ಸೆಕ್ಷನ್ ನಡುವೆಯೂ ಟೋಲ್ ಗೇಟ್ ಧರಣಿ ; ನಮ್ಮ ಮೇಲೆ ಕೈಮಾಡಿದರೆ, ಉಭಯ ಜಿಲ್ಲೆಗಳ ಜನರ ಮೇಲೆ ಕೈಮಾಡಿದಂತೆ, ಶಾಸಕರು ಯಾಕೆ ತುಟಿ ಬಿಚ್ಚುತ್ತಿಲ್ಲ ?  

28-10-22 02:49 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪೊಲೀಸರ ನಿಷೇಧಾಜ್ಞೆ ಹೊರತಾಗಿಯೂ ಅನಿರ್ದಿಷ್ಟ ಪ್ರತಿಭಟನಾ ಧರಣಿ ಆರಂಭಗೊಂಡಿದೆ. ಟೋಲ್ ಗೇಟ್ ನಿಂದ 200 ಮೀಟರ್ ಸುತ್ತಲಿಗೆ ನಿಷೇಧಾಜ್ಞೆ ಹೇರಲಾಗಿದ್ದು, ಟೋಲ್ ಗೇಟ್ ವಿರೋಧಿ ಹೋರಾಟವನ್ನು 150 ಮೀಟರ್ ದೂರದಲ್ಲಿ ರಸ್ತೆ ಬದಿ ನಡೆಸಲಾಗುತ್ತಿದೆ.

ಮಂಗಳೂರು, ಅ.28 : ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪೊಲೀಸರ ನಿಷೇಧಾಜ್ಞೆ ಹೊರತಾಗಿಯೂ ಅನಿರ್ದಿಷ್ಟ ಪ್ರತಿಭಟನಾ ಧರಣಿ ಆರಂಭಗೊಂಡಿದೆ. ಟೋಲ್ ಗೇಟ್ ನಿಂದ 200 ಮೀಟರ್ ಸುತ್ತಲಿಗೆ ನಿಷೇಧಾಜ್ಞೆ ಹೇರಲಾಗಿದ್ದು, ಟೋಲ್ ಗೇಟ್ ವಿರೋಧಿ ಹೋರಾಟವನ್ನು 150 ಮೀಟರ್ ದೂರದಲ್ಲಿ ರಸ್ತೆ ಬದಿ ನಡೆಸಲಾಗುತ್ತಿದೆ. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷದ ನಾಯಕರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಧರಣಿ ಉದ್ಘಾಟಿಸಿ ಮಾತನಾಡಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ನಾವು ಯಾವುದೇ ವ್ಯಕ್ತಿಯಾಗಿ ಹೋರಾಟ ನಡೆಸುತ್ತಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನೀವು ನಮ್ಮ ಮೇಲೆ ಕೈಮಾಡಿದರೆ, ಅದು ಉಭಯ ಜಿಲ್ಲೆಗಳ ಜನರ ಮೇಲೆ ಕೈಮಾಡಿದಂತೆ. ಸಂಸದ ನಳಿನ್ ಕುಮಾರ್ ಹೊಣೆ ಹೊತ್ತುಕೊಂಡು ಟೋಲ್ ಗೇಟ್ ತೆರವು ಮಾಡಬೇಕಿತ್ತು. ಆದರೆ ಅವರು ಬೆನ್ನು ಬೆನ್ನಿಗೆ ಗಡುವು ನೀಡುತ್ತಾ ಆಶ್ವಾಸನೆ ನೀಡುವುದರಲ್ಲೇ ಇದ್ದಾರೆ. ಇದೀಗ ಹೆದ್ದಾರಿ ಅಧಿಕಾರಿಗಳು ನೋಟಿಫಿಕೇಶನ್ ಸಹಿ ಆಗುವುದಕ್ಕೆ ಮಾತ್ರ ಬಾಕಿಯಿದೆ. ಹತ್ತು ದಿನದ ಸಮಯ ಬೇಕೆಂದು ಕೇಳುತ್ತಿದ್ದಾರೆ. ನಿಶ್ಚಿತ ದಿನಾಂಕ ಹೇಳುವಂತೆ ಕೇಳಿದರೆ, ಅದಕ್ಕೆ ತಯಾರಿಲ್ಲ.

ಜನರು ಪ್ರತಿಭಟನೆ, ಧರಣಿ ನಡೆಸುತ್ತಿದ್ದರೆ ಈ ಭಾಗದ ಯಾವುದೇ ಶಾಸಕ ತುಟಿ ಬಿಚ್ಚಿಲ್ಲ. ಜನಪರ ಚಳವಳಿಯ ಬಗ್ಗೆ ಬಿಜೆಪಿ ಶಾಸಕರು, ಸಂಸದರು ಮೌನ ವಹಿಸುತ್ತಿದ್ದಾರೆ. ಇವರು ಜನರ ಪರವಾಗಿಲ್ಲದ ಶಾಸಕರು. ಶಾಸಕ ಭರತ್ ಶೆಟ್ಟಿ ಸಣ್ಣ ಪುಟ್ಟ ವಿಚಾರದಲ್ಲೂ ಕೋಮು ದ್ವೇಷ ಹಬ್ಬಿಸುವುದಕ್ಕೆ ಮುಂದಾಗುತ್ತಾರೆ. ಹಿಂದೊಮ್ಮೆ ಟೋಲ್ ಗೇಟ್ ತೆರವು ಆಗದೇ ಇದ್ದರೆ, ಅಗೆದು ಹಾಕುತ್ತೇನೆಂದು ಹೇಳಿಕೆ ನೀಡಿದ್ದರು. ಈಗ ಯಾಕೆ ಇವರು ಅಗೆಯಲು ಬರುತ್ತಿಲ್ಲ. ಕಾಪು ಶಾಸಕ ಲಾಲಾಜಿ ಮೆಂಡನ್ ಯಾಕೆ ಮಾತನಾಡುತ್ತಿಲ್ಲ. ಸಂಸದ ನಳಿನ್ ಕುಮಾರ್ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಹೇಳುತ್ತಾರೆ. ಇವರು ಕೋರ್ಟ್ ಮೆಟ್ಟಿಲೇರುವ ಅಗತ್ಯವಿಲ್ಲ. ತಮ್ಮದೇ ಸರಕಾರದ ಅಧಿಕಾರಿಗಳು ಮಾತು ಕೇಳೋದಿಲ್ಲ, ಸರಕಾರದ ನಿರ್ಣಯದಂತೆ ಟೋಲ್ ಗೇಟ್ ತೆರವು ಮಾಡಕ್ಕಾಗಲ್ಲ ಅಂದ್ರೆ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲಿ. ರಾಜ್ಯ ಸರಕಾರವನ್ನು ಪ್ರತಿನಿಧಿಸುವ ಈ ಭಾಗದ 12 ಶಾಸಕರು ರಾಜಿನಾಮೆ ಕೊಡಲಿ. ನಾವು ಟೋಲ್ ಗೇಟ್ ರದ್ದಾಗದೆ ಇಲ್ಲಿಂದ ಎದ್ದು ಹೋಗುವುದಿಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಸಾಮಾಜಿಕ ಕಾರ್ಯಕರ್ತ ಎಂಜಿ ಹೆಗ್ಡೆ ಮಾತನಾಡಿ, ಟೋಲ್ ಗೇಟ್ ಅನ್ನುವುದು ಅಕ್ರಮ ಸಂತಾನ. ಶಾಸಕ, ಸಂಸದರು ಜನರಿಂದ ಹಣವನ್ನು ದೋಚುವುದಕ್ಕಾಗಿ ಇಟ್ಟುಕೊಂಡಿದ್ದಾರೆ. ನವಯುಗ ಟೋಲ್ ಕಂಪನಿಯ ಮಾಫಿಯಾವನ್ನು ನಿಯಂತ್ರಿಸಲಾಗದೆ ಒದ್ದಾಡುತ್ತಿದ್ದಾರೆ ಎಂದು ಹೇಳಿದರು.

ರಾತ್ರಿ-ಹಗಲೆನ್ನದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಯಲಿದ್ದು, ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ಬಿಕೆ ಇಮ್ತಿಯಾಜ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ವಿವಿಧ ಸಂಘಟನೆಗಳ ನಾಯಕರು ಪಾಲ್ಗೊಂಡಿದ್ದರು.

Amid the 144 section imposed near Surathkal Toll gate, congress, DFYI protest demanding action. The Toll Gate Virodhi Horata Samithi began its indefinite (day and night) protest on Friday October 28 urging to remove Surathkal toll gate.