ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ದಾಳಿಗೈದು ಯುವಕನಿಗೆ ಹಲ್ಲೆ ಪ್ರಕರಣ ; ನಾಲ್ವರು ಬಜರಂಗದಳ ಕಾರ್ಯಕರ್ತರ ಬಂಧನ 

11-12-22 02:13 pm       Mangalore Correspondent   ಕರಾವಳಿ

ನಗರದ ಕಂಕನಾಡಿಯ ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ನುಗ್ಗಿ ಯುವ ಜೋಡಿಗೆ ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣದಲ್ಲಿ ನಾಲ್ವರು ಬಜರಂಗದಳ ಕಾರ್ಯಕರ್ತರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಡಿ.11 : ನಗರದ ಕಂಕನಾಡಿಯ ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ನುಗ್ಗಿ ಯುವ ಜೋಡಿಗೆ ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣದಲ್ಲಿ ನಾಲ್ವರು ಬಜರಂಗದಳ ಕಾರ್ಯಕರ್ತರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. 

ಚೇತನ್, ಪ್ರಕಾಶ್, ಗಣೇಶ್ ಮತ್ತು ಸಿಬಿಲ್ ಎಂಬವರು ಬಂಧಿತರು. ವಾರದ ಹಿಂದೆ ಕಂಕನಾಡಿಯ ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ದಾಳಿ ನಡೆಸಿದ್ದ ಬಜರಂಗದಳ ಕಾರ್ಯಕರ್ತರು ಅಲ್ಲಿದ್ದ ಯುವ ಜೋಡಿಗೆ ಹಲ್ಲೆ ನಡೆಸಿದ್ದರು. ಅಲ್ಲಿ ಕೆಲಸಕ್ಕಿದ್ದ ಹಿಂದು ಯುವತಿ, ಅದೇ ಜುವೆಲ್ಲರಿಯಲ್ಲಿ ಸೇಲ್ಸ್ ಮನ್ ಆಗಿರುವ ಮುಸ್ಲಿಂ ಯುವಕನೊಂದಿಗೆ ತಿರುಗಾಡುತ್ತಿದ್ದಳು. ಈ ಬಗ್ಗೆ ಬಜರಂಗದಳ ಈ ಹಿಂದೆಯೂ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಆದರೆ ಕಾರ್ಯಕರ್ತರ ಎಚ್ಚರಿಕೆ ಲೆಕ್ಕಿಸದೆ ಆಕೆ ತಿರುಗಾಟ ಮುಂದುವರಿಸಿದ್ದಳು.‌

ಯುವತಿ ತೀರ್ಥಹಳ್ಳಿ ಮೂಲದ ನಿವಾಸಿಯಾಗಿದ್ದು ಈ ಹಿಂದೆ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದಳು. ಆನಂತರ ಜುವೆಲ್ಲರಿಗೆ ಕೆಲಸ ಬದಲಾಯಿಸಿದ್ದಳು. ಈ ವೇಳೆ, ಅಲ್ಲಿದ್ದ ಯುವಕನ ಪರಿಚಯವಾಗಿ ತಿರುಗಾಟ ಆರಂಭಿಸಿದ್ದಳು. ಈ ಬಗ್ಗೆ ಬಜರಂಗದಳ ಕಾರ್ಯಕರ್ತರು ಯುವತಿಯ ಹೆತ್ತವರಿಗೂ ಮಾಹಿತಿ ನೀಡಿದ್ದರು. 

ಮೊನ್ನೆ ಹೆತ್ತವರನ್ನು ಜುವೆಲ್ಲರಿಗೆ ಕರೆಸಿ, ಅವರಿಂದಲೇ ಯುವತಿಗೆ ಎರಡೇಟು ಬಿಗಿಯುವಂತೆ ಮಾಡಿದ್ದಾರೆ. ಅಲ್ಲದೆ, ಮುಸ್ಲಿಂ ಯುವಕನಿಗೂ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಘಟನೆ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರತ್ಯೇಕ ಮೂರು ದೂರು ದಾಖಲಾಗಿ ಎಫ್ಐಆರ್ ಆಗಿತ್ತು. ಹಲ್ಲೆಗೊಳಗಾದ ಯುವಕ ಹಲ್ಲೆ ಕೃತ್ಯದ ಬಗ್ಗೆ, ಸುಲ್ತಾನ್ ಗೋಲ್ಡ್ ಜುವೆಲ್ಲರಿಯವರು ಮಳಿಗೆ ಒಳಗೆ ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿರುವ ಬಗ್ಗೆ ದೂರು ನೀಡಿದ್ದರು. ಇದಲ್ಲದೆ, ಯುವತಿಯ ತಾಯಿಯೂ ದೂರು ನೀಡಿದ್ದರು. ಇದರಂತೆ, ಪ್ರತ್ಯೇಕ ಕೇಸು ದಾಖಲಾಗಿದ್ದು ತ‌ನಿಖೆ ಕೈಗೊಂಡಿದ್ದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

sulthan gold jewelry Moral police case four arrested bajrangdal activist in Mangalore.