ಮೈಸೂರು ದಸರಾದಲ್ಲಿ ಕಂಬಳ ಬೇಡವೇ ಬೇಡ ; ಯದುವೀರ್ ಒಡೆಯರ್ ವಿರೋಧ

06-07-26 04:40 pm       HK News Staffer   ಕರ್ನಾಟಕ

ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕಂಬಳವನ್ನು ಆಯೋಜಿಸಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಈ ಕುರಿತು ಮೈಸೂರು–ಕೊಡಗು ಸಂಸದ ಯದುವೀರ್ ಒಡೆಯರ್ ಕಂಬಳವನ್ನು ದಸರಾ ವೇದಿಕೆಗೆ ತರಲು ವಿರೋಧ ವ್ಯಕ್ತಪಡಿಸಿದ್ದು, ಇದು ಸಂಪ್ರದಾಯವನ್ನು ವಾಣಿಜ್ಯೀಕರಣ ಮಾಡುವ ಪ್ರಯತ್ನ ಎಂದು ಹೇಳಿದ್ದಾರೆ.

ಮೈಸೂರು, ಜುಲೈ 6: ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕಂಬಳವನ್ನು ಆಯೋಜಿಸಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಈ ಕುರಿತು ಮೈಸೂರು–ಕೊಡಗು ಸಂಸದ ಯದುವೀರ್ ಒಡೆಯರ್ ಕಂಬಳವನ್ನು ದಸರಾ ವೇದಿಕೆಗೆ ತರಲು ವಿರೋಧ ವ್ಯಕ್ತಪಡಿಸಿದ್ದು, ಇದು ಸಂಪ್ರದಾಯವನ್ನು ವಾಣಿಜ್ಯೀಕರಣ ಮಾಡುವ ಪ್ರಯತ್ನ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳವು ಕರಾವಳಿ ಭಾಗದ ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಆಚರಣೆಯೊಂದಿಗೆ ಜೋಡಿಕೊಂಡಿರುವ ಪರಂಪರೆ. ಅದನ್ನು ಮೈಸೂರು ದಸರಾದಂತಹ ರಾಜ್ಯಮಟ್ಟದ ಉತ್ಸವಕ್ಕೆ ತಂದು ಪ್ರದರ್ಶನ ಹಾಗೂ ವ್ಯಾಪಾರಿಕ ಉದ್ದೇಶಕ್ಕೆ ಬಳಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ದಸರಾ ಈಗಾಗಲೇ ಹಲವು ವ್ಯವಸ್ಥಾಪನಾ ಸವಾಲುಗಳನ್ನು ಎದುರಿಸುತ್ತಿದ್ದು, ಮೊದಲು ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಅವರು ಸಲಹೆ ನೀಡಿದರು.

ಅವರು ಇನ್ನೂ ಹೇಳುವಂತೆ, ದಸರಾ ಟಿಕೆಟ್ ವ್ಯವಸ್ಥೆ ಸೇರಿದಂತೆ ಹಲವು  ವಿಷಯಗಳಲ್ಲಿ ಗೊಂದಲಗಳಿದ್ದು, ಅದನ್ನು ಮೊದಲು ಸರಿಪಡಿಸುವ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಕಂಬಳಕ್ಕೆ ಸುಮಾರು 8 ಕೋಟಿ ರೂಪಾಯಿ ವೆಚ್ಚ ಮಾಡುವ ನಿರ್ಧಾರವೂ ಸೂಕ್ತವಲ್ಲ ಎಂದು ಪ್ರಶ್ನಿಸಿದರು. ಬರ ಪರಿಸ್ಥಿತಿ ಹಿನ್ನೆಲೆ ಸರಳ ಮತ್ತು ಸಂಪ್ರದಾಯಬದ್ಧ ದಸರಾ ಆಚರಣೆಗೆ ಒತ್ತು ನೀಡಬೇಕೆಂದು ಅವರು ಒತ್ತಾಯಿಸಿದರು.

ಸರ್ಕಾರದ ಪ್ರಸ್ತಾವನೆ ಪ್ರಕಾರ, ಕರಾವಳಿ ಕರ್ನಾಟಕದ ಪ್ರಸಿದ್ಧ ಕಂಬಳ ಕ್ರೀಡೆಯನ್ನು ಮೈಸೂರಿನಲ್ಲಿ ಪರಿಚಯಿಸುವ ಮೂಲಕ ಅದನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶ ಹೊಂದಲಾಗಿದೆ. ಆದರೆ ಈ ನಿರ್ಧಾರಕ್ಕೆ ಸ್ಥಳೀಯ ಮಟ್ಟದಲ್ಲಿಯೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪರ–ವಿರೋಧ ಚರ್ಚೆಗಳು ತೀವ್ರಗೊಂಡಿವೆ.

ಈ ನಡುವೆ ಯದುವೀರ್ ಒಡೆಯರ್  ಹೇಳಿಕೆ ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲೂ ಗಮನ ಸೆಳೆದಿದ್ದು, ದಸರಾ ಉತ್ಸವದ ರೂಪುರೇಷೆಗಳ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.