ಲಂಡನ್ನಲ್ಲಿ ಕಲಿತ ಯುವಕನೀಗ ಫುಲ್ ಟೈಮ್ ಮೀನು ವ್ಯಾಪಾರಿ !

13-10-20 06:02 pm       Mangalore Correspondent   ಕರಾವಳಿ

ಪ್ರಧಾನಿ ಮೋದಿ ಮಾತಿನಂತೆ ಆತ್ಮ ನಿರ್ಭರನಾಗಲು ಹೊರಟ ಯುವಕ ಈಗ ಮಂಗಳೂರಿನಲ್ಲಿ ಫುಲ್ ಟೈಮ್ ಮೀನು ವ್ಯಾಪಾರಿಯಾಗಿ ಸುದ್ದಿಯಾಗಿದ್ದಾನೆ.

ಮಂಗಳೂರು, ಅಕ್ಟೋಬರ್ 13: ಆತ ಓದಿದ್ದು ದೂರದ ಲಂಡನ್ ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ. ಆದರೆ ಕೊನೊನಾ ಲಾಕ್ಡೌನ್, ಸೂಕ್ತ ಅವಕಾಶ ಲಭಿಸದ ಕಾರಣ ಉದ್ಯೋಗ ಇಲ್ಲದಾಗಿತ್ತು. ಈ ನಡುವೆ, ಒಲಿದು ಬಂದ ಅವಕಾಶವೂ ಕೈತಪ್ಪಿ ಹೋಯ್ತು. ಹಾಗೆಂದು ಯುವಕ ಎದೆಗುಂದಲಿಲ್ಲ. ಪ್ರಧಾನಿ ಮೋದಿ ಮಾತಿನಂತೆ ಆತ್ಮ ನಿರ್ಭರನಾಗಲು ಹೊರಟ ಯುವಕ ಈಗ ಮಂಗಳೂರಿನಲ್ಲಿ ಫುಲ್ ಟೈಮ್ ಮೀನು ವ್ಯಾಪಾರಿಯಾಗಿ ಸುದ್ದಿಯಾಗಿದ್ದಾನೆ.

ಲಂಡನ್ ನಗರದ ಕೊವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಬಿಐಎಂ ಹಾಗೂ ಪ್ರೊಡಕ್ಷನ್ ಮ್ಯಾನೇಜ್ಮೆಂಟಿನಲ್ಲಿ ಎಂಎಸ್ಸಿ ಪದವಿ ಪೂರೈಸಿದ ಮಂಗಳೂರಿನ ಬಿಕರ್ನಕಟ್ಟೆಯ ವರುಣ್ ಶೇಣವ, ನಂತೂರು ಬಳಿಯ ಬಿಕರ್ನಕಟ್ಟೆಯ ರಸ್ತೆ ಬದಿಯಲ್ಲಿ ಕಡಲ್ ಎನ್ನುವ ಮೀನು ವ್ಯಾಪಾರದ ಶಾಪ್ ಹಾಕಿದ್ದಾರೆ. ಈ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದಾರೆ.

ಕಳೆದ ವರ್ಷವಷ್ಟೇ ಲಂಡನ್ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಬಂದಿದ್ದ ವರುಣ್, ಸಂಬಂಧಿಕರು ತೀರಿಕೊಂಡ ಕಾರಣಕ್ಕೆ ಊರಲ್ಲೇ ಉಳಿದುಕೊಂಡಿದ್ದರು. ಹೀಗಾಗಿ, ಲಂಡನ್ನಲ್ಲಿ ದೊರೆತಿದ್ದ ಉದ್ಯೋಗದ ಅವಕಾಶಕ್ಕೂ ತೆರಳಲು ಸಾಧ್ಯವಾಗಿರಲಿಲ್ಲ. ಆಬಳಿಕ ಬೆಂಗಳೂರಿನ ನಿರ್ಮಾಣ ಸಂಸ್ಥೆಯೊಂದು ಉದ್ಯೋಗದ ಸಂದರ್ಶನಕ್ಕಾಗಿ ಆಹ್ವಾನಿಸಿತ್ತು. ಆದರೆ, ಲಾಕ್ಡೌನ್ ಕಾರಣದಿಂದಾಗಿ ಸಂದರ್ಶನಕ್ಕೆ ಹಾಜರಾಗುವುದಕ್ಕೂ ಆಗಿರಲಿಲ್ಲ. ಇದರಿಂದ ಸುದೀರ್ಘ ಆರು ತಿಂಗಳ ಕಾಲ ಲಾಕ್ಡೌನ್ ಕಾರಣ ಉದ್ಯೋಗವಿಲ್ಲದೇ ಇರಬೇಕಾಯಿತು. ಈ ನಡುವೆ, ಸ್ನೇಹಿತರ ಜೊತೆ ಚರ್ಚಿಸಿ, ಉದ್ಯೋಗಕ್ಕೆ ಯಾವುದಾದರೇನು ಎಂದು ವರುಣ್ ಮೀನು ವ್ಯಾಪಾರಕ್ಕಿಳಿದಿದ್ದಾರೆ.

ಸುಮಾರು 4 ಲಕ್ಷ ಬಂಡವಾಳ ಹೂಡಿ, ಫ್ರೀಝರ್, ಶಾಪ್ ರೆಡಿ ಮಾಡಿದ ಫುಲ್ ಟೈಮ್ ಮೀನು ವ್ಯಾಪಾರಕ್ಕೆ ಇಳಿದಿರುವ ವರುಣ್ ಸಾಹಸಕ್ಕೆ ಗೆಳೆಯರು, ಹಿತೈಷಿಗಳು ಪ್ರೋತ್ಸಾಹ ನೀಡಿದ್ದಾರೆ. ಕೆಲಸಕ್ಕೆ ಇಬ್ಬರು ಯುವಕರನ್ನು ನೇಮಿಸಿಕೊಂಡಿದ್ದಾರೆ. ಜೊತೆಗೆ, ನಗರದ ಒಳಗೆ ಯಾರಾದ್ರೂ ಮೀನಿನ ಬೇಡಿಕೆ ಹೇಳಿಕೊಂಡರೆ ಉಚಿತವಾಗಿ ಮೀನು ತಲುಪಿಸುತ್ತಾರೆ. ಮೀನನ್ನು ಕ್ಲೀನ್ ಮಾಡಲು ಕೇಳಿಕೊಂಡಲ್ಲಿ ಅದನ್ನೂ ರೆಡಿ ಮಾಡಿಸಿ, ಪೂರೈಸುತ್ತಾರೆ. ಒಟ್ಟಿನಲ್ಲಿ ಲಂಡನ್ನಲ್ಲಿ ಕಲಿತ ಯುವಕ ಈಗ ಫುಲ್ ಟೈಮ್ ಮೀನು ವ್ಯಾಪಾರಿಯಾಗಿ ಸುದ್ದಿಯಾಗಿದ್ದಾನೆ. 

Varun from Mangalore who has done his Masters in Construction Management in the United Kingdom (UK) has started a fish business at due to covid lockdown in India.