ಹುಲಿ ಒಮ್ಮೆ ಬೇಟೆಗೆ ಸಿದ್ಧವಾದರೆ ಬೇಟೆ ಆಡಿಯೇ ತೀರುತ್ತದೆ ; ಜನಾರ್ದನ ರೆಡ್ಡಿ ಮತ್ತೆ ಆವಾಜ್

05-11-22 11:20 pm       HK News Desk   ಕರಾವಳಿ

ಮೊನ್ನೆಯಷ್ಟೇ ಬಿಜೆಪಿಯವರು ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ತನ್ನನ್ನು ಹುಲಿಗೆ ಹೋಲಿಸಿಕೊಂಡಿದ್ದಾರೆ.

ಬಳ್ಳಾರಿ, ನ.5: ಮೊನ್ನೆಯಷ್ಟೇ ಬಿಜೆಪಿಯವರು ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ತನ್ನನ್ನು ಹುಲಿಗೆ ಹೋಲಿಸಿಕೊಂಡಿದ್ದಾರೆ. ಹುಲಿ ಬೇಟೆಯಾಡಲು ಒಮ್ಮೆ ಸಿದ್ಧವಾದರೆ ಬೇಟೆ ಆಡಿಯೇ ತೀರುತ್ತದೆ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ ನಗರದಲ್ಲಿ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ಮಾತನಾಡಿದರು. ಹುಲಿ ಹಸಿವಾದಾಗ ಆಹಾರ ಎಷ್ಟು ಬೇಕೋ ಅಷ್ಟು ಸೇವಿಸುತ್ತದೆ‌. ಆಹಾರಕ್ಕಾಗಿ ಅದು ಬೇಟೆಯಾಡುತ್ತದೆ. ನಮ್ಮ ರಕ್ತ ಕೂಡ ಅಂತಹದ್ದು. ನಮ್ಮ ತಂದೆ ಪೊಲೀಸ್ ಪೇದೆ ಆಗಿ ಕೆಲಸ ಆಗಿರಬಹುದು. ಆದರೆ ನನ್ನ ತಾತಂದಿರು ರಾಜರಂತೆ ಬದುಕಿದವರು, ಅವರ ರಕ್ತ ನನ್ನಲ್ಲಿದೆ, ಅದನ್ನು ಬದಲಿಸಲಾಗದು. ಕಳೆದ 12 ವರ್ಷಗಳಿಂದ ನಾನು ಸುಮ್ಮನೇ ಇದ್ದೇನೆ ಎಂದರೆ ನನ್ನ ಕೈಯಿಂದ ಏನೂ ಆಗುವುದಿಲ್ಲ ಎಂದರ್ಥವಲ್ಲ ಎಂದು ಹೇಳಿದರು.

ಕಾಂಗ್ರೆಸ್, ಬಿಜೆಪಿ ಅಂತ ನಾನು ಹೇಳುವುದಿಲ್ಲ. ನಮ್ಮ ಕುಟುಂಬ ಬಳ್ಳಾರಿಯ ಅಭಿವೃದ್ಧಿಗೆ ಬದ್ಧವಾಗಿದೆ. ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದ ರೆಡ್ಡಿ, ನಾನು ಬೆಂಗಳೂರಿನಲ್ಲೇ ಐಷಾರಾಮಿ ಬದುಕು ನಡೆಸಬಹುದು. ಆದರೆ ನನಗೆ ನನ್ನ ಬಳ್ಳಾರಿ ಮುಖ್ಯ.
ನೀವೆಲ್ಲ ದೇವರಲ್ಲಿ ಪ್ರಾರ್ಥನೆ ಮಾಡಿ, ನನ್ನ ಎಲ್ಲ ಕಷ್ಟಗಳು ಪರಿಹಾರ ಆಗಲಿ. ನ್ಯಾಯಾಲಯದಲ್ಲಿ ನಮ್ಮ ಪ್ರಾಮಾಣಿಕತೆಗೆ ನ್ಯಾಯ ಸಿಗುತ್ತದೆ. ನಿಮ್ಮ ದೃಷ್ಟಿಯಲ್ಲಿ ನಾವು ಯಾವತ್ತೂ ಜನರ ಜೇಬಿಗೆ ಕತ್ತರಿ ಹಾಕಿಲ್ಲ. ಯಾರಿಗೂ ನಾವು ಮೋಸ ಮಾಡಿಲ್ಲ. ಅದೃಷ್ಟದಿಂದ, ದೇವರ ಆಶೀರ್ವಾದದಿಂದ ನಾವು ಮೇಲೆ ಬಂದವರು, ನನ್ನ ಕೊನೆ ಉಸಿರಿರುವರೆಗೂ ನಾನು ಬಳ್ಳಾರಿ ಜನರಿಗಾಗಿ ಮುಡಿಪಾಗಿಡುತ್ತೇನೆ ಎಂದವರು ಹೇಳಿದರು.

ಬಳ್ಳಾರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು. ಅಂತರಾಷ್ಟ್ರೀಯ ಕ್ರೀಡಾಂಗಣ ಆಗಬೇಕು, ಬಳ್ಳಾರಿಗೆ ರಿಂಗ್ ರೋಡ್ ಆಗಬೇಕೆಂಬುದು ನನ್ನ ಕನಸು ಆಗಿತ್ತು. ನನ್ನ ಅವಧಿಯಲ್ಲಿ ಬಳ್ಳಾರಿಗೆ ಅರ್ಧ ರಿಂಗ್ ರೋಡ್ ಅಭಿವೃದ್ಧಿ ಮಾಡಿದ್ದೆ. ಇನ್ನುಳಿದ ಕೆಲಸಕ್ಕೆ ಕೇಂದ್ರ ಮಂತ್ರಿ ಗಡ್ಕರಿ ಅನುಮೋದನೆ ನೀಡಿದ್ದಾರೆ ಎಂದರು

.

If i make my mind i wont leave fighting slams Janardhana Reddy in Bellari