ಬಿಜೆಪಿಯಿಂದ ಜ.2ರಿಂದ ಬೂತ್ ವಿಜಯ ಅಭಿಯಾನ, ಮತದಾರರ ವಾಟ್ಸಪ್ ಗ್ರೂಪ್ ರಚನೆ ; ಸುದರ್ಶನ್

31-12-22 11:05 pm       Mangalore Correspondent   ಕರಾವಳಿ

ಬಿಜೆಪಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಬೂತ್ ಕಮಿಟಿ ಸಕ್ರಿಯವಾಗಿರುವುದಲ್ಲ. ವರ್ಷ ಪೂರ್ತಿ ಜನರ ಜೊತೆಗಿದ್ದು ಕಾರ್ಯತತ್ಪರ ಆಗಿರುತ್ತಾರೆ. ಇದೀಗ ಚುನಾವಣೆ ದೃಷ್ಟಿಯಿಂದ ಬೂತ್ ಕಮಿಟಿಯನ್ನು ಮತ್ತಷ್ಟು ಸಕ್ರಿಯಗೊಳಿಸುವ ಉದ್ದೇಶದಲ್ಲಿ ಜ.2ರಿಂದ 12ರ ವರೆಗೆ ಬೂತ್ ವಿಜಯ ಅಭಿಯಾನ ಕೈಗೊಳ್ಳಲಾಗಿದೆ.

ಮಂಗಳೂರು, ಡಿ.31: ಬಿಜೆಪಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಬೂತ್ ಕಮಿಟಿ ಸಕ್ರಿಯವಾಗಿರುವುದಲ್ಲ. ವರ್ಷ ಪೂರ್ತಿ ಜನರ ಜೊತೆಗಿದ್ದು ಕಾರ್ಯತತ್ಪರ ಆಗಿರುತ್ತಾರೆ. ಇದೀಗ ಚುನಾವಣೆ ದೃಷ್ಟಿಯಿಂದ ಬೂತ್ ಕಮಿಟಿಯನ್ನು ಮತ್ತಷ್ಟು ಸಕ್ರಿಯಗೊಳಿಸುವ ಉದ್ದೇಶದಲ್ಲಿ ಜ.2ರಿಂದ 12ರ ವರೆಗೆ ಬೂತ್ ವಿಜಯ ಅಭಿಯಾನ ಕೈಗೊಳ್ಳಲಾಗಿದೆ. ರಾಜ್ಯದಾದ್ಯಂತ ಏಕಕಾಲದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದ್ದು ಪೇಜ್ ಪ್ರಮುಖರ ನಿಯುಕ್ತಿ. ಚುನಾವಣೆ ಸಂದರ್ಭದಲ್ಲಿ ಪ್ರತೀ 30 ಮಂದಿಗೆ ಒಬ್ಬರನ್ನು ಪೇಜ್ ಪ್ರಮುಖರನ್ನಾಗಿ ಮಾಡಲಾಗುತ್ತದೆ. ಅವರು ಮತದಾರ ಪಟ್ಟಿಯ ಒಂದು ಪುಟದಲ್ಲಿರುವ 30 ಮಂದಿಯ ಜೊತೆಗೆ ಸದಾ ಸಂಪರ್ಕದಲ್ಲಿದ್ದು ಅವರನ್ನು ಪಕ್ಷಕ್ಕೆ ಮತ ಹಾಕಿಸುವುದು ಜವಾಬ್ದಾರಿ. ಅದಕ್ಕಾಗಿ ಮತದಾರರ ವಾಟ್ಸಪ್ ಗ್ರೂಪನ್ನೂ ರಚಿಸುತ್ತೇವೆ ಎಂದು ಹೇಳಿದರು.

ಬೂತ್ ವಿಜಯ ಅಭಿಯಾನ ಸಂದರ್ಭದಲ್ಲಿ ಪ್ರತಿ ದಿನ ಬೂತ್ ಮಟ್ಟದಲ್ಲಿ ಮನೆ ಮನೆ ಭೇಟಿ ಮಾಡಲಿದ್ದು, ದಿನದಲ್ಲಿ ಕನಿಷ್ಠ 25 ಮನೆಗಳಲ್ಲಿ ನಮ್ಮ ಮನೆಯೆಂದು ಹೇಳಿ ಪಕ್ಷದ ಧ್ವಜ ಹಾಕಲಿದ್ದೇವೆ. ಜ.2ರಂದು ಗೋವಿಂದ ಪೈ ವೃತ್ತದ ಬಳಿಯ ರಮಣ ಪೈ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕಾರ್ಯಕರ್ತರಿಗೆ ಧ್ವಜವನ್ನೂ ಹಸ್ತಾಂತರ ಮಾಡಲಿದ್ದೇವೆ. ಪ್ರತಿ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಸುದರ್ಶನ್ ಹೇಳಿದರು.

ಅಡಿಕೆ ಬೆಳೆಗೆ ಭವಿಷ್ಯವಿಲ್ಲ ಎಂಬ ಗೃಹ ಸಚಿವರ ಹೇಳಿಕೆ ಕುರಿತು ಕೇಳಿದ್ದಕ್ಕೆ, ಅಡಿಕೆ ನಮ್ಮ ಜಿಲ್ಲೆಯ ಬೆಳೆ. ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಶಾಸಕ ವೇದವ್ಯಾಸ ಕಾಮತ್, ಜಗದೀಶ ಶೇಣವ, ಕಸ್ತೂರಿ ಪಂಜ ಮತ್ತಿತರರಿದ್ದರು.

Bjp ready to election booth vijay abhiyan will start from January 2 says dk bjp district President sudarshan in Mangalore.