ಸುರತ್ಕಲ್ ಬೀಚ್ ನಲ್ಲಿ ವಿದ್ಯಾರ್ಥಿ ನೀರುಪಾಲು ; ಹೊಸ ವರ್ಷದ ಸಂಭ್ರಮದಲ್ಲಿ ಕುಟುಂಬಕ್ಕೆ ಶೋಕ

31-12-22 07:57 pm       Mangalore Correspondent   ಕರಾವಳಿ

ಸುರತ್ಕಲ್ ಲೈಟ್ ಹೌಸ್ ಬೀಚ್ ನಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ನೀರಾಟಕ್ಕಿಳಿದಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ನಡೆದಿದೆ.

ಮಂಗಳೂರು, ಡಿ.31: ಸುರತ್ಕಲ್ ಲೈಟ್ ಹೌಸ್ ಬೀಚ್ ನಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ನೀರಾಟಕ್ಕಿಳಿದಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ನಡೆದಿದೆ.

ನಗರದ ಕದ್ರಿ ಕೆಪಿಟಿಯಲ್ಲಿ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದ ಸತ್ಯಂ(18) ನೀರುಪಾಲಾದ ಯುವಕ. ಸುರತ್ಕಲ್ ಬಳಿಯ ಕಾನದಲ್ಲಿ ವಾಸವಿರುವ ಸುರೇಶ್ ಪ್ರಸಾದ್ ಯಾದವ್ ಅವರ ಮಗ ಸತ್ಯಂ ಶನಿವಾರ ಮಧ್ಯಾಹ್ನ ತನ್ನ ಗೆಳೆಯ ಪ್ರಭಾಕರನ್ ಜೊತೆಗೆ ಲೈಟ್ ಹೌಸ್ ಬೀಚಿಗೆ ತೆರಳಿದ್ದ. ಈ ವೇಳೆ, ಸಮುದ್ರದಲ್ಲಿ ನೀರಾಟದಲ್ಲಿ ತೊಡಗಿದ್ದಾಗಲೇ ಮಧ್ಯಾಹ್ನ 3.15ರ ವೇಳೆಗೆ ಸತ್ಯಂ ನೀರಿನ ಸೆಳೆತಕ್ಕೊಳಗಾಗಿ ನೀರು ಪಾಲಾಗಿದ್ದಾನೆ.

ಸತ್ಯಂ ನೀರಿನಲ್ಲಿ ಕಣ್ಮರೆಯಾಗಿದ್ದರೆ, ಪ್ರಭಾಕರನ್ ಈಜಿ ದಡ ಸೇರಿದ್ದಾನೆ. ಸತ್ಯಂ ಪತ್ತೆಗಾಗಿ ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ. ಹೊಸ ವರ್ಷದ ನೆಪದಲ್ಲಿ ಭಾರೀ ಸಂಖ್ಯೆಯಲ್ಲಿ ಕರಾವಳಿಗೆ ಪ್ರವಾಸ ಬಂದಿರುವ ದೂರದ ಊರಿನ ನಿವಾಸಿಗಳು ಬೀಚ್ ಗೆ ಆಗಮಿಸಿದ್ದಾರೆ. ಶನಿವಾರ ಬೆಳಗ್ಗಿನಿಂದಲೂ ಭಾರೀ ಸಂಖ್ಯೆಯಲ್ಲಿ ಮಂಗಳೂರಿನ ಕಡಲ ತೀರದಲ್ಲಿ ಬಂದು ನೀರಾಟದಲ್ಲಿ ತೊಡಗಿಕೊಂಡಿದ್ದರು. ಎಲ್ಲ ಬೀಚ್ ಗಳಲ್ಲಿಯೂ ಜೀವ ರಕ್ಷಕರು ಮತ್ತು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

18 year old youth goes missing while swimming at Surathkal beach in Mangalore.