ಬ್ರೇಕಿಂಗ್ ನ್ಯೂಸ್
13-09-22 06:14 pm ಗಿರಿಧರ್ ಶೆಟ್ಟಿ , ಮಂಗಳೂರು | Giridhar Shetty ನ್ಯೂಸ್ View
ಪುತ್ತೂರು, ಸೆ.13: ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲೇ ಉದ್ಯೋಗ ತೆಗೆಸಿಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಒಂದ್ಕಡೆ ಪ್ರಕರಣದ ಬಗ್ಗೆ ಎನ್ಐಎ ತನಿಖೆ, ಮತ್ತೊಂದ್ಕಡೆ ಮನೆಯವರಿಗೆ ಪರಿಹಾರ ಧನ, ಇದೀಗ ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗವನ್ನೂ ಘೋಷಣೆ ಮಾಡಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಕಾರ್ಯಕರ್ತರ ಆಕ್ರೋಶ, ಆಮೂಲಕ ಬಿಜೆಪಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದು ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ.
ಆದರೆ ಬಿಜೆಪಿ ಮೂಲಗಳ ಪ್ರಕಾರ, ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗ ದೊರಕಿಸುವುದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕಾರಣ ಎನ್ನಲಾಗುತ್ತಿದೆ. ಪ್ರವೀಣ್ ಕೊಲೆಯಾದ ಎರಡು ದಿನದಲ್ಲೇ ಸುಳ್ಯದ ಬೆಳ್ಳಾರೆಯ ನೆಟ್ಟಾರಿನ ಮನೆಗೆ ಆಗಮಿಸಿದ್ದ ವಿಜಯೇಂದ್ರ ಅವರ ಬಳಿ ಸ್ಥಳೀಯ ಕಾರ್ಯಕರ್ತರು ಸರಕಾರಿ ಉದ್ಯೋಗ ದೊರಕಿಸುವಂತೆ ಮನವಿ ನೀಡಿದ್ದರು. ಅಲ್ಲದೆ, ನಾವು ಬೇರೆಯವರಿಗೆ ಮನವಿ ನೀಡುವುದಿಲ್ಲ. ನಿಮ್ಮಲ್ಲಿ ಮಾತ್ರ ಮನವಿ ಕೊಡುತ್ತಿದ್ದೇವೆ ಎಂದು ಹೇಳಿ ಅಹವಾಲು ಹೇಳಿಕೊಂಡಿದ್ದರು. ಒಂದು ದಿನದ ಹಿಂದಷ್ಟೇ ಪಕ್ಷದ ನಾಯಕರಿಗೆ ಧಿಕ್ಕಾರ ಕೂಗಿದ್ದ ಕಾರ್ಯಕರ್ತರು, ವಿಜಯೇಂದ್ರ ಎದುರಲ್ಲಿ ಆಕ್ರೋಶ ತೋರಿರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನು ಅಲುಗಾಡಿಸಿದವರೇ ಸುಮ್ಮನಿದ್ದರು.
ಕಾರ್ಯಕರ್ತರ ಅಹವಾಲನ್ನು ಸಮಾಧಾನದಿಂದಲೇ ಆಲಿಸಿದ್ದ ವಿಜಯೇಂದ್ರ, ತನ್ನಿಂದಾಗುವ ಸಹಾಯವನ್ನು ಮಾಡುವುದಾಗಿ ಹೇಳಿದ್ದರು. ಮೊನ್ನೆ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದಲೇ ಸರಕಾರಿ ಉದ್ಯೋಗದ ಹೇಳಿಕೆ ಕೊಡಿಸಿದ್ದೂ ವಿಜಯೇಂದ್ರ ಅನ್ನುವುದನ್ನು ಮೂಲಗಳು ಹೇಳುತ್ತಿವೆ. ಅದಕ್ಕೂ ಹಿಂದೆ ನಡೆದಿದ್ದ ಪಕ್ಷದ ಸಭೆಯಲ್ಲಿ ಪ್ರವೀಣ್ ಪತ್ನಿಗೆ ಉದ್ಯೋಗ ನೀಡುವ ಬಗ್ಗೆ ಪ್ರಸ್ತಾಪಿಸಿದ್ದ ವಿಜಯೇಂದ್ರ, ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದರು. ಸಿಎಂ ಬೊಮ್ಮಾಯಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರವೀಣ್ ಕುಟುಂಬಸ್ಥರಿಗೆ ಉದ್ಯೋಗದ ಭರವಸೆ ನೀಡಿದ್ದು ಮಾಧ್ಯಮದಲ್ಲೂ ಹೈಲೈಟ್ ಆಗಿತ್ತು.

ಚುನಾವಣೆಗಷ್ಟೇ ಸೀಮಿತರಾದ ಶರತ್, ದೀಪಕ್
ಇದೇ ವೇಳೆ, ಈ ಹಿಂದೆ ಕರಾವಳಿಯಲ್ಲಿ ಹತ್ಯೆಗೀಡಾದ ಶರತ್ ಮಡಿವಾಳ, ದೀಪಕ್ ರಾವ್ ಕುಟುಂಬಕ್ಕೂ ಉದ್ಯೋಗ ನೀಡಿಲ್ಲ ಅನ್ನುವ ವಿಚಾರವೂ ಮುನ್ನಲೆಗೆ ಬಂದಿದೆ. 2018ರ ವಿಧಾನಸಭೆ ಚುನಾವಣೆಯ ಕೆಲವೇ ಸಮಯದ ಹಿಂದೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯಾಗಿತ್ತು. ಅದಕ್ಕೂ ಹಿಂದೆ, 2017ರಲ್ಲಿ ಬಿಸಿ ರೋಡಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ನಡೆದಿತ್ತು. ಇವೆರಡೂ ಹತ್ಯೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಧ್ರುವೀಕರಣಕ್ಕೆ ಕಾರಣವಾಗಿದ್ದಲ್ಲದೆ, ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿತ್ತು. ಹಿಂದುಗಳನ್ನು ಕಾಂಗ್ರೆಸ್ ಸರಕಾರ ಹತ್ಯೆ ಮಾಡುತ್ತಿದೆ ಎಂದೇ ಬಿಜೆಪಿ ನಾಯಕರು ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ಅದರ ಪರಿಣಾಮ, 2018ರ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟರಲ್ಲಿ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.

ದೀಪಕ್ ರಾವ್ ತಮ್ಮನಿಗೆ ಉದ್ಯೋಗ ಸಿಗಲೇ ಇಲ್ಲ
ಕೊಲೆಯಾಗಿದ್ದ ದೀಪಕ್ ರಾವ್ ತಮ್ಮ ಸತೀಶ್ ಬಾಯಿ ಬಾರದ ವಿಕಲ ಚೇತನ. ಆತನಿಗೆ ಎನ್ಎಂಪಿಟಿಯಲ್ಲಿ ಉದ್ಯೋಗ ತೆಗೆಸಿಕೊಡುತ್ತೇನೆ ಎಂದು ಸಂಸದ ನಳಿನ್ ಕುಮಾರ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಎನ್ಎಂಪಿಟಿ ಅಧಿಕಾರಿಗಳಿಗೆ ಹೇಳಿದ್ದೇನೆ, ಕೆಲವೇ ಸಮಯದಲ್ಲಿ ಉದ್ಯೋಗದ ನೇಮಕಾತಿ ಪತ್ರ ಸಿಗಲಿದೆ ಎಂದು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೇಳಿ ಪ್ರಚಾರ ಗಿಟ್ಟಿಸಿದ್ದರು. ಆದರೆ, ಅದಾಗಿ ನಾಲ್ಕು ವರ್ಷ ಕಳೆದರೂ, ಸತೀಶ್ ಗೆ ಉದ್ಯೋಗ ಲಭಿಸಿಲ್ಲ. ತೀರಾ ಬಡ ಕುಟುಂಬವಾಗಿದ್ದ ಸತೀಶ್ ರಾವ್, ದೀಪಕ್ ಹೆಸರಲ್ಲಿ ಸಿಕ್ಕಿದ್ದ ಒಂದಷ್ಟು ಪರಿಹಾರ ಧನವನ್ನು ಪಡೆದು ಕಾಟಿಪಳ್ಳವನ್ನು ತೊರೆದು ತಾಯಿ ಜೊತೆಗೆ ಕಾರ್ಕಳದಲ್ಲಿ ನೆಲೆಸಿದ್ದಾರೆ. ಬಿಜೆಪಿ ನಾಯಕರು ಆಬಳಿಕ ದೀಪಕ್ ರಾವ್ ಕುಟುಂಬವನ್ನು ಮರೆತೇ ಬಿಟ್ಟಿದ್ದಾರೆ. ಆನಂತರ ಶಾಸಕರಾದ ಭರತ್ ಶೆಟ್ಟಿ ಕಾಟಿಪಳ್ಳದಲ್ಲಿ ದೀಪಕ್ ರಾವ್ ಸ್ಮರಣಾರ್ಥ ಬಸ್ ನಿಲ್ದಾಣವನ್ನು ಮಾಡಿದ್ದಾರೆ. ಉಳಿದಂತೆ, ಆ ಕುಟುಂಬಕ್ಕೆ ಬದುಕಿನ ದಾರಿ ತೋರಿಸಲು ಬಿಜೆಪಿ ನಾಯಕರು ಮುಂದಾಗಿಲ್ಲ.

ಸಾವಿರಾರು ಮಂದಿಗೆ ಆದರ್ಶವಾಗಿದ್ದ ಶರತ್ ಮಡಿವಾಳ
ಬಂಟ್ವಾಳ ತಾಲೂಕಿನ ಸಜಿಪದ ಸಣ್ಣ ಮನೆಯಲ್ಲಿ ನೆಲೆಸಿದ್ದ ಶರತ್ ಮಡಿವಾಳ ಅಪ್ಪಟ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ. ಬಿಜೆಪಿ ಪಾಲಿಗೆ ಪ್ರವೀಣ್ ನೆಟ್ಟಾರು ಹೇಗಿದ್ದರೋ, ಅದೇ ರೀತಿ ಸುತ್ತಮುತ್ತಲ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಶರತ್ ಮಡಿವಾಳ ಪ್ರೇರಣಾದಾಯಿ ಆಗಿದ್ದ. ತಂದೆಯ ಜೊತೆ ಬಿಸಿ ರೋಡಿನಲ್ಲಿ ಕುಲದ ವೃತ್ತಿ ಅನ್ನುವ ನೆಲೆಯಲ್ಲಿ ಬಟ್ಟೆ ತೊಳೆದು ಇಸ್ತ್ರಿ ಮಾಡಿಕೊಡುವ ಕೆಲಸ ಮಾಡುತ್ತಿದ್ದ. ಜೊತೆ ಜೊತೆಗೆ ಆರೆಸ್ಸೆಸ್ ನಲ್ಲಿ ತೊಡಗಿಸಿ ಸಜಿಪ ಸುತ್ತಮುತ್ತಲಲ್ಲಿ ಶಾಖೆಗಳನ್ನು ನಡೆಸುತ್ತಿದ್ದ. ಯಾರ ತಂಟೆಗೂ ಬಾರದ ನಿಯತ್ತಿನ ಯುವಕನಾಗಿದ್ದ. ಆದರೆ, ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆಗೆ ಪ್ರತೀಕಾರ ತೀರಿಸಲು ಪಿಎಫ್ಐ ನಾಯಕರು ಪ್ಲಾನ್ ಹಾಕಿದ್ದರು. 2017ರ ಜುಲೈ 4ರಂದು ಬಿಸಿ ರೋಡಿನಲ್ಲಿ ರಾತ್ರಿ 9.30ಕ್ಕೆ ತನ್ನ ಅಂಗಡಿ ಬಂದ್ ಮಾಡಿ ಹೋಗುತ್ತಿದ್ದಾಗಲೇ ದುಷ್ಕರ್ಮಿಗಳು ಶರತ್ ಮಡಿವಾಳನನ್ನು ಕಡಿದು ಭೀಕರವಾಗಿ ಹತ್ಯೆ ಮಾಡಿದ್ದರು. ಅಂದು ಕೂಡ ಕಾರ್ಯಕರ್ತರ ಆಕ್ರೋಶದ ಕಟ್ಟೆಯೊಡೆದಿತ್ತು. ಶವ ಯಾತ್ರೆಯ ಸಂದರ್ಭದಲ್ಲಿ ಬಿಸಿ ರೋಡಿನಲ್ಲಿ ಕಲ್ಲು ತೂರಾಟವೂ ನಡೆದಿತ್ತು. ಕೊಲೆಯ ಬಳಿಕ ಬಂಟ್ವಾಳದಲ್ಲಿ ನಿರಂತರ 50 ದಿನಗಳ ಕಾಲ ಸೆಕ್ಷನ್ ಹಾಕಲಾಗಿತ್ತು. ಕಾಂಗ್ರೆಸ್ ನಾಯಕರ ಬಗ್ಗೆಯೂ ಆರೋಪ ಕೇಳಿಬಂದಿತ್ತು. ಕೊಲೆ ಕೃತ್ಯದ ಕಾರಣ ಬಂಟ್ವಾಳದಲ್ಲಿ ಕೋಮು ಧ್ರುವೀಕರಣಗೊಂಡು ಬಿಜೆಪಿಗೆ ಲಾಭವಾಗಿತ್ತು. ಆದರೆ, ಚುನಾವಣೆ ಬಳಿಕ ಶರತ್ ಮಡಿವಾಳ ಕುಟುಂಬವನ್ನು ಬಿಜೆಪಿ ನಾಯಕರು ಮರೆತು ಬಿಟ್ಟಿದ್ದರು.

ಕೊಲೆ ಕೃತ್ಯದಲ್ಲಿ ಪಿಎಫ್ಐ ಕೈವಾಡ ಸಾಬೀತಾಗಿತ್ತು
ತನಿಖೆ ನಡೆಸಿದ್ದ ಪೊಲೀಸರು ಕೊಲೆ ಕೃತ್ಯದಲ್ಲಿ ಪಿಎಫ್ಐ ನಾಯಕರ ಕೈವಾಡದ ಬಗ್ಗೆ ಹೇಳಿದ್ದರು. ಸ್ಥಳೀಯರೇ ಕೆಲವರು ಸುಪಾರಿ ಕೊಟ್ಟು ಕೊಲ್ಲಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಚಾಮರಾಜನಗರದಲ್ಲಿ ಅವಿತುಕೊಂಡಿದ್ದವರು, ಮೈಸೂರಿನಲ್ಲಿದ್ದ ಪಿಎಫ್ಐ ನಾಯಕರು ಪ್ರಕರಣದಲ್ಲಿ ಬಂಧನವಾಗಿದ್ದರು. ಇವೆಲ್ಲ ಅಂದಿನ ತನಿಖೆಯಲ್ಲಿ ಸಾಬೀತಾಗಿದ್ದರೂ, ಆನಂತರ ಬಿಜೆಪಿ ಸರಕಾರ ಆಡಳಿತಕ್ಕೆ ಬಂದರೂ ಆ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲು ಮುಂದಾಗಿಲ್ಲ. ಪಿಎಫ್ಐ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಮುಂದಾಗಿಲ್ಲ. ಶರತ್ ಮಡಿವಾಳ ಪ್ರಕರಣದ ಬಗ್ಗೆಯೂ ಎನ್ಐಎ ತನಿಖೆ ನಡೆಸಬೇಕೆಂಬ ಆಗ್ರಹ ಇದ್ದರೂ, ಅದನ್ನು ತನಿಖೆಗೆ ಕೊಟ್ಟಿಲ್ಲ. ಇತ್ತೀಚೆಗೆ ರಾಜ್ಯದ ಪ್ರಮುಖ ಸುದ್ದಿ ವಾಹಿನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಗೆ ಈ ಬಗ್ಗೆ ಪ್ರಶ್ನೆ ಎದುರಾಗಿದ್ದ ವೇಳೆ, ಎನ್ಐಎ ತನಿಖೆ ನಡೆಸುವಂತೆ ಶರತ್ ಮಡಿವಾಳರ ತಂದೆಯಲ್ಲಿ ಎಸ್ಪಿಗೆ ಮನವಿ ಪತ್ರ ಕೊಡಲು ಹೇಳಿದ್ದೇನೆ ಎಂದು ಉಡಾಫೆ ಹೇಳಿಕೆ ನೀಡಿದ್ದರು. ಹಿಂದು ಸಮಾಜಕ್ಕಾಗಿ ಜೀವ ಕೊಟ್ಟಿದ್ದ ಮಗನಿಗಾಗಿ ಎನ್ಐಎ ತನಿಖೆ ನಡೆಸಲು ವೃದ್ಧ ತಂದೆಯೇ ಗೋಗರೆಯಬೇಕು ಎನ್ನುವ ಸಂದೇಶ ನೀಡಿದ್ದರು.

ಕೆಲಸ ದೊರಕಿಸಲು ಸಿಎಂ ಕಚೇರಿ ಆಗಬೇಕೇ ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಮಂದಿ ಬಿಜೆಪಿ ಶಾಸಕರಿದ್ದಾರೆ. ಸುಳ್ಯದವರೇ ಸಚಿವರಿದ್ದಾರೆ. ಬಿಲ್ಲವ ಸಮುದಾಯಕ್ಕೆ ಸೇರಿದವರೇ ಸಮಾಜ ಕಲ್ಯಾಣ ಮತ್ತು ಇಂಧನ ಸಚಿವರಿದ್ದಾರೆ. ಮೇಲಾಗಿ ದಕ್ಷಿಣ ಕನ್ನಡ ಜಿಲ್ಲೆಯವರೇ ಬಿಜೆಪಿ ರಾಜ್ಯಾಧ್ಯಕ್ಷರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯದ್ದೇ ಆಡಳಿತ ಇದೆ. ಇಷ್ಟೆಲ್ಲ ಇದ್ದಾಗಿಯೂ ಬಿಜೆಪಿ ಕಾರ್ಯಕರ್ತನಿಗೆ ರಕ್ಷಣೆ ಇಲ್ಲ, ನಡುಬೀದಿಯಲ್ಲಿ ಕೊಲೆಯಾಗಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಪ್ರವೀಣ್ ಕೊಲೆಯನ್ನು ಖಂಡಿಸಿ ಇಡೀ ರಾಜ್ಯದಲ್ಲಿ ಯಾವ ಪರಿ ಆಕ್ರೋಶ ಎದ್ದಿತ್ತೆಂದರೆ, ಹಲವಾರು ಜಿಲ್ಲೆಗಳಲ್ಲಿ ಯುವಮೋರ್ಚಾ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗ ದೊರಕಿಸಬೇಕೆಂಬ ಕಾರ್ಯಕರ್ತರ ಒತ್ತಾಯಕ್ಕೆ ಜಿಲ್ಲೆಯ ನಾಯಕರು ಸ್ಪಂದಿಸುತ್ತಿದ್ದರೆ, ದೂರದ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಆಗಬೇಕಿರಲಿಲ್ಲ. ಜಿಲ್ಲಾ ಕೇಂದ್ರದಲ್ಲೋ, ಪುತ್ತೂರು, ಸುಳ್ಯದಲ್ಲೋ ಸರಕಾರಿ ಉದ್ಯೋಗ ತೆಗೆಸಿಕೊಡಬಹುದಿತ್ತು ಅನ್ನೋ ದುಗುಡದ ಮಾತು ಕಾರ್ಯಕರ್ತರಲ್ಲಿ ಕೇಳಿಬರುತ್ತಿದೆ.
Report, Work for Praveen Bellare family in CMs office is this an election gimmick a political analysis article by Headline Karnataka.
29-11-25 08:11 pm
Bangalore Correspondent
ಚೆಂಡನ್ನು ಮತ್ತೆ ದೆಹಲಿ ಅಂಗಳಕ್ಕೆ ಎಸೆದುಬಿಟ್ಟ ಸಿಎಂ...
29-11-25 03:34 pm
Accident Karnool, Kolar, Five Killed: ಫಾರ್ಚುನ...
29-11-25 02:26 pm
ಸಿಎಂ ಫೈಟ್ ಕ್ಲೈಮ್ಯಾಕ್ಸ್ ; ನೀವಾಗಿಯೇ ನಿರ್ಧಾರ ಮಾಡ...
28-11-25 10:37 pm
ಇಬ್ಬರೂ ಬಿಟ್ಕೊಡ್ತಾ ಇಲ್ಲ, 3ನೇ ಸೂತ್ರ ತಯಾರಾಗ್ತಾ ಇ...
28-11-25 10:33 pm
30-11-25 10:59 pm
HK News Desk
Puttur Honey Gains National Attention, PM Mod...
30-11-25 03:53 pm
WhatsApp, Telegram, Snapchat, ShareChat, Cybe...
30-11-25 03:37 pm
ಸ್ಲೀಪರ್ ಕೋಚ್ ಬಸ್ಸಿಗೆ ಹೆದ್ದಾರಿ ನಡುವಲ್ಲೇ ಬೆಂಕಿ...
29-11-25 08:34 pm
ಐಶ್ವರ್ಯಾ ರೈ ತನ್ನ ಗಂಡನಿಂದ ಬೇರ್ಪಟ್ಟರೆ ಮತಾಂತರ ಮಾ...
28-11-25 10:42 pm
30-11-25 06:03 pm
Udupi Correspondent
DK Trasnsport Mangalore, Joel: ಡಿಕೆ ಟ್ರಾನ್ಸ್...
29-11-25 10:01 pm
Moodushedde, Mangalore, Daughter Assaults Mot...
29-11-25 04:26 pm
ಮೊಬೈಲ್ ಜಾಮರ್ ಜೈಲಿಗಷ್ಟೇ ಇರಲಿ, ಜನರ ಸೇವೆಗಳಿಗೆ ತೊ...
29-11-25 10:53 am
ದೇಶ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ನವ ಸಂಕಲ್ಪ ; ಮಿ...
28-11-25 02:48 pm
29-11-25 10:57 pm
Mangalore Correspondent
Davanagere, Police Steal Gold: ದಾವಣಗೆರೆಯಲ್ಲಿ...
28-11-25 06:23 pm
ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ ; ಪ್ರಮುಖ ಆರೋಪಿ ಪ...
28-11-25 02:16 pm
9 ಕ್ಯಾರೆಟ್ ಚಿನ್ನ ಮಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇ...
27-11-25 09:14 pm
ಹೊರ ಗುತ್ತಿಗೆ ಸಿಬಂದಿ ಸಂಬಳ ಪಾವತಿಗೆ 30 ಸಾವಿರ ಲಂಚ...
27-11-25 09:07 pm