ಮುಂಬೈನಲ್ಲಿ ಮುಂಗಾರು ರೌದ್ರಾವತಾರ ; 8 ಮಂದಿ ಬಲಿ, 16 ರೈಲು ರದ್ದು, ಮುಂಬೈ–ಪುಣೆ ಸಂಪರ್ಕ ಸಂಪೂರ್ಣ ಕಡಿತ !

06-07-26 01:14 pm       HK News Staffer   ದೇಶ - ವಿದೇಶ

ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ವೇಗ ಪಡೆದುಕೊಂಡಿದ್ದರೂ, ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಳೆ ತನ್ನ ರೌದ್ರ ರೂಪ ಪ್ರದರ್ಶಿಸಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರದೆಲ್ಲೆಡೆ ಭೂಕುಸಿತ, ಕಟ್ಟಡ ಕುಸಿತ, ಪ್ರವಾಹ, ಮರ ಉರುಳುವಂತಹ ಸರಣಿ ಅವಘಡಗಳು ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮುಂಬೈ, , ಜುಲೈ 6: ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ವೇಗ ಪಡೆದುಕೊಂಡಿದ್ದರೂ, ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಳೆ ತನ್ನ ರೌದ್ರ ರೂಪ ಪ್ರದರ್ಶಿಸಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರದೆಲ್ಲೆಡೆ ಭೂಕುಸಿತ, ಕಟ್ಟಡ ಕುಸಿತ, ಪ್ರವಾಹ, ಮರ ಉರುಳುವಂತಹ ಸರಣಿ ಅವಘಡಗಳು ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾನುವಾರ ಒಂದೇ ದಿನ ಸಂಭವಿಸಿದ ವಿವಿಧ ದುರಂತಗಳಲ್ಲಿ 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮುಂಖುರ್ಡ್ ಪ್ರದೇಶದಲ್ಲಿ ಚಾಲ್ ಮಾದರಿಯ ಕಟ್ಟಡದ ಒಂದು ಭಾಗ ಕುಸಿದು 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ಮರ ಬಿದ್ದು ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡರೆ, ಇನ್ನೊಂದು ಪ್ರದೇಶದಲ್ಲಿ ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಉರುಳಿಬಿದ್ದು ಮತ್ತೊಬ್ಬರು ಮೃತಪಟ್ಟಿದ್ದಾರೆ.

ಸೋಮವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ರೈಲು ಹಾಗೂ ರಸ್ತೆ ಸಂಚಾರದ ಮೇಲೆ ತೀವ್ರ ಪರಿಣಾಮ ಬಿದ್ದಿದೆ. ವಿಶೇಷವಾಗಿ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇ ಭೂಕುಸಿತದಿಂದ ಹಾನಿಗೊಳಗಾಗಿರುವ ಕಾರಣ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದ ಮುಂಬೈ ಮತ್ತು ಪುಣೆ ನಡುವಿನ ಸಂಪರ್ಕ ಕಡಿತಗೊಂಡಿದ್ದು, ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.

ಇನ್ನೊಂದೆಡೆ ನಿರಂತರ ಮಳೆಯಿಂದಾಗಿ ಕರ್ಜತ್–ಲೋನಾವಾಲ ಭೋರ್ ಘಾಟ್ ವಿಭಾಗದಲ್ಲಿ ಸೋಮವಾರ ಬೆಳಗಿನ ಜಾವ ಸುಮಾರು 3.05 ಗಂಟೆಗೆ ಠಾಕೂರ್ವಾಡಿ ಬಳಿ ಮೊದಲ ಭೂಕುಸಿತ ಸಂಭವಿಸಿದೆ. ಅದರ ಕೆಲವೇ ಹೊತ್ತಿನಲ್ಲಿ ಖಂಡಾಲಾ ಮತ್ತು ಮಂಕಿ ಹಿಲ್ ನಡುವೆಯೂ ಮತ್ತೊಂದು ಭೂಕುಸಿತ ಸಂಭವಿಸಿದೆ. ಭೋರ್ ಘಾಟ್‌ನ ಅಪ್ ಲೈನ್, ಡೌನ್ ಲೈನ್ ಹಾಗೂ ಮಧ್ಯ ರೈಲು ಮಾರ್ಗಗಳ ಮೇಲೂ ಮಣ್ಣು ಮತ್ತು ಕಲ್ಲುಗಳು ಕುಸಿದಿರುವುದರಿಂದ ರೈಲು ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಕರ್ಜತ್ ಮತ್ತು ಲೋನಾವಾಲ ನಡುವಿನ ಆಗ್ನೇಯ ಘಾಟ್ ವಿಭಾಗದಲ್ಲಿಯೂ ಮಂಕಿ ಹಿಲ್ ಲೂಪ್ ಕ್ಯಾಬಿನ್ ಸಮೀಪ ಭೂಕುಸಿತ ಸಂಭವಿಸಿರುವುದರಿಂದ ರೈಲ್ವೆ ಇಲಾಖೆ ತುರ್ತು ಕ್ರಮ ಕೈಗೊಂಡಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ನಗರಕ್ಕೆ ಹಾಗೂ ನಗರದಿಂದ ಸಂಚರಿಸುವ 16 ರೈಲುಗಳ ಸೇವೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, 9 ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪ್ರಯತ್ನವೂ ನಡೆಯುತ್ತಿದೆ.

ರದ್ದುಗೊಂಡ ಪ್ರಮುಖ ರೈಲುಗಳಲ್ಲಿ ಸಿಎಸ್‌ಎಂಟಿ–ಪುಣೆ ಇಂದ್ರಯಾಣಿ ಎಕ್ಸ್‌ಪ್ರೆಸ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್, ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್‌ಪ್ರೆಸ್, ಧುಲೆ ಎಕ್ಸ್‌ಪ್ರೆಸ್ ಹಾಗೂ ಪುಣೆ–ಸಿಎಸ್‌ಎಂಟಿ ಸಿಂಹಗಡ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಪ್ರಮುಖ ಸೇವೆಗಳಿವೆ. ಇನ್ನೂ ಕೆಲವು ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ.

ಭೂಕುಸಿತದ ಹಿನ್ನೆಲೆಯಲ್ಲಿ ರೈಲ್ವೆ ಸಿಬ್ಬಂದಿ, ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಆಡಳಿತ ಯುದ್ಧೋಪಾದಿಯಲ್ಲಿ ಮಣ್ಣು ತೆರವು, ಹಳಿ ದುರಸ್ತಿ ಹಾಗೂ ಸಂಚಾರ ಪುನಃಸ್ಥಾಪನೆ ಕಾರ್ಯದಲ್ಲಿ ತೊಡಗಿದೆ. ಆದರೆ ನಿರಂತರ ಮಳೆ ಸುರಿಯುತ್ತಿರುವ ಕಾರಣ ಕಾರ್ಯಾಚರಣೆಗೆ ಸವಾಲು ಎದುರಾಗಿದೆ.

ಹವಾಮಾನ ಇಲಾಖೆ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆಡಳಿತ ಸಾರ್ವಜನಿಕರಿಗೆ ಅಗತ್ಯವಿಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಿದೆ.