ಕಮಿಷನ್ ಹೊಡೆಯುವ ಉದ್ದೇಶದಲ್ಲಿ ಸುರತ್ಕಲ್ ಮಾರುಕಟ್ಟೆ ಬಜೆಟ್ ಹೆಚ್ಚಿಸಿದ್ದಾರೆ ; ಶಾಸಕ ಭರತ್ ಶೆಟ್ಟಿ ವಿರುದ್ಧ ಮೊಯ್ದೀನ್ ಬಾವ ಆರೋಪ

24-12-22 12:32 pm       Mangalore Correspondent   ಕರಾವಳಿ

ಶಾಸಕ ಭರತ್ ಶೆಟ್ಟಿ ಸುರತ್ಕಲ್ ಮಾರುಕಟ್ಟೆ ಹೆಸರಲ್ಲಿ 36 ಕೋಟಿ ರೂಪಾಯಿ ಜನರ ದುಡ್ಡನ್ನು ಪೋಲು ಮಾಡಿ, ಭರಪೂರ ಕಮಿಷನ್ ಪಡೆಯಲು ತಂತ್ರ ಹೂಡಿದ್ದಾರೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆರೋಪಿಸಿದ್ದಾರೆ.

ಮಂಗಳೂರು, ಡಿ.24: ಸುರತ್ಕಲ್ ಮಾರುಕಟ್ಟೆ ಕಾಮಗಾರಿಯನ್ನು ಪೂರ್ತಿಗೊಳಿಸಲು ನಾಲ್ಕು ವರ್ಷಗಳಲ್ಲಿ ಶಾಸಕ ಭರತ್ ಶೆಟ್ಟಿಗೆ ಜ್ಞಾನ ಬರಲಿಲ್ಲ. ಈಗ ತಮ್ಮ ಅವಧಿ ಮುಗಿದು ಚುನಾವಣೆಗೆ ಮೂರು ತಿಂಗಳು ಇರುವಾಗ ಸದನದಲ್ಲಿ ಮಾರುಕಟ್ಟೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಮತ್ತೊಮ್ಮೆ ಮಾರುಕಟ್ಟೆಗೆ ಟೆಂಡರ್ ಕರೆಯುವ ಹುನ್ನಾರದಲ್ಲಿ ಬಜೆಟ್ ಮೊತ್ತವನ್ನು ದುಪ್ಪಟ್ಟುಗೊಳಿಸಿದ್ದಾರೆ. ಶಾಸಕ ಭರತ್ ಶೆಟ್ಟಿ ಸುರತ್ಕಲ್ ಮಾರುಕಟ್ಟೆ ಹೆಸರಲ್ಲಿ 36 ಕೋಟಿ ರೂಪಾಯಿ ಜನರ ದುಡ್ಡನ್ನು ಪೋಲು ಮಾಡಿ, ಭರಪೂರ ಕಮಿಷನ್ ಪಡೆಯಲು ತಂತ್ರ ಹೂಡಿದ್ದಾರೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಆರೋಪಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಮೊಯ್ದೀನ್ ಬಾವಾ, ಸುರತ್ಕಲ್ ಮಾರುಕಟ್ಟೆಯನ್ನು 61 ಕೋಟಿ ವೆಚ್ಚದಲ್ಲಿ ತನ್ನ ಶಾಸಕತ್ವದ ಅವಧಿಯಲ್ಲಿ ಕೆಲಸ ಮಾಡಿಸಿದ್ದೆ. ಆದರೆ ಅರ್ಧಕ್ಕೆ ಕಾಮಗಾರಿ ನಡೆದಿರುವುದು ಈಗಲೂ ಹಾಗೆಯೇ ಇದೆ. ನಾಲ್ಕು ವರ್ಷಗಳಲ್ಲಿ ಶಾಸಕ ಭರತ್ ಶೆಟ್ಟಿಯವರಿಗೆ ಅದನ್ನು ಪೂರೈಸುವ ಮನಸ್ಸು ಬಂದಿಲ್ಲ. ಈ ಬಗ್ಗೆ ಸದನದಲ್ಲಿ ಪ್ರಶ್ನೆ ಕೇಳಿ, ಅನುದಾನ ತರಿಸಲು ಸಮಯ ಸಿಕ್ಕಿಲ್ಲ. ಈತ ತಾನು ಸೋತು ಮನೆಗೆ ಹೋಗುತ್ತೇನೆ ಎನ್ನುವ ವಿಷಯ ತಿಳಿದು, ಸುರತ್ಕಲ್ ಮಾರುಕಟ್ಟೆ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದಾರೆ.

ಇವರು ಪ್ರಶ್ನೆ ಮಾಡಿದ್ದಕ್ಕೆ ಸಚಿವ ಭೈರತಿ ಸುರೇಶ್, ಮೊದಲೇ ನಿಗದಿಪಡಿಸಿದ ಉತ್ತರವನ್ನು ಹೇಳಿದ್ದಾರೆ. ಇದೀಗ 81 ಕೋಟಿ ಮೊತ್ತಕ್ಕೆ ಮಾರುಕಟ್ಟೆ ಬಜೆಟನ್ನು ಹೆಚ್ಚಿಸುವುದಾಗಿ ಸಚಿವರು ಸದನದಲ್ಲಿ ತಿಳಿಸಿದ್ದಾರೆ. ಅಲ್ಲದೆ, ತಾನು ಸುರತ್ಕಲ್ ಮಾರುಕಟ್ಟೆ ಭೇಟಿ ನೀಡಿದ್ದಾಗಿಯೂ ಸದನದಲ್ಲಿ ಸುಳ್ಳು ಹೇಳಿದ್ದಾರೆ. ಸದನಕ್ಕೆ ಸುಳ್ಳು ಹೇಳಿ, ಅಧಿವೇಶನದ ಗೌರವ ಹಾಳು ಮಾಡಿದ್ದಾರೆ. ಇವರು ಯಾವಾಗ ಸುರತ್ಕಲ್ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆಂದು ಹೇಳಬೇಕು. ಅಲ್ಲದೆ, ಈಗ ಮೊತ್ತವನ್ನು ಹೆಚ್ಚಿಸಿ ಅನುದಾನ ಮಂಜೂರು ಮಾಡುತ್ತಿದ್ದೇನೆಂದು ಹೇಳುತ್ತಿರುವುದರ ಮರ್ಮ ಏನು.. ಈ ಹಿಂದಿನ ಕಂಟ್ರಾಕ್ಟರ್ ಬದಲಿಸಿ, ಹೊಸತಾಗಿ ಟೆಂಡರ್ ಕರೆಯಲು ಭರತ್ ಶೆಟ್ಟಿ ಮುಂದಾಗಿದ್ದಾರೆ. ಇದರರ್ಥ ಹಿಂದಿನ ಕಂಟ್ರಾಕ್ಟರ್ ಕಮಿಷನ್ ನೀಡಿಲ್ಲ ಎಂದೇ ಎಂಬುದಾಗಿ ಮೊಯ್ದೀನ್ ಬಾವ ಪ್ರಶ್ನೆ ಮಾಡಿದ್ದಾರೆ.

Mangaluru: MLA Dr Bharath Shetty announces Rs 17 lac prize for greenery -  Daijiworld.com

ಹಿಂದೆ ಬಾಕಿ ಉಳಿದಿದ್ದ 14 ಕೋಟಿ ಮತ್ತು ಈಗ ಹೆಚ್ಚಿಸಿರುವ 20 ಕೋಟಿ ಒಟ್ಟು 36 ಕೋಟಿ ಜನರ ದುಡ್ಡನ್ನು ಪೋಲು ಮಾಡಲು ಭರತ್ ಶೆಟ್ಟಿ ಮುಂದಾಗಿದ್ದಾರೆ. ಇದು ಕಮಿಷನ್ ಹೊಡೆಯುವ ಹುನ್ನಾರದ ಭಾಗ. ಇದಕ್ಕೆಲ್ಲ ಶಾಸಕ ಭರತ್ ಶೆಟ್ಟಿಯಿಂದ ಜನರು ಉತ್ತರ ಬಯಸುತ್ತಾರೆ. ಡಿ.31ರಂದು ನಾವು ಸುರತ್ಕಲ್ ನಲ್ಲಿ ಇದೇ ವಿಚಾರದ ಬಗ್ಗೆ ಪ್ರತಿಭಟನೆ ನಡೆಸಲಿದ್ದೇವೆ. ಶಾಸಕ ಭರತ್ ಶೆಟ್ಟಿಯ ಕಮಿಷನ್ ದಂಧೆಯನ್ನು ಹೊರಗೆ ತರುತ್ತೇವೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಉಮೇಶ್ ದಂಡಕೇರಿ, ಪಾಲಿಕೆ ವಿಪಕ್ಷ ನಾಯಕ ನವೀನ್ ಡಿಸೋಜ ಮತ್ತಿತರರಿದ್ದರು.

Former MLA Mohiuddin Bawa has alleged that the questions posed by MLA Dr Bharath Y Shetty regarding the Surathkal market and the minister Byrathi Nagaraj’s reply were both scripted at the Belagavi session of legislature.