ರಾತ್ರಿ ಹೊತ್ತಿನಲ್ಲಿ ಅಧಿಕಾರಿಗಳ ಕೃಪೆಯಿಂದಲೇ ಅಕ್ರಮ ಮರಳು ದಂಧೆ ; ಗಣಿ ಇಲಾಖೆಗೆ ಕೋಟ್ಯಂತರ ರೂ. ನಷ್ಟ ! ಗುತ್ತಿಗೆದಾರರ ಸಂಘ ಆರೋಪ 

02-01-23 03:10 pm       Mangalore Correspondent   ಕರಾವಳಿ

ರಾತ್ರಿ ಹೊತ್ತಿನಲ್ಲಿ ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಲೇ ಜಿಲ್ಲೆಯಾದ್ಯಂತ ಅಕ್ರಮ ಮರಳು ಸಾಗಾಟದ ದಂಧೆ ನಡೆಯುತ್ತಿದೆ.

ಮಂಗಳೂರು, ಜ.2 : ರಾತ್ರಿ ಹೊತ್ತಿನಲ್ಲಿ ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಲೇ ಜಿಲ್ಲೆಯಾದ್ಯಂತ ಅಕ್ರಮ ಮರಳು ಸಾಗಾಟದ ದಂಧೆ ನಡೆಯುತ್ತಿದೆ. ಇದರಿಂದಾಗಿ ಕೋಟ್ಯಂತರ ರುಪಾಯಿ ತೆರಿಗೆ ಹಣ ಸರಕಾರಕ್ಕೆ ನಷ್ಟ ಆಗುತ್ತಿದೆ ಎಂದು ದಕ್ಷಿಣ ಕನ್ನಡ ಸಿವಿಲ್ ಗುತ್ತಿಗೆದಾರರ ಸಂಘ ಆರೋಪಿಸಿದೆ. 

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ದಿನಾಕರ್ ಸುವರ್ಣ, ರಾತ್ರಿ ಹೊತ್ತಿನಲ್ಲಿ ಅಧಿಕಾರಿಗಳ ಹೊಂದಾಣಿಕೆಯಿಂದ ಮರಳು ಸಿಗುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಯಾವ ಲಾರಿಗಳನ್ನು ವಶಕ್ಕೆ ಪಡೆಯಬಾರದೆಂದು ಸೂಚನೆ ಇದೆ. ಹಗಲು ಹೊತ್ತಿನಲ್ಲಿ ಮರಳು ಸಾಗಾಟ ಮಾಡಿದ್ರೆ, ಕೆಲವರು ಪ್ರಶ್ನೆ ಮಾಡುತ್ತಾರೆ. ಹಾಗಾಗಿ ರಾತ್ರಿ ಹೊತ್ತಿನಲ್ಲೇ ಅಕ್ರಮ ಮರಳು ಸಾಗಾಟ ಆಗುತ್ತದೆ. ಮೊದಲು ಇದು ವೃತ್ತಿಯಾಗಿತ್ತು, ಇದೀಗ ಕಳ್ಳದಂಧೆಯಾಗಿ ಮಾರ್ಪಟ್ಟಿದೆ.‌ ಇದರಿಂದ ಗಣಿ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಹೇಳಿದರು. 
 
ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಮಾತನಾಡಿ, ಕಳೆದ ಎರಡು ವಾರಗಳಿಂದ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸುವ ಕ್ರಷರ್ ಜಲ್ಲಿಯ ಪೂರೈಕೆ ಸ್ಥಗಿತಗೊಂಡಿದೆ. ಜಲ್ಲಿಯ ಲಭ್ಯತೆಯಿಲ್ಲದ ಕಾರಣ ಗುತ್ತಿಗೆದಾರರು ಕಟ್ಟಡ ಕಾಮಗಾರಿಗಳನ್ನು ನಡೆಸಲಾಗದ ಸ್ಥಿತಿಯಲ್ಲಿದ್ದಾರೆ. ಇದರಿಂದ ಉತ್ತರ ಭಾರತದಿಂದ ಬಂದು ನೆಲೆ ಕಂಡುಕೊಂಡ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾರದ ಪರಿಸ್ಥಿತಿ ತಲೆದೋರಿದೆ. ಇದಲ್ಲದೆ, ಅಕ್ರಮ ದಂಧೆಕೋರರಿಂದ ದುಪ್ಪಟ್ಟು ಹಣ ಕೊಟ್ಟು ಮರಳು ಪಡೆಯಬೇಕಾಗಿದೆ. ಇದರಿಂದ ಜನಸಾಮಾನ್ಯರಿಗೂ ನಷ್ಟ, ನಮಗೂ ನಷ್ಟವಾಗಿದೆ ಎಂದು ದೂರಿದರು.‌

ನಿರ್ಮಾಣ ಕಾಮಗಾರಿಗಳಿಗೆ ಕ್ರಷರ್ ಜಲ್ಲಿಯನ್ನು ಪೂರೈಸುವ ಪೂರೈಕೆದಾರರು, ಸರ್ಕಾರದ ನೀತಿ, ನಿಯಮಾವಳಿ ಮತ್ತು ಧೋರಣೆಯಿಂದ ಕ್ರಷರ್ ನಡೆಸಲು ತೊಂದರೆ ಎದುರಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಅನೇಕ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ರಾಜ್ಯದ ಮಾತ್ರವಲ್ಲದೆ, ಹೊರ ರಾಜ್ಯಗಳ ಲಕ್ಷಾಂತರ ಮಂದಿ ಕೂಲಿ ಕಾರ್ಮಿಕರು ದುಡಿಯುತ್ತಿದ್ದು, ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದೀಗ ಎರಡು ವಾರಗಳಿಂದ ಜಲ್ಲಿಯ ಪೂರೈಕೆ ಸ್ಥಗಿತಗೊಂಡು ನಿರ್ಮಾಣ ಕಾಮಗಾರಿಗಳು ಅರ್ಧದಲ್ಲಿ ನಿಂತು ಹೋಗಿದೆ. ಹೀಗಾಗಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವ ಸಂಭವವಿದೆ. ಈ ಸಮಸ್ಯೆಯನ್ನು ಶೀಘ್ರ ಪರಿಹಾರ ಕಾಣದಿದ್ದರೆ,  ಕಾರ್ಮಿಕರನ್ನೊಗೊಂಡು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ಕುಮಾರ್ ಜೋಗಿ, ಕಾರ್ಯದರ್ಶಿ ದೇವಾನಂದ, ಟ್ರಸ್ಟಿ ಸುರೇಶ್ ಉಪಸ್ಥಿತರಿದ್ದರು.

Mangalore Illegal sand mining is still active, DK Civil contractors association slam police department.