋಟೋ ತೆಗೆದುಕೊಳ್ಳುವ ಉತ್ಸಾಹ ಕೆಲವೊಮ್ಮೆ ಜೀವಕ್ಕೂ ಅಪಾಯ ತರುವ ಸಾಧ್ಯತೆ ಇದೆ. ಅರಣ್ಯ ಇಲಾಖೆ ಹಾಗೂ ಪ್ರವಾಸಿಗರು ಎರಡೂ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗೃತರಾಗಬೇಕಾದ ಅಗತ್ಯತೆಯನ್ನು ಈ ಘಟನೆ ಮತ್ತೆ ನೆನಪಿಸಿದೆ.