ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ; ತಡರಾತ್ರಿ ತಿರುಗಾಟಕ್ಕೆ ಹೊರಟಿದ್ದ ಯುವಕ- ಯುವತಿಯರಿಗೆ ಬಜರಂಗದಳ ತಡೆ, ಹಲ್ಲೆ ಯತ್ನ ! 

11-12-22 01:10 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತರು ಮತ್ತೆ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ. ಶನಿವಾರ ತಡರಾತ್ರಿ ನಗರದಲ್ಲಿ ಸುತ್ತಾಡುತ್ತಿದ್ದ ಹಿಂದೂ-ಮುಸ್ಲಿಂ ಜೋಡಿ ಮೇಲೆ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. 

ಮಂಗಳೂರು, ಡಿ.11 : ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತರು ಮತ್ತೆ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ. ಶನಿವಾರ ತಡರಾತ್ರಿ ನಗರದಲ್ಲಿ ಸುತ್ತಾಡುತ್ತಿದ್ದ ಹಿಂದೂ-ಮುಸ್ಲಿಂ ಜೋಡಿ ಮೇಲೆ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. 

ನಗರದ ಕೊಟ್ಟಾರದಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಮುಸ್ಲಿಂ ಯುವಕರ ಜೊತೆಗೆ ಇಬ್ಬರು ಯುವತಿಯರು ಸುತ್ತಾಡುತ್ತಿದ್ದನ್ನು ನೋಡಿದ ಕಾರ್ಯಕರ್ತರು ತಡೆದು ನಿಲ್ಲಿಸಿ ಪ್ರಶ್ನೆ ಮಾಡಿದ್ದಾರೆ. ಎಲ್ಲಿ ಹೋಗ್ತಿದೀರಾ ನೀವು ಇಷ್ಟೊತ್ತಿಗೆ ಎಂದು ಕೇಳಿದ್ದಕ್ಕೆ, ನಾವು ಹೊಟೇಲ್ ಗೆ ಊಟಕ್ಕೆ ಬಂದಿರೋದಾಗಿ ಹೇಳಿದ್ದರು. ಮಧ್ಯರಾತ್ರಿ ಯಾವ ಹೊಟೇಲ್ ಇದೆ ಅಂತ ಕೇಳಿದ್ದಕ್ಕೆ ತಡಬಡಾಯಿಸಿದಾಗ ಹಲ್ಲೆಗೆ ಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕೆ ಉರ್ವಾ ಪೊಲೀಸರನ್ನು ಕರೆಸಿದ್ದು ಸ್ಥಳದಲ್ಲೇ ಜೋರು ಮಾಡಿದ್ದಾರೆ. ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.‌

ಯುವಕ- ಯುವತಿಯರನ್ನು ಬಳಿಕ ಉರ್ವಾ ಪೊಲೀಸ್ ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ. ಹಿಂದು ಯುವತಿಯರ ಜೊತೆ ಮುಸ್ಲಿಂ ಯುವಕರು ತಿರುಗಾಡಿದರೆ, ಹಲ್ಲೆ ನಡೆಸುವ ಕೃತ್ಯ ಕಳೆದ ಒಂದೆರಡು ತಿಂಗಳಲ್ಲಿ ಹೆಚ್ಚಿದ್ದು 15-20 ದಿನಗಳ ಅಂತರದಲ್ಲಿ ನಾಲ್ಕನೇ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ. ನೈತಿಕ ಪೊಲೀಸ್ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಂದು ಪೊಲೀಸರು ಹೇಳಿದ್ದರೂ, ಈ ರೀತಿಯ ಘಟನೆಗಳಿವೆ ಕಡಿವಾಣ ಬಿದ್ದಿಲ್ಲ. ಜೊತೆಗೆ, ಹದ್ದುಮೀರಿದ ಯುವಕ- ಯುವತಿಯರ ವರ್ತನೆಗಳೂ ಕಡಿಮೆಯಾಗಿಲ್ಲ.

Moralpolice, Bajarangdal members thrash Hindu girls for roaming with Muslim youths in Mangalore. Urwa police are now investigating the case.