ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ, ಸುಳ್ಳು ಸುದ್ದಿ ; ಸುಪ್ರೀಂನಲ್ಲೂ ಸಿಗದ ಮನ್ನಣೆ, ಬೆಳ್ತಂಗಡಿ ಕೋರ್ಟಿಗೆ ಶರಣಾದ ಸೋಮನಾಥ ನಾಯಕ್ ಜೈಲುಪಾಲು 

31-10-22 10:41 pm       Mangalore Correspondent   ಕರಾವಳಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣದಲ್ಲಿ ಕೆ.ಸೋಮನಾಥ ನಾಯಕ್ ಕೊನೆಗೂ ಜೈಲು ಸೇರಿದ್ದಾರೆ. 

ಬೆಳ್ತಂಗಡಿ, ಅ.31 : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣದಲ್ಲಿ ಕೆ.ಸೋಮನಾಥ ನಾಯಕ್ ಕೊನೆಗೂ ಜೈಲು ಸೇರಿದ್ದಾರೆ. 

ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ನಾಯಕ್ ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ವೀರೇಂದ್ರ ಹೆಗ್ಗಡೆ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಆರೋಪಿಸಿದ್ದ ಸೋಮನಾಥ ನಾಯಕ್ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹೆಗ್ಗಡೆ ವಿರುದ್ಧ ಮಾತನಾಡಿದ್ದರು. 

ಸೋಮನಾಥ ನಾಯಕ್ ವಿರುದ್ಧ ಹೆಗ್ಗಡೆ ಕುಟುಂಬ ಬೆಳ್ತಂಗಡಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ದೂರು ಆಲಿಸಿದ ಕೋರ್ಟ್ ಅಪಪ್ರಚಾರ ಮಾಡದಂತೆ ಪ್ರತಿಬಂಧಕಾಜ್ಞೆ ವಿಧಿಸಿತ್ತು. ಆದರೆ ಅದನ್ನು ಉಲ್ಲಂಘಿಸಿ ಆರೋಪ ಮುಂದುವರಿಸಿದ್ದ ಸೋಮನಾಥ ನಾಯಕ್ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡಿದ್ದರು. ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಿದ್ದರು. ಕೋರ್ಟಿನಲ್ಲಿ ಪ್ರತಿ ದಾವೆ ಹೂಡಿ ವಾದ ಮಂಡಿಸಿದ್ದರು.‌ 

ವಿಚಾರಣೆ ನಡೆಸಿದ ಕೋರ್ಟ್ ಸೋಮನಾಥ ನಾಯಕ್ ಆರೋಪ ರುಜು ಪಡಿಸಲು ವಿಫಲವಾಗಿದ್ದಕ್ಕೆ 3 ತಿಂಗಳ ಸಜೆ ಮತ್ತು ಕ್ಷೇತ್ರಕ್ಕೆ 4.5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು. ಅಲ್ಲದೆ, ಸೋಮನಾಥ ನಾಯಕ್ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಕೆ.ಸೋಮನಾಥ ನಾಯಕ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಬೆಳ್ತಂಗಡಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಆನಂತರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು. ಕೆಳಗಿನ ಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದರಿಂದ ಸುಪ್ರೀಂನಲ್ಲಿಯೂ ಹಿನ್ನಡೆ ಆಗಿತ್ತು.‌ 

ಹೀಗಾಗಿ ಸೋಮನಾಥ ನಾಯಕ್ ಸೋಮವಾರ ತಮ್ಮ ಬೆಂಬಲಿಗರು, ಅಭಿಮಾನಿಗಳ ಜೊತೆ ಮೆರವಣಿಗೆಯಲ್ಲಿ ಬಂದು ಬೆಳ್ತಂಗಡಿ ಕೋರ್ಟಿಗೆ ಶರಣಾಗಿದ್ದಾರೆ. ಜೊತೆಗಿದ್ದವರು ಸೋಮನಾಥ ನಾಯಕ್ ಗೆ ಜಯವಾಗಲಿ ಎಂದು ಹಾರೈಸಿ ಜೈಲಿಗೆ ಕಳಿಸಿಕೊಟ್ಟಿದ್ದಾರೆ.

The Supreme Court has upheld a lower court order sentencing Nagarika Seva Trust president Guruvayankere K. Somanath Nayak to three months of imprisonment and imposing a fine of ₹4.5 lakh on finding him guilty of disobeying an order of temporary injunction against publishing any statement impacting the reputation of D. Veerendra Heggade, pattadhikari of Shri Kshetra Dharmasthala.