ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ವಾಸ್ತು ದೋಷ ; ತಜ್ಞರ ಸಲಹೆಯಂತೆ ಮೆಟ್ಟಿಲು ಬದಲಿಸಿದ ನಾಯಕರು !

13-12-22 09:45 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವುದಕ್ಕೆ ಎಲ್ಲ ರೀತಿಯ ಶ್ರಮ ಹಾಕಲಾಗುತ್ತಿದೆ. ಅದಕ್ಕಾಗಿ ಮಂಗಳೂರಿನ ಕಾಂಗ್ರೆಸ್ ಕಚೇರಿಯ ವಾಸ್ತು ಬದಲಾವಣೆಗೂ ಪಕ್ಷದ ನಾಯಕರು ಮುಂದಾಗಿದ್ದಾರೆ.

ಮಂಗಳೂರು, ಡಿ.13: ಕರಾವಳಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವುದಕ್ಕೆ ಎಲ್ಲ ರೀತಿಯ ಶ್ರಮ ಹಾಕಲಾಗುತ್ತಿದೆ. ಅದಕ್ಕಾಗಿ ಮಂಗಳೂರಿನ ಕಾಂಗ್ರೆಸ್ ಕಚೇರಿಯ ವಾಸ್ತು ಬದಲಾವಣೆಗೂ ಪಕ್ಷದ ನಾಯಕರು ಮುಂದಾಗಿದ್ದಾರೆ. ವಾಸ್ತು ಶಾಸ್ತ್ರಜ್ಞರ ಸಲಹೆಯಂತೆ, ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದ ಮೆಟ್ಟಿಲುಗಳನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಲಾಗಿದೆ.

ಕಾಂಗ್ರೆಸ್ ಕಚೇರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲುಗಳಿದ್ದವು. ಸಾಮಾನ್ಯವಾಗಿ ವಾಸ್ತು ಪದ್ಧತಿ ಪ್ರಕಾರ, ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳನ್ನು ಕೊಡಲಾಗುತ್ತದೆ. ಮೂರು, ಐದು, ಏಳು ಹೀಗೆ ಮೆಟ್ಟಿಲುಗಳ ಸಂಖ್ಯೆ ಇರುತ್ತದೆ. ಕದ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಎಂಟು ಮೆಟ್ಟಿಲು ಇರುವುದನ್ನು ಎರಡು ವರ್ಷದ ಹಿಂದೆ ಬಂದಿದ್ದ ವಾಸ್ತು ಶಾಸ್ತ್ರಜ್ಞರೊಬ್ಬರು ಆಕ್ಷೇಪಿಸಿದ್ದರು. 2016ರಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನೆ ಆದಬಳಿಕ 2019ರಲ್ಲಿ ನಡೆದ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಸೋತಿದ್ದೂ ಆಗಿತ್ತು. ವಾಸ್ತು ತಜ್ಞರ ಸೂಚನೆಯ ಬಳಿಕ ಕಚೇರಿಗೆ ಹೊಕ್ಕುವ ಬಾಗಿಲಿನಲ್ಲಿಯೇ ಅಪದ್ಧ ಇದ್ದರೆ ಸೋಲಾಗದೇ ಇರುತ್ತಾ ಎನ್ನುವ ಮಾತುಗಳು ಕೇಳಿಬಂದಿದ್ದವು.

ಹೀಗಾಗಿ ಈ ಬಾರಿ ಚುನಾವಣೆಗೆ ಕೆಲವೇ ತಿಂಗಳಿರುವಾಗ ಮೆಟ್ಟಿಲುಗಳನ್ನು ಬದಲಿಸಿದ್ದು, ಒಂದು ಮೆಟ್ಟಲು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಎರಡು ದಿನಗಳಿಂದ ಮೆಟ್ಟಿಲ ಕಾಮಗಾರಿ ನಡೆಯುತ್ತಿದ್ದು, ತರಾತುರಿಯಲ್ಲಿ ಕೆಲಸ ಸಾಗುತ್ತಿದೆ. ಈ ಬಗ್ಗೆ ಪಕ್ಷದ ಹಿರಿಯ ಜಿಲ್ಲಾ ಸದಸ್ಯರೊಬ್ಬರಲ್ಲಿ ಕೇಳಿದಾಗ, ಹಾಗೇನಿಲ್ಲ. ಮೆಟ್ಟಿಲ ಅಡಿಭಾಗದಲ್ಲಿ ನೀರಿನ ವಾಟರ್ ಟ್ಯಾಂಕ್ ಇಡಲಾಗಿತ್ತು. ಅದು ಲೀಕೇಜ್ ಆಗಿತ್ತು. ಅದನ್ನು ಕಲ್ಲು ತುಂಬಿಸಿ ಬಂದ್ ಮಾಡಲಾಗಿದ್ದು, ಹೆಚ್ಚುವರಿ ಇರುವ ಜಾಗವನ್ನು ಫಿಲ್ ಮಾಡಲು ಒಂದು ಮೆಟ್ಟಲು ಹೆಚ್ಚಿಸಲಾಗಿದೆ ಎಂದರು. ಇನ್ನೊಬ್ಬ ಸದಸ್ಯರಲ್ಲಿ ವಾಸ್ತು ಪ್ರಕಾರ ಮಾಡುತ್ತಿದ್ದೀರಂತೆ, ಹೌದಾ ಎಂದು ಕೇಳಿದಾಗ, ಹೌದು ಎಂದರು.

ವಾಸ್ತು ತಜ್ಞರು ಮೆಟ್ಟಿಲು ಆ ಭಾಗದಲ್ಲಿ ಇರಲೇಬಾರದು ಎಂದಿದ್ದಾರೆ. ಅವರು ಹೇಳಿದ್ದನ್ನು ಎಲ್ಲ ಕೇಳಿದರೆ, ಇಡೀ ಕಟ್ಟಡ ಬದಲಿಸಬೇಕಾದೀತು. ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡುತ್ತಿದ್ದೇವೆ. ಮೊದಲ ಮಹಡಿಯಲ್ಲೂ ಕೆಲವು ಬದಲಾವಣೆಗೆ ಸೂಚಿಸಿದ್ದಾರೆ. ಜಿಲ್ಲಾಧ್ಯಕ್ಷರ ಚೇಂಬರ್ ಆ ಜಾಗದಲ್ಲಿ ಇರಬಾರದು ಎಂದಿದ್ದಾರೆ. ಅದನ್ನು ಯಾವಾಗ ಬದಲಾವಣೆ ಮಾಡಲಾಗುತ್ತೆ ಎಂದು ಗೊತ್ತಿಲ್ಲ ಎಂದರು. ಒಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಬದಲಾವಣೆ ಅಂತೂ ಆಗುತ್ತಿದೆ. ಆದರೆ ಜಿಲ್ಲಾ ಕಾಂಗ್ರೆಸ್ ನಾಯಕರ ಒಳಗಿನ ಮುಸುಕಿನ ಗುದ್ದಾಟದ ವಾಸ್ತು ಯಾವಾಗ ಬದಲಾವಣೆ ಆಗುತ್ತೋ ಏನೋ..

Vastu Dosh at the congress office in Mangalore,  staircase vastu, repair in progress. Congress office had 8 steps but after Vastu dosh it has been advised to make nine steps.