ಗೃಹ ಸಚಿವರಿಂದ ಅಡಿಕೆ ಬೆಳೆಗಾರರ ಬೆನ್ನು ಮುರಿಯುವ ಕೆಲಸ, ಹಿಡನ್ ಅಜೆಂಡಾ ಇರುವಂತೆ ಕಾಣುತ್ತಿದೆ ; ರಮಾನಾಥ ರೈ  

30-12-22 10:43 pm       Mangalore Correspondent   ಕರಾವಳಿ

ಕರಾವಳಿಯ ರೈತರ ಆಧಾರಸ್ತಂಭ ಆಗಿರುವ ಅಡಿಕೆ ಬೆಳೆಗಾರರಿಗೆ ಮರಣ ಶಾಸನ ಆಗುವ ರೀತಿ ರಾಜ್ಯದ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಯಿಂದ ರೈತರಿಗೆ ಆಘಾತವಾಗಿದೆ. ಒಂದೆಡೆ ಬರ್ಮಾ ಸೇರಿ ವಿವಿಧ ದೇಶಗಳಿಂದ ಅಡಿಕೆ ಆಮದು ಮಾಡುತ್ತಿದ್ದಾರೆ.

ಮಂಗಳೂರು, ಡಿ.30: ಕರಾವಳಿಯ ರೈತರ ಆಧಾರಸ್ತಂಭ ಆಗಿರುವ ಅಡಿಕೆ ಬೆಳೆಗಾರರಿಗೆ ಮರಣ ಶಾಸನ ಆಗುವ ರೀತಿ ರಾಜ್ಯದ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಯಿಂದ ರೈತರಿಗೆ ಆಘಾತವಾಗಿದೆ. ಒಂದೆಡೆ ಬರ್ಮಾ ಸೇರಿ ವಿವಿಧ ದೇಶಗಳಿಂದ ಅಡಿಕೆ ಆಮದು ಮಾಡುತ್ತಿದ್ದಾರೆ. ಇದರ ಮಧ್ಯೆ ಇಂತಹ ಹೇಳಿಕೆ ನೀಡಿರುವುದರ ಹಿಂದೆ ಏನೋ ಹಿಡನ್ ಅಜೆಂಡಾ ಇರುವಂತೆ ಕಾಣುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈಗಾಗಲೇ ಅಡಿಕೆ ದರ ಕುಸಿಯುತ್ತಿದೆ. 45 ಸಾವಿರದಿಂದ 35 ಸಾವಿರಕ್ಕೆ ಕುಸಿದಿದೆ, ಇದರ ಮಧ್ಯೆ ಇವರು ಈ ರೀತಿ ಹೇಳಿಕೆ ನೀಡುತ್ತಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇರುವ ಶಂಕೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಅಡಿಕೆ ಬೆಳೆಯುತ್ತಾರೆ. ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಜಿಲ್ಲೆಯ ಜನರು ಸಂಕಷ್ಟದಿಂದ ಪಾರಾಗಿದ್ದರೆ, ಅದಕ್ಕೆ ಅಡಿಕೆ ಬೆಳೆ ಕಾರಣ. ಅಡಿಕೆಗೆ ಸ್ವಲ್ಪ ಬೆಲೆ ಇದ್ದುದರಿಂದ ಜನ ಉಳಿದಿದ್ದಾರೆ. ಆದರೆ ಈಗ ಅಡಿಕೆ ಬೆಳೆಯುವರ ಬೆನ್ನು ಮುರಿಯುವ ಕೆಲಸವನ್ನು ರಾಜ್ಯದ ಸಚಿವರು ಮಾಡುತ್ತಿದ್ದಾರೆ.

ಸದನದಲ್ಲಿಯೇ ಅಡಿಕೆಗೆ ಪ್ರೋತ್ಸಾಹ ಬೇಡ ಎನ್ನುತ್ತಾರೆ, ಆರಗ ಜ್ಞಾನೇಂದ್ರ. ಹಾಗಾದ್ರೆ ಅಡಿಕೆಯನ್ನು ಆಮದು ಮಾಡಿಕೊಳ್ಳುವುದು ಯಾಕೆ.. ಹೀಗಾಗಿ ಯಾರದೋ ಒತ್ತಡದಿಂದ ಇವರು ಈ ರೀತಿ ಮಾತನಾಡಿದ್ದಾರೆ ಅನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ವಿಶ್ವ ಮಾರುಕಟ್ಟೆಯಲ್ಲಿ ಅಡಿಕೆಯ ದರ ಹೆಚ್ಚುತ್ತಿದೆ. ಪಾನ್ ಮಸಾಲ ಹೊರತುಪಡಿಸಿ ಅಡಿಕೆಯ ಬೇರೆ ಬೇರೆ ಉತ್ಪನ್ನಗಳು ವ್ಯಾಪಕ ಬಳಕೆಯಾಗುತ್ತಿದೆ. ಇದರ ಮಧ್ಯೆ ಕರಾವಳಿಯಲ್ಲಿ ಅಡಿಕೆ ಬೆಳೆಗೆ ಚುಕ್ಕಿ ರೋಗದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಇದರ ನಡುವೆ ಯಾವುದೇ ಷರತ್ತು ರಹಿತ ಆಮದು ನೀತಿ ರೈತರಿಗೆ ಮರಣ ಶಾಸನ ಆಗುವುದರಲ್ಲಿ ಸಂಶಯ ಇಲ್ಲ. ಬಿಜೆಪಿ ಸರಕಾರ ರೈತರ ಪರ ಇಲ್ಲ. ಬಂಡವಾಳಶಾಹಿಗಳ ಪರ ಇರುವ ಸರ್ಕಾರ. ರಾಹುಲ್ ಹೇಳಿದಂತೆ ದೇಶದಲ್ಲಿ ಬಡವರ ಭಾರತ ಮತ್ತು ಶ್ರೀಮಂತರ ಭಾರತ ಇದೆ. ಜಗತ್ತಿನ ಎರಡನೇ ಸಿರಿವಂತರು ಭಾರತದಲ್ಲಿದ್ದಾರೆ. ಅತಿ ಹೆಚ್ಚು ಬಡವರು ಕೂಡ ಭಾರತದಲ್ಲಿದ್ದಾರೆ. ಹೀಗಾಗಿ ಇಂತಹ ಹೇಳಿಕೆಗಳು ಯಾವ ರೀತಿಯ ಅರ್ಥ ನೀಡುತ್ತವೆ, ಯಾರ ಪರವಾಗಿರುತ್ತವೆ ಅನ್ನುವುದನ್ನು ಚಿಂತಿಸಬೇಕಾಗಿದೆ.

ಈಗಾಗಲೇ ಸಾಲ ಮಾಡಿ ತೋಟ ಬೆಳೆದಿರುವ ರೈತರು ಏನು ಮಾಡಬೇಕು. ಅಡಿಕೆ ಬೆಳೆದ ಕೂಡಲೇ ಉತ್ಪಾದನೆ ಸಿಗುವುದಿಲ್ಲ. ಅಡಿಕೆಯದ್ದು ದೀರ್ಘಕಾಲೀನ ಬೆಳೆ. ಸಾಲ ಮಾಡಿ ಅಡಿಕೆ ನೆಟ್ಟವರಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ. ಇಂತಹ ಹೇಳಿಕೆಯಿಂದ ಇಡೀ ಮಾರುಕಟ್ಟೆಯ ಮೇಲೆ ಪರಿಣಾಮ ಆಗಲಿದ್ದು, ಬೆಲೆ ಕುಸಿಯಲಿದೆ. ಕರಾವಳಿಯಲ್ಲಿ ರೈತರು ಅಡಿಕೆಯನ್ನೇ ನಂಬಿಕೊಂಡವರಿದ್ದು ಇದರಿಂದ ಭಯಕ್ಕೆ ಒಳಗಾಗಿದ್ದಾರೆ. ರೈತರು ಎದುರಿಸುತ್ತಿರುವ ಚುಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳುವ ಬದಲು ಇಂಥ ಹೇಳಿಕೆ ಕೊಡುತ್ತಿದ್ದಾರೆ. ಈ ರೀತಿಯ ನಡೆಯನ್ನು ಕಾಂಗ್ರೆಸ್ ಖಂಡಿಸಲಿದ್ದು, ನಾಳೆಯ (ಡಿ.31) ದಿವಸ ಕಿಸಾನ್ ಸಂಘದ ಮೂಲಕ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ. ಅತಿ ಹೆಚ್ಚು ರೈತರು ಪ್ರತಿ ತಾಲೂಕಲ್ಲಿ ಸೇರಲಿದ್ದಾರೆ ಎಂದು ರಮಾನಾಥ ರೈ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ರಕ್ಷಿತ್ ಶಿವರಾಂ, ಶಶಿಧರ್ ಹೆಗ್ಡೆ, ಉಮೇಶ್ ದಂಡಕೇರಿ, ನವೀನ್ ಡಿಸೋಜ, ಶಾಹುಲ್ ಹಮೀದ್, ಪ್ರತಿಭಾ ಕುಳಾಯಿ, ಶುಭೋದಯ ಆಳ್ವಾ ಮತ್ತಿತರರಿದ್ದರು.

Opposing a statement by Home Minister Araga Jnanendra in the Belagavi Legislative Assembly session that the government should not encourage further cultivation of arecanut, the Pradesh Congress Kisan Cell activists will stage protests at all taluk headquarters in Dakshina Kannada on Saturday, December 31.