ಕೊಪ್ಪಳದಲ್ಲಿ ಜೆಪಿ ನಡ್ಡಾರಿಂದ ಹತ್ತು ಬಿಜೆಪಿ ಜಿಲ್ಲಾ ಕಚೇರಿಗಳ ಉದ್ಘಾಟನೆ ; ಮಂಗಳೂರಿನಲ್ಲಿ ಪಕ್ಷದ ಜಿಲ್ಲಾ ಕಚೇರಿಯೇ ಬಂದ್ ! 

15-12-22 12:10 pm       Mangalore Correspondent   ಕರಾವಳಿ

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೇಳೆ ದೇಶದ ಪ್ರತಿ ಜಿಲ್ಲೆಯಲ್ಲಿ ಪಕ್ಷದ ಸ್ವಂತ ಕಚೇರಿ ಹೊಂದಿರಬೇಕು ಎಂಬ ಸೂಚನೆ ನೀಡಿದ್ದರು.

ಮಂಗಳೂರು, ಡಿ.15: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೇಳೆ ದೇಶದ ಪ್ರತಿ ಜಿಲ್ಲೆಯಲ್ಲಿ ಪಕ್ಷದ ಸ್ವಂತ ಕಚೇರಿ ಹೊಂದಿರಬೇಕು ಎಂಬ ಸೂಚನೆ ನೀಡಿದ್ದರು. ಇದರಂತೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಿಲ್ಲಾ ಕಚೇರಿ ಸ್ಥಾಪನೆಗೆ ಮುಂದಡಿ ಇಡಲಾಗಿತ್ತು. ಕಳೆದ ಐದಾರು ವರ್ಷಗಳಲ್ಲಿ ಬಿಜೆಪಿ ಅಸ್ತಿತ್ವವನ್ನೇ ಹೊಂದಿಲ್ಲದ ಕೇರಳ ಸೇರಿದಂತೆ ದೇಶದ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ ಕಚೇರಿಗಳನ್ನು ಮಾಡಲಾಗಿದೆ. ಇದೀಗ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಏಕಕಾಲದಲ್ಲಿ 10 ಜಿಲ್ಲಾ ಕಚೇರಿಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉದ್ಘಾಟನೆ ನೆರವೇರಿಸುತ್ತಿದ್ದಾರೆ.

ಇಂದು (ಡಿ.15) ಕೊಪ್ಪಳಕ್ಕೆ ಬರುತ್ತಿರುವ ಜೆಪಿ ನಡ್ಡಾ ಅಲ್ಲಿನ ಜಿಲ್ಲಾ ಕಚೇರಿ ಸೇರಿದಂತೆ ಬಳ್ಳಾರಿ, ರಾಯಚೂರು, ಬೀದರ್, ವಿಜಯಪುರ, ಬಾಗಲಕೋಟೆ, ಕೋಲಾರ, ಚಾಮರಾಜನಗರ, ಹಾವೇರಿ ಮತ್ತು ಗದಗದಲ್ಲಿ ನಿರ್ಮಿಸಿರುವ ನೂತನ ಜಿಲ್ಲಾ ಕಚೇರಿಗಳನ್ನು ಏಕಕಾಲದಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಇದೇ ವೇಳೆ, ವಿಜಯನಗರ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲಾ ಕಚೇರಿ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 

BJP president JP Nadda asks party MPs from UP to create awareness about  state and central govt's work - India Today

Mission Mumbai 2023, Maharashtra 2024 on Amit Shah's plate during city  visit | Cities News,The Indian Express

Not even one MLA is unhappy with B S Yediyurappa: Nalin Kumar Kateel |  Deccan Herald

ಮಂಗಳೂರಿನಲ್ಲಿ ಪಕ್ಷದ ಜಿಲ್ಲಾ ಕಚೇರಿಯೇ ಬಂದ್ ! 

ಇದೇ ವೇಳೆ, ಅಣಕ ಏನಂದ್ರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರತಿನಿಧಿಸುವ ಸಂಸತ್ ಕ್ಷೇತ್ರ, ಮಂಗಳೂರಿನಲ್ಲಿ ಸ್ವಂತ ಬಿಜೆಪಿ ಕಚೇರಿ ಹೊಂದಿದ್ದರೂ, ಅಮಿತ್ ಷಾ ಸೂಚನೆಯಂತೆ ಕಟ್ಟಡದ ನವೀಕರಣ ಕಾಮಗಾರಿಯನ್ನು ಕೈಗೊಂಡು ಮೂರು ವರ್ಷ ಕಳೆದರೂ ಈವರೆಗೂ ಕೆಲಸ ಪೂರ್ತಿಗೊಂಡಿಲ್ಲ. ಕಾಮಗಾರಿ ಕುಂಟುತ್ತಾ ಸಾಗಿದ್ದು, ಮೂರು ಅಂತಸ್ತಿನ ಕಟ್ಟಡವನ್ನು ಇದ್ದಹಾಗೇ ಹೊಸತಾಗಿ ಕಟ್ಟುತ್ತಿದ್ದಾರೆ. ಜೊತೆಗೆ, ಮೊದಲ ಮಹಡಿಯಲ್ಲಿ ಖಾಸಗಿಯವರಿಗೆ ಬಾಡಿಗೆ ನೀಡಲಾಗಿದ್ದ ಕಚೇರಿಗಳನ್ನು ತೆರವು ಮಾಡಲಾಗಿದ್ದು, ಅಲ್ಲಿ ಯುವಮೋರ್ಚಾ, ಇನ್ನಿತರ ಮೋರ್ಚಾಗಳ ಕಚೇರಿ, ಕೊಠಡಿಗಳನ್ನು ರಚಿಸುತ್ತಿದ್ದಾರೆ. ನಳಿನ್ ಕುಮಾರ್ ರಾಜ್ಯಾಧ್ಯಕ್ಷ ಹುದ್ದೆಗೇರುವ ಸಂದರ್ಭದಲ್ಲೇ ಮಂಗಳೂರು ಕಚೇರಿಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಹೀಗಾಗಿ ಕಳೆದ ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಸ್ವಂತ ಜಿಲ್ಲಾ ಬಿಜೆಪಿ ಕಚೇರಿಯಿದ್ದರೂ ಅಲ್ಲಿ ಪಕ್ಷದ ಸಭೆಗಳನ್ನು ಮಾಡುತ್ತಿಲ್ಲ. ಪಕ್ಷ ಅಧಿಕಾರದಲ್ಲಿದ್ದರೂ, ಜಿಲ್ಲಾ ಕಚೇರಿ ಇಲ್ಲದಿರುವುದರಿಂದ ಕಾರ್ಯಕರ್ತರ ಸಭೆಗಳನ್ನು ಬೇರೆ ಕಡೆ ಮಾಡಲಾಗುತ್ತಿದೆ.  

ಪಕ್ಷದ ಕಚೇರಿ ಕಟ್ಟಡ ಬಾಡಿಗೆ ಕೊಡುವಂತಿಲ್ಲ ! 

ರಾಜಕೀಯ ಪಕ್ಷಗಳ ಅಧೀನದ ಕಟ್ಟಡಗಳಲ್ಲಿ ಇರುವ ಕೊಠಡಿಗಳನ್ನು ಚುನಾವಣಾ ಆಯೋಗದ ನಿಯಮದ ಪ್ರಕಾರ, ಬಾಡಿಗೆ ಕೊಡುವಂತಿಲ್ಲ. ಆದರೆ ಮಂಗಳೂರಿನಲ್ಲಿ ಜಿಲ್ಲಾ ಕಚೇರಿ ಅಸ್ತಿತ್ವಕ್ಕೆ ಬಂದು ಹತ್ತು ವರ್ಷ ಕಳೆಯುತ್ತಿದ್ದು, ಅದರಲ್ಲಿನ ಮೊದಲ ಮಹಡಿ ಮತ್ತು ಬೇಸ್ ಮೆಂಟ್ ಭಾಗವನ್ನು ಖಾಸಗಿಯವರಿಗೆ ಬಾಡಿಗೆ ನೀಡಲಾಗಿತ್ತು. ಚುನಾವಣೆ ಆಯೋಗದ ಈ ನಿಯಮವನ್ನು ಬಿಜೆಪಿ, ಕಾಂಗ್ರೆಸ್ ಸೇರಿ ಬಹುತೇಕ ರಾಜಕೀಯ ಪಕ್ಷಗಳು ಪಾಲನೆ ಮಾಡುತ್ತಿಲ್ಲ. ಮೂರು ವರ್ಷಗಳ ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಬಂದ ನಂತರ ನವೀಕರಣ ನೆಪದಲ್ಲಿ ಮಂಗಳೂರಿನ ಜಿಲ್ಲಾ ಕಚೇರಿಯನ್ನು ಬಂದ್ ಮಾಡಿ ಕಾಮಗಾರಿ ಆರಂಭಿಸಲಾಗಿತ್ತು. ಇತ್ತೀಚೆಗೆ ಕಟ್ಟಡದಲ್ಲಿ ಬಾಡಿಗೆ ನೀಡಿದ್ದ ಕಚೇರಿಗಳನ್ನು ತೆರವು ಮಾಡಲಾಗಿದ್ದು, ಅಲ್ಲಿ ಪ್ರತ್ಯೇಕ ಕೊಠಡಿ ರಚನೆ ಮಾಡಲಾಗುತ್ತಿದೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಏನಿರಬೇಕು ? 

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯ ಪ್ರಕಾರ, ಪಕ್ಷದ ಜಿಲ್ಲಾ ಕಚೇರಿಗಳಲ್ಲಿ ಜಿಲ್ಲಾಧ್ಯಕ್ಷರ ಕೊಠಡಿ, ಶಾಸಕ, ಸಂಸದರಿಗೆ ಪ್ರತ್ಯೇಕ ಕೊಠಡಿ, ಗ್ರಂಥಾಲಯ, ಮಾಹಿತಿ ಕೇಂದ್ರ, ಮಾಧ್ಯಮ ಕೊಠಡಿ, ಪ್ರಶಿಕ್ಷಣ ಮತ್ತು ಸಭೆಗಳಿಗಾಗಿ ಸಭಾಂಗಣ, ವಸತಿ ಕೊಠಡಿಗಳು ಇರಬೇಕಿದೆ. ಇದರ ಜೊತೆಗೆ ಯುವಮೋರ್ಚಾ ಸೇರಿದಂತೆ ಪಕ್ಷದ ವಿವಿಧ ಘಟಕಗಳಿಗೂ ಕಚೇರಿಯನ್ನು ಹೊಂದಿರಬೇಕು. ಅದೇ ನಿಯಮದಡಿ ಕೊಪ್ಪಳದಲ್ಲಿ ಸುಸಜ್ಜಿತ ಜಿಲ್ಲಾ ಕಚೇರಿಯನ್ನು ಮಾಡಲಾಗಿದೆ. ಆದರೆ, ಇಡೀ ರಾಜ್ಯದಲ್ಲೇ ತಳಮಟ್ಟದಲ್ಲಿ ಪ್ರಬಲ ಸಂಘಟನೆ ಹೊಂದಿದೆ ಎನ್ನಲಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಚೇರಿಯನ್ನು ನವೀಕರಣ ನೆಪದಲ್ಲಿ ಬಂದ್ ಮಾಡಲಾಗಿದೆ. ನವೀಕರಣ ನೆಪದಲ್ಲಿ ಕಳೆದ ಮೂರು ವರ್ಷಗಳಿಂದಲೂ ಕಚೇರಿ ಬಂದ್ ಮಾಡಿ, ಕಾಲ ತಳ್ಳಲಾಗುತ್ತಿದೆ. ಬೇರೆಲ್ಲ ಕಡೆ ಸುಸಜ್ಜಿತ ಜಿಲ್ಲಾ ಕಚೇರಿ ಕಟ್ಟಡಗಳಾಗಿದ್ದರೆ ಮಂಗಳೂರಿನಲ್ಲಿ ದುಸ್ಥಿತಿ ಇದೆ ಎನ್ನುವ ನೋವನ್ನು ಅಲ್ಲಿನ ಪಕ್ಷದ ಕಾರ್ಯಕರ್ತರೊಬ್ಬರು ಹೇಳಿಕೊಂಡಿದ್ದಾರೆ.

ಮಂಗಳೂರಿನ ಕಚೇರಿ ನವೀಕರಣದ ಬಗ್ಗೆ ಪಕ್ಷದ ಜಿಲ್ಲಾ ಪ್ರಚಾರ ಪ್ರಮುಖ್ ರಣದೀಪ್ ಕಾಂಚನ್ ಅವರಲ್ಲಿ ಕೇಳಿದಾಗ, ಮೂರು ವರ್ಷ ಏನೂ ಆಗಿಲ್ಲ. ಒಂದೂವರೆ ವರ್ಷದಿಂದ ಕೆಲಸ ಆಗ್ತಾ ಇದೆ. ಬಾಡಿಗೆ ನೀಡಿದ್ದ ಎಲ್ಲವನ್ನೂ ತೆರವು ಮಾಡಲಾಗಿದೆ. ಅಲ್ಲಿ ಬೇರೆ ಬೇರೆ ಕಚೇರಿ ಬರಲಿದೆ. ಅಲ್ಲದೆ, ವಿಶ್ರಾಂತಿ ಕೊಠಡಿಯೂ ಬರಲಿದೆ. ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರು ಬಂದಲ್ಲಿ ಜಿಲ್ಲಾ ಕಚೇರಿಯಲ್ಲೇ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ ಕಚೇರಿ ಕೆಲಸ ಪೂರ್ಣವಾಗಲಿದೆ ಎಂದಿದ್ದಾರೆ.

Adv. K Srikanth | പോപുലര്‍ ഫ്രണ്ട് ആഹ്വാനം ചെയ്ത ഹര്‍താലിന് പിണറായി  സര്‍കാരിന്റെ പിന്തുണ ലഭിച്ചെങ്കിലും ജനങ്ങള്‍ പരാജയപ്പെടുത്തിയെന്ന് ബിജെപി  ...

ಕೇರಳದಲ್ಲಿ ಆರು ಜಿಲ್ಲೆಗಳಲ್ಲಿ ಹೊಸತಾಗಿ ಪಕ್ಷದ ಜಿಲ್ಲಾ ಕಚೇರಿ ಮಾಡಲಾಗಿದೆ. ಕಾಸರಗೋಡು ಜಿಲ್ಲಾ ಕಚೇರಿಯನ್ನು ಕೋವಿಡ್ ನಡುವಲ್ಲೇ 2020ರಲ್ಲಿ ಉದ್ಘಾಟನೆ ಮಾಡಲಾಗಿತ್ತು. ಇದಲ್ಲದೆ, ಕಣ್ಣೂರು, ಕೋಯಿಕ್ಕೋಡ್, ಪಾಲಕ್ಕಾಡ್ ಸೇರಿದಂತೆ ಐದು ಜಿಲ್ಲೆಗಳಲ್ಲಿ ಸುಸಜ್ಜಿತ ಜಿಲ್ಲಾ ಕಚೇರಿ ಮಾಡಲಾಗಿದೆ ಎಂದು ಕಾಸರಗೋಡು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಮಾಹಿತಿ ನೀಡಿದ್ದಾರೆ.

BJP National President JP Nadda inaugurates 10 BJP offices at Koppal, but still Mangalore office untouched. Is there any Vastu changes going on for the upcoming election as like congress office in Mangalore.