ಆನ್‌ಲೈನ್‌ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಪ್ರತಿಭಟನೆ! ಕರ್ನಾಟಕದಲ್ಲಿ ಬಹುತೇಕ ಮೆಡಿಕಲ್‌ ಶಾಪ್‌ ಓಪನ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟಕ್ಕೆ ಸಂಪೂರ್ಣ ಬೆಂಬಲ, 1100 ಶಾಪ್ ಕ್ಲೋಸ್ !

20-05-26 10:33 am       HK News Staffer   ದೇಶ - ವಿದೇಶ

ಆನ್‌ಲೈನ್‌ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಇಂದು (ಮೇ 20) ಔಷಧ ಮಳಿಗೆ ಬಂದ್‌ಗೆ ಕರೆ ನೀಡಲಾಗಿದ್ದರೂ, ಕರ್ನಾಟಕದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಸಂಘಟನೆಗಳು ಸಂಪೂರ್ಣ ಬಂದ್‌ಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಕಪ್ಪುಪಟ್ಟಿ ಧರಿಸಿ ನೈತಿಕ ಬೆಂಬಲ ಸೂಚಿಸಿ ಮೆಡಿಕಲ್‌ ಶಾಪ್‌ಗಳನ್ನು ತೆರೆಯಲು ನಿರ್ಧರಿಸಿವೆ.

ಬೆಂಗಳೂರು, ಮೇ 20: ಆನ್‌ಲೈನ್‌ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಇಂದು (ಮೇ 20) ಔಷಧ ಮಳಿಗೆ ಬಂದ್‌ಗೆ ಕರೆ ನೀಡಲಾಗಿದ್ದರೂ, ಕರ್ನಾಟಕದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಸಂಘಟನೆಗಳು ಸಂಪೂರ್ಣ ಬಂದ್‌ಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಕಪ್ಪುಪಟ್ಟಿ ಧರಿಸಿ ನೈತಿಕ ಬೆಂಬಲ ಸೂಚಿಸಿ ಮೆಡಿಕಲ್‌ ಶಾಪ್‌ಗಳನ್ನು ತೆರೆಯಲು ನಿರ್ಧರಿಸಿವೆ.

ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು. ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್‌ ಶಾಪ್‌ಗಳಿದ್ದು, ಬೆಂಗಳೂರಿನಲ್ಲಿ ಶೇಕಡಾ 90ರಷ್ಟು ಅಂಗಡಿಗಳು ಎಂದಿನಂತೆ ತೆರೆಯಲ್ಪಟ್ಟಿವೆ. ವ್ಯಾಪಾರಿಗಳು ಕಪ್ಪು ರಿಬ್ಬನ್‌ ಧರಿಸಿ ಪ್ರತಿಭಟನೆಗೆ ನೈತಿಕ ಬೆಂಬಲ ಸೂಚಿಸುತ್ತಿದ್ದಾರೆ.

ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಸುಮಾರು 1100ಕ್ಕೂ ಅಧಿಕ ಮೆಡಿಕಲ್‌ ಶಾಪ್‌ಗಳು ಬಂದ್‌ ಆಗಿವೆ. ಆದರೆ ಸಾರ್ವಜನಿಕರಿಗೆ ಔಷಧ ಕೊರತೆ ಉಂಟಾಗದಂತೆ 38 ಅಪೋಲೋ ಮೆಡಿಕಲ್‌ ಮಳಿಗೆಗಳು ಹಾಗೂ 40 ಮೆಡ್‌ ಪ್ಲಸ್‌ ಶಾಪ್‌ಗಳು ತೆರೆಯಲ್ಪಟ್ಟಿವೆ. ಜೊತೆಗೆ 130 ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಗಳು ಕೂಡ ಕಾರ್ಯನಿರ್ವಹಿಸುತ್ತಿವೆ.

ಆರೋಗ್ಯ ಇಲಾಖೆಯು ಕೂಡ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಸೂಚನೆ ನೀಡಿದ್ದು, ತುರ್ತು ಅಗತ್ಯ ಇರುವ ರೋಗಿಗಳಿಗೆ ಔಷಧ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಜಿಎಸ್‌ಆರ್‌ 220(ಇ) ನಿಯಮವನ್ನು ಹಿಂಪಡೆಯಬೇಕು, ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು, ಅತಿಯಾದ ಡಿಸ್ಕೌಂಟ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ವ್ಯಾಪಾರಿಗಳು ಮುಂದಿಟ್ಟಿದ್ದಾರೆ.

ಆನ್‌ಲೈನ್‌ ಮೂಲಕ ನಿಯಂತ್ರಣವಿಲ್ಲದೆ ನಡೆಯುತ್ತಿರುವ ಔಷಧ ಮಾರಾಟದಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಔಷಧ ವ್ಯಾಪಾರಿಗಳು ಆರೋಪಿಸಿದ್ದಾರೆ. ನಕಲಿ ಪ್ರಿಸ್ಕ್ರಿಪ್ಷನ್‌ಗಳ ಬಳಕೆ, ಆಂಟಿಬಯೋಟಿಕ್‌ ಹಾಗೂ ವ್ಯಸನಕಾರಿ ಔಷಧಿಗಳ ದುರುಪಯೋಗ, ರೋಗಿ ಮತ್ತು ಫಾರ್ಮಸಿಸ್ಟ್‌ ನಡುವಿನ ನೇರ ಸಂಪರ್ಕದ ಕೊರತೆ, ಸರಿಯಾದ ಸಂಗ್ರಹಣೆಯಿಲ್ಲದ ಔಷಧಿಗಳ ಅಪಾಯ ಮತ್ತು ಭಾರೀ ರಿಯಾಯಿತಿಗಳಿಂದ ಸಣ್ಣ ವ್ಯಾಪಾರಿಗಳಿಗೆ ಹೊಡೆತ ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೃಹತ್ ಬೆಂಗಳೂರು ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್‌ ಕೇವಲ ನೈತಿಕ ಬೆಂಬಲ ಸೂಚಿಸಿದ್ದು, ರೋಗಿಗಳ ಸೇವೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಅಂಗಡಿಗಳನ್ನು ತೆರೆಯಲಾಗಿದೆ. “ಮೆಡಿಕಲ್‌ ಶಾಪ್‌ ಸಿಬ್ಬಂದಿ ನಿರ್ಭಯವಾಗಿ ರೋಗಿಗಳ ಸೇವೆಯಲ್ಲಿ ನಿರತರಾಗಿರಬೇಕು” ಎಂದು ಸಂಘದ ಅಧ್ಯಕ್ಷ ಎಂ.ಕೆ. ಮಾಯಣ್ಣ ಮನವಿ ಮಾಡಿದ್ದಾರೆ.
ಎಐಒಸಿಡಿ ಅಧ್ಯಕ್ಷ ಜೆ.ಎಸ್. ಶಿಂಧೆ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಕೇವಲ ವ್ಯಾಪಾರ ಸಂಬಂಧಿತ ವಿಷಯವಲ್ಲ, ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಯ ಪ್ರಶ್ನೆಯೂ ಹೌದು ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಔಷಧಿಗಳು ಸಾಮಾನ್ಯ ವಸ್ತುಗಳಲ್ಲ. ಅವುಗಳನ್ನು ವೈದ್ಯರ ಸಲಹೆ ಮತ್ತು ಅರ್ಹ ಫಾರ್ಮಸಿಸ್ಟ್ ಮಾರ್ಗದರ್ಶನದೊಂದಿಗೆ ಮಾತ್ರ ಬಳಸಬೇಕು. ಆನ್‌ಲೈನ್‌ನಲ್ಲಿ ಔಷಧ ಖರೀದಿಸುವಾಗ ಅಧಿಕೃತ ಮತ್ತು ವಿಶ್ವಾಸಾರ್ಹ ವೇದಿಕೆಗಳನ್ನೇ ಬಳಸುವುದು ಅತ್ಯಂತ ಮುಖ್ಯ. ಜನರು ಸ್ವಯಂ ಔಷಧ ಸೇವನೆ ತಪ್ಪಿಸಿ, ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಮತ್ತು ಜವಾಬ್ದಾರಿತನ ಪ್ರದರ್ಶಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.