ಗೋವರ್ಧನಗಿರಿ ಶ್ರೀಕೃಷ್ಣ ಧ್ಯಾನ ಮಂದಿರಕ್ಕೆ ರಾಷ್ಟ್ರೀಯ ಪ್ರಾಶಸ್ತ್ಯ ಸಿಗಲಿ ; ಗೋವರ್ಧನೋತ್ಸವದಲ್ಲಿ ಡಾ.ಹೆಗ್ಗಡೆ ಇಂಗಿತ 

29-10-22 12:49 pm       Mangalore Correspondent   ಕರಾವಳಿ

ಮುಡಿಪುವಿನ ಪೃಕೃತಿ ರಮಣೀಯ ಬೆಟ್ಟದಲ್ಲಿ ತಲೆ ಎತ್ತಿ ನಿಂತಿರುವ ಗೋವರ್ಧನಗಿರಿ ಶ್ರೀಕೃಷ್ಣ ಧ್ಯಾನ ಮಂದಿರಕ್ಕೆ ರಾಷ್ಟ್ರೀಯ ಪ್ರಾಶಸ್ತ್ಯ ಸಿಗುವಂತಾಗಲು ಪ್ರವಾಸೋದ್ಯಮ ಇಲಾಖೆ ಪ್ರಯತ್ನಿಸಬೇಕೆಂದು ರಾಜ್ಯಸಭಾ ಸದಸ್ಯರು, ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. 

ಉಳ್ಳಾಲ, ಅ.29 : ಮುಡಿಪುವಿನ ಪೃಕೃತಿ ರಮಣೀಯ ಬೆಟ್ಟದಲ್ಲಿ ತಲೆ ಎತ್ತಿ ನಿಂತಿರುವ ಗೋವರ್ಧನಗಿರಿ ಶ್ರೀಕೃಷ್ಣ ಧ್ಯಾನ ಮಂದಿರಕ್ಕೆ ರಾಷ್ಟ್ರೀಯ ಪ್ರಾಶಸ್ತ್ಯ ಸಿಗುವಂತಾಗಲು ಪ್ರವಾಸೋದ್ಯಮ ಇಲಾಖೆ ಪ್ರಯತ್ನಿಸಬೇಕೆಂದು ರಾಜ್ಯಸಭಾ ಸದಸ್ಯರು, ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. 

ಉಳ್ಳಾಲ ತಾಲೂಕಿನ ಮುಡಿಪು ಗೋವರ್ಧನಗಿರಿಯಲ್ಲಿ ನಿರ್ಮಿಸಲಾದ ಶ್ರೀಕೃಷ್ಣ ಧ್ಯಾನ ಮಂದಿರದಲ್ಲಿ ಮೂರು‌ ದಿನಗಳ ಕಾಲ ನಡೆಯಲಿರುವ ಗೋವರ್ಧನೋತ್ಸವಕ್ಕೆ ಅವರು ಚಾಲನೆ ನೀಡಿದರು. ಕಾಲ, ಕಾಲಕ್ಕೆ ಬದಲಾವಣೆ ಅನಿವಾರ್ಯ. ಕೃಷ್ಣನನ್ನ ಕೋಣೆಯೊಳಗೆ ಇರಿಸದೆ ಇಂತಹ ಅತ್ಯಾಧುನಿಕ ಸುಂದರ ಮಂದಿರದಲ್ಲಿ ಕೂರಿಸಿದ್ದು ಶ್ಲಾಘನೀಯ. ಮನೆ ಕಟ್ಟುವಾಗ ಆಧುನಿಕತೆ ಹೆಸರಲ್ಲಿ ಶೌಚಾಲಯ ಒಂದಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ. ಆದರೆ ನಮ್ಮ ಮನದೊಳಗೆ ನೆಲೆಸಿರುವ ಪರಮಾತ್ಮನಿಗೆ ಎಷ್ಟೊಂದು ಒಳ್ಳೆಯ ಆಲಯ ಕಟ್ಟಬಹುದೆಂದು ಇಲ್ಲಿ ತೋರಿಸಿದ್ದಾರೆ. ವಿದೇಶದಲ್ಲಾದರೆ ಮುಡಿಪಿನ ಇಂತಹ ಧ್ಯಾನ ಕೇಂದ್ರ ನಿಜಕ್ಕೂ ಪ್ರಾಶಸ್ತ್ಯ ಪಡೆಯುವಂತದ್ದೇ ಆಗಿದೆ. ಆರೋಗ್ಯದ ದೃಷ್ಟಿಯಿಂದಾದರೂ ವಾರಕ್ಕೊಮ್ಮೆಯಾದರೂ ಸಾವರ್ಜನಿಕರು ನಡೆದೇ ಇಂತಹ ಕ್ಷೇತ್ರಗಳಿಗೆ ಭೇಟಿ ನೀಡಿ ಎಂದು ಕರೆ ನೀಡಿದರು.

ಒಡಿಯೂರು ಶ್ರೀಗಳಾದ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನಗೈದರು.
ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದ ಸಾಧಕ ವೆಂಕಪ್ಪ ಕಾಜವ ಮಿತ್ತಕೋಡಿ, ಸಮಾಜ ಸೇವಕ ಸೇಸಪ್ಪ ಟೈಲರ್ ಪಜೀರು, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮಮತಾ ಆರ್. ರೈ ಮತ್ತು ಡಾ‌. ರವಿರಾಜೇಶ್ ರೈ ಹಾಗೂ ಶಾಸ್ತ್ರೀಯ ಸಂಗೀತಗಾರ್ತಿ ಮಂಜುಳಾ ಜಿ. ರಾವ್ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಮುಡಿಪು ಪೇಟೆಯ ಶ್ರೀ ಮುಡಿಪಿನ್ನಾರ್ ದೇವಸ್ಥಾನದಿಂದ ಗೋವರ್ಧನಗಿರಿಯಲ್ಲಿರುವ ಶ್ರೀಕೃಷ್ಣ ಧ್ಯಾನಕೇಂದ್ರಕ್ಕೆ ವಿವಿಧ ತಂಡಗಳ ಭಜನಾ ಸಂಕೀರ್ತನೆಯೊಂದಿಗೆ ಹಾಗೂ ಸಾಂಸ್ಕೃತಿಕ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ಡಾ.ವೀರೇಂದ್ರ ಹೆಗ್ಗಡೆ, ಸ್ವಾಮೀಜಿಗಳು ಹಾಗೂ ಅತಿಥಿಗಳನ್ನು ಭವ್ಯವಾದ ಶೋಭಾಯಾತ್ರೆಯೊಂದಿಗೆ ಕರೆ ತರಲಾಯಿತು.

Mangalore Dr Veerendra Heggade inaugurates Govardanostava in Mudupi.