ಬ್ರೇಕಿಂಗ್ ನ್ಯೂಸ್
02-08-22 11:13 am Giridhar Shetty, Mangaluru ನ್ಯೂಸ್ View
ಪುತ್ತೂರು, ಆಗಸ್ಟ್ 2: ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಇತಿಹಾಸ ಕಂಡು ಕೇಳರಿಯದ ರೀತಿ ಮಳೆಯಾಗಿದೆ. ಸೋಮವಾರ ಮಧ್ಯಾಹ್ನ ಶುರುವಾದ ಮಳೆ ನಿರಂತರವಾಗಿ ಸುರಿದಿದ್ದು, ರಾತ್ರಿ ವೇಳೆಗೆ ಆಸುಪಾಸಿನ ಗ್ರಾಮಗಳಲ್ಲಿ ಅನಾಹುತವನ್ನೇ ಸೃಷ್ಟಿಸಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಒಂದೇ ದಿನ 28 ಸೆಂಟಿ ಮೀಟರ್ ಮಳೆಯಾಗಿದೆ. ಸಂಪಾಜೆ, ಕಲ್ಲುಗುಂಡಿ ಆಸುಪಾಸಿನಲ್ಲಿ 140 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಆಗಸ್ಟ್ 1ರ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಆಗಸ್ಟ್ 2ರ ಮಂಗಳವಾರ ಬೆಳಗ್ಗೆ 7 ಗಂಟೆ ವರೆಗಿನ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗಿರುವ ಪ್ರದೇಶಗಳ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಅದರಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಆಸುಪಾಸಿನಲ್ಲಿ. ಭಟ್ಕಳದ ಮುತ್ತತ್ತಿ ಎಂಬಲ್ಲಿ 53 ಸೆಂಟಿ ಮೀಟರ್, ಮುಂಡಳ್ಳಿ ಎಂಬಲ್ಲಿ 52 ಸೆಮೀ, ಭಟ್ಕಳದಲ್ಲಿ 51 ಸೆಮೀ, ಮಾವಿನಕುರ್ವೆ- 49 ಸೆಮೀ, ಭಟ್ಕಳ ಕೊಪ್ಪದಲ್ಲಿ 48 ಸೆಮೀ, ಭಟ್ಕಳ ಬೆಂಗ್ರೆ-45 ಸೆಮೀ, ಮಾರುಕೇರಿ- 38 ಸೆ.ಮೀ, ಕಾಯ್ಕಿಣಿ- 35 ಸೆಮೀ, ಭಟ್ಕಳ ಮಾವಳ್ಳಿ -22 ಸೆಮೀ ಮಳೆಯಾಗಿದೆ.
ಕುಂದಾಪುರದ ಶಿರೂರಿನಲ್ಲಿ 47 ಸೆಮೀ, ಪಡುವರಿ- 39 ಸೆಮೀ, ಯಡ್ತರೆ- 35 ಸೆಮೀ, ಕಾಲ್ತೋಡು- 23, ಬಿಜೂರು- 21 ಸೆಮೀ, ಉಪ್ಪುಂದ - 27 ಸೆಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ 28 ಸೆಮೀ ಮಳೆಯಾಗಿದ್ದರೆ, ಸಂಪಾಜೆಯಲ್ಲಿ 14 ಸೆಮೀ ಮಳೆಯಾಗಿದೆ. ಉಳಿದಂತೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಆಸುಪಾಸಿನಲ್ಲಿ 15 ಸೆಮೀನಷ್ಟು ಮಳೆ ಬಿದ್ದಿರುವುದನ್ನು ಹವಾಮಾನ ಇಲಾಖೆ ದಾಖಲಿಸಿದೆ. ಮಳೆಯ ಅಂಕಿ ಅಂಶಗಳನ್ನು ನೋಡಿದರೆ, ಕುಂದಾಪುರ ಮತ್ತು ಭಟ್ಕಳ ಆಸುಪಾಸಿನಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ. ಒಂದೇ ದಿನದಲ್ಲಿ 50 ಸೆಂಟಿ ಮೀಟರಿನಷ್ಟು ಮಳೆಯಾಗಿರುವುದು ಕಂಡುಬಂದಿದೆ. ಆದರೆ, ಅಲ್ಲಿ ಯಾವುದೇ ವಿಕೋಪಗಳು ಆಗದೇ ಇದ್ದರೂ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಮಾತ್ರ ವಿಪರೀತ ಎನ್ನುವ ರೀತಿ ದುರಂತಗಳು ಸಂಭವಿಸಿದೆ.
ಕಳೆದ ಬಾರಿ ಸಂಪಾಜೆ, ಮಡಿಕೇರಿ ವ್ಯಾಪ್ತಿಯ ಜೋಡುಪಾಲ, ಮದೆನಾಡು, ಮೊಣ್ಣಂಗೇರಿ, ನಾಪೋಕ್ಲು ಭಾಗದಲ್ಲಿ ಆಗಿರುವ ರೀತಿಯಲ್ಲೇ ಬೆಟ್ಟಗಳ ಮಧ್ಯೆ ಜಲಸ್ಫೋಟಗಳಾಗಿದ್ದು, ಬಾಳುಗೋಡು, ಕಲ್ಮಕಾರು, ಹರಿಹರ, ಸುಬ್ರಹ್ಮಣ್ಯ ಗ್ರಾಮಗಳು ಅಕ್ಷರಶಃ ನಲುಗಿ ಹೋಗಿವೆ. ಬೆಟ್ಟಗಳ ನಡುವೆ ಭೀಕರ ಸ್ಫೋಟಗಳಾಗಿದ್ದು, ಭಾರೀ ಪ್ರಮಾಣದ ನೀರಿನೊಂದಿಗೆ ಅಲ್ಲಿದ್ದ ಬೃಹತ್ ಮರಗಳು ಛಿದ್ರಗೊಂಡು ಬಿದ್ದಿವೆ. ಬಂಡೆ ಕಲ್ಲುಗಳು, ಮಣ್ಣು ದೂರಕ್ಕೆ ಅಪ್ಪಳಿಸಿದಂತೆ ಬಿದ್ದಿದ್ದು ಮಣ್ಣು ಕೆಸರು, ಮರಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದ್ದು, ತಪ್ಪಲು ಭಾಗದಲ್ಲಿ ಜನರು ನೆಲೆಸಿರುವ ಗ್ರಾಮಗಳನ್ನು ನಲುಗಿಸಿದೆ. ಗುಡ್ಡ ಕುಸಿದು ಹಲವಾರು ಮನೆಗಳಿಗೆ ಆಪತ್ತು ಎದುರಾಗಿದ್ದರೆ, ಸುಬ್ರಹ್ಮಣ್ಯ ಬಳಿಕ ಮನೆಯೊಂದು ನೆಲಸಮವಾಗಿ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ.
ಐದಾರು ವರ್ಷಗಳಲ್ಲೇ ಜಲಸ್ಫೋಟ ಯಾಕೆ ?
ಕಳೆದ ಐದಾರು ವರ್ಷಗಳಲ್ಲಿ ಬೆಳ್ತಂಗಡಿ, ಸುಳ್ಯ, ಸಕಲೇಶಪುರ, ಸಂಪಾಜೆ ವ್ಯಾಪ್ತಿಯಲ್ಲಿ ಪ್ರತಿ ಬಾರಿಯೂ ಇಂಥಹದ್ದೇ ಜಲ ಸ್ಫೋಟ ಘಟನೆಗಳು ಮರುಕಳಿಸುತ್ತಿವೆ. ಇದಕ್ಕೂ ಮೊದಲು ಈ ರೀತಿಯ ದುರಂತ ಎದುರಾಗಿದ್ದೇ ಇಲ್ಲ. ಬೆಟ್ಟಗಳು ಭೀಕರವಾಗಿ ಸ್ಫೋಟಗೊಂಡು ಜನ ಕಂಡುಕೇಳರಿಯದ ರೀತಿ ಜಲಪ್ರವಾಹಗಳು ಎದುರಾಗುತ್ತಿವೆ. ಸೋಮವಾರ ರಾತ್ರಿ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಎದುರಲ್ಲಿ ಹರಿಯುವ ದರ್ಪಣ ತೀರ್ಥದಲ್ಲಿ ಅಲ್ಲಿನ ಜನ ಹಿಂದೆಂದೂ ಕಂಡರಿಯದ ರೀತಿ ಕೆಸರು ಮಣ್ಣಿನೊಂದಿಗೆ ಪ್ರವಾಹ ಬಂದಿತ್ತು. ಮರಗಳ ದಿಮ್ಮಿಗಳು ಛಿದ್ರಗೊಂಡು ಬಂದು ದೇವಸ್ಥಾನದ ಮುಂದೆ ಬಿದ್ದಿವೆ. ಕಾಡಿನ ಮಧ್ಯದ ಮರಗಳು ಛಿದ್ರಗೊಂಡ ಕಾರಣ ಔಷಧೀಯ ಸಸ್ಯಗಳ ಪರಿಣಾಮವೋ ಏನೋ, ಕೆಸರು ಮಿಶ್ರಿತ ನೀರಿನಲ್ಲಿ ಸುವಾಸನೆ ಹರಡಿಕೊಂಡಿದೆ. ಪ್ರತಿ ಬಾರಿ ಇದೇ ರೀತಿಯ ಅನಾಹುತ ಇಲ್ಲಿ ಯಾಕೆ ಸಂಭವಿಸುತ್ತಿದೆ ಅನ್ನುವ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ನಿಖರವಾಗಿ ಹೇಳಿಲ್ಲ. ಮಾನವ ನಿರ್ಮಿತ ವೈಪರೀತ್ಯಗಳ ಪರಿಣಾಮ ಎಂದಷ್ಟೇ ಹೇಳುತ್ತಾರೆ. ಎತ್ತಿನಹೊಳೆ ಯೋಜನೆಯ ಕಾರಣಕ್ಕೆ ಪಶ್ಚಿಮ ಘಟ್ಟಗಳ ತುದಿಯನ್ನು ಅಗೆದು ಸಮತಟ್ಟು ಮಾಡಿರುವುದು, ಅಲ್ಲಿ ಹೆಚ್ಚು ಮಳೆಯಾದಾಗ ನೀರು ಒಳಗಡೆ ಇಂಗುವುದರಿಂದ ಅದೇ ನೀರು ತಳಭಾಗದ ಬೆಟ್ಟಗಳೆಡೆಯಲ್ಲಿ ಬಂದು ಸ್ಫೋಟಗೊಂಡು ಹೊರಬರುತ್ತದೆ ಎನ್ನುತ್ತಾರೆ, ಪರಿಸರ ತಜ್ಞರು.
ದಾರಿ ತಪ್ಪಿಸುವ ಸರಕಾರಿ ಅಧಿಕಾರಿಗಳು
ಆದರೆ ಈ ದುರಂತಗಳ ಬಗ್ಗೆ ತಿಳಿದಿದ್ದರೂ, ನೈಜ ಕಾರಣವನ್ನು ಪ್ರಾಕೃತಿಕ ವಿಕೋಪ ಇಲಾಖೆಯ ತಜ್ಞರು ಸರಕಾರದ ಮುಂದಿಡುವುದಿಲ್ಲ. ಪ್ರತಿ ಬಾರಿ ಅಧ್ಯಯನಕ್ಕೆ ಬಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟ ರೀತಿ ಏನೋ ವರದಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಸರಕಾರದ ಅವೈಜ್ಞಾನಿಕ ಯೋಜನೆಗಳಿಂದಾಗಿಯೇ ಯಾರೋ ಅಮಾಯಕರು ಬಲಿಪಶು ಆಗುತ್ತಿದ್ದಾರೆ ಎನ್ನುವುದನ್ನು ವರದಿಯಲ್ಲಿ ತೋರಿಸುತ್ತಿಲ್ಲ. ಇದರಿಂದಾಗಿ ಯಾರೋ ಮಾಡಿದ ಕರ್ಮಕ್ಕೆ ಅಮಾಯಕ ಜನರು ಪ್ರತಿಬಾರಿ ಬಲಿಯಾಗುತ್ತಿದ್ದಾರೆ. ಕಳೆದ ಬಾರಿ ಮಡಿಕೇರಿ, ಸಂಪಾಜೆ ಆಸುಪಾಸಿನಲ್ಲಿ ದುರಂತ ಎದುರಾಗಿತ್ತು. ಆನಂತರದ ವರ್ಷಗಳಲ್ಲಿ ಬೆಳ್ತಂಗಡಿಯ ಮಲವಂತಿಗೆ ಆಸುಪಾಸಿನಲ್ಲಿ ಇದೇ ಮಾದರಿ ದುರಂತ ಉಂಟಾಗಿತ್ತು. ದಿಢೀರ್ ಆಗಿ ಎಲ್ಲೋ ಒಂದ್ಕಡೆ ಬೆಟ್ಟಗಳು ಸ್ಫೋಟಗೊಂಡು ಕೆಸರು ನೀರಿನ ಪ್ರವಾಹ ಉಂಟಾಗಿ ಜನರನ್ನು ಚಕಿತಗೊಳಿಸುವ ಘಟನೆಗಳು ನಡೆದಿವೆ.
ಕಸ್ತೂರಿರಂಗನ್ ವರದಿ ಜಾರಿಯಾಗಲಿ
ಇದೇ ವೇಳೆ, ಸರಕಾರದ ಅವೈಜ್ಞಾನಿಕ ಯೋಜನೆಗಳಿಗೆ ಶಾಶ್ವತವಾಗಿ ಇತಿಶ್ರೀ ಹಾಕಬಲ್ಲ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಕೊಟ್ಟಿರುವ ಕಸ್ತೂರಿ ರಂಗನ್ ವರದಿ, ಮಾಧವ ಗಾಡ್ಗೀಳ್ ವರದಿಗಳನ್ನು ಸರಕಾರಿ ಪ್ರಾಯೋಜಿತ ಎಸ್ಟೇಟ್ ಮಾಫಿಯಾಗಳು, ರಾಜಕಾರಣಿಗಳು ನಿರಾಕರಣೆ ಮಾಡುತ್ತಲೇ ಬಂದಿದ್ದಾರೆ. ಇಂಥ ವರದಿಗಳಿಂದ ಅಲ್ಲಿರುವ ಮೂಲ ನಿವಾಸಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹೊಸತಾಗಿ ಬಂದು ಅರಣ್ಯ ಅತಿಕ್ರಿಮಿಸಿ ಎಸ್ಟೇಟ್ ಮಾಡಲಾಗದು ಅಷ್ಟೇ. ದೊಡ್ಡ ರೀತಿಯ ಅಭಿವೃದ್ಧಿ ಯೋಜನೆಗಳು, ಹೊಸತಾಗಿ ಅಣೆಕಟ್ಟುಗಳು, ಜಲವಿದ್ಯುತ್ ಸ್ಥಾವರಗಳನ್ನು ಮಾಡುವಂತಿಲ್ಲ. ಇದರಿಂದ ಸಾಮಾನ್ಯ ಜನರಿಗೆ ಸಮಸ್ಯೆ ಇರುವುದಿಲ್ಲ.
ವಿನಾಕಾರಣ ವದಂತಿ ಎಬ್ಬಿಸುವ ಯತ್ನ
ವಾಸ್ತವ ಹೀಗಿದ್ದರೂ, ಸಾಮಾನ್ಯ ಜನರನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಗುಲ್ಲು ಎಬ್ಬಿಸಿ ಇಂಥ ವರದಿಗಳನ್ನೇ ನಿರಾಕರಿಸಲು ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಒತ್ತಡ ಹೇರುವಂತೆ ಮಾಡುತ್ತಿದ್ದಾರೆ. ಕಸ್ತೂರಿರಂಗನ್ ವರದಿಯಲ್ಲಿ ಮಲವಂತಿಗೆ ಆಸುಪಾಸಿನ ಗ್ರಾಮಗಳು, ಸುಬ್ರಹ್ಮಣ್ಯ ಆಸುಪಾಸಿನ ಕಲ್ಮಕಾರು, ಬಾಳುಗೋಡು, ಹರಿಹರ ಗ್ರಾಮಗಳು, ಸಂಪಾಜೆ ಆಸುಪಾಸಿನ ಗ್ರಾಮಗಳು ಸೇರ್ಪಡೆಯಾಗಿದ್ದು, ಅಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ನೀಡಬಾರದು ಎಂದಷ್ಟೇ ಹೇಳಿದೆ. ಅಷ್ಟು ಮಾತ್ರಕ್ಕೆ ಅಲ್ಲಿ ಸೇತುವೆ ಕಟ್ಟಬಾರದು ಎಂದೇನಿಲ್ಲ. ಅಲ್ಲಿರುವ ಮೂಲ ನಿವಾಸಿಗಳನ್ನು ಬಿಟ್ಟು ಬೇರೆಯವರು ಅಲ್ಲಿ ಬಂದು ನೆಲೆಸುವಂತಿಲ್ಲ ಎಂದಷ್ಟೇ ಇದೆ. ಇದರಿಂದ ಆಪತ್ತು ಬರುತ್ತದೆ ಎನ್ನುವುದು ಸಾಮಾನ್ಯ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಅಷ್ಟೇ.
ಕಸ್ತೂರಿರಂಗನ್ ವರದಿ ಯಥಾವತ್ತಾಗಿ ಜಾರಿಯಾದಲ್ಲಿ ಎತ್ತಿನಹೊಳೆ ಯೋಜನೆಗೂ ಕುತ್ತು ಬರುತ್ತದೆ. ಸಂರಕ್ಷಿತ ಪ್ರದೇಶ ಎಂದು ಗುರುತಿಸಲ್ಪಡುವ ಪಶ್ಚಿಮ ಘಟ್ಟಗಳಲ್ಲಿ ಜೆಸಿಬಿ ಮೊರೆತವೂ ನಿಲ್ಲುತ್ತದೆ. ಭವಿಷ್ಯದಲ್ಲಿ ಈ ರೀತಿಯ ದುರಂತಗಳಿಗೂ ಕಡಿವಾಣ ಬೀಳಬಹುದು. ಇದಕ್ಕಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕಸ್ತೂರಿರಂಗನ್ ವರದಿ ಜಾರಿಗಾಗಿ ಒತ್ತಡ ಹೇರಬೇಕು.
What caused heavy rains in Subramanya report by Headline Karnataka. According to the weather forecast report Subramanya has reported 28 cent meter..
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 03:24 pm
Mangalore Correspondent
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm