ಸ್ಮಾರ್ಟ್ ಸಿಟಿಗೆ ಮುಖಭಂಗ ; ಸರಕಾರಿ ನೌಕರರ ಸಂಘದ ಆಸ್ತಿ ಅತಿಕ್ರಮಣಕ್ಕೆ ಕೋರ್ಟ್ ತಡೆಯಾಜ್ಞೆ

16-10-20 10:02 pm       Headline Karnataka News Network   ಕರಾವಳಿ

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಅಕ್ರಮವಾಗಿ ಹಮ್ಮಿಕೊಂಡಿದ್ದ ಕಾಮಗಾರಿಗೆ ಜಿಲ್ಲಾ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. 

ಮಂಗಳೂರು, ಅಕ್ಟೋಬರ್ .16 : ನಗರದ ಹಂಪನಕಟ್ಟೆಯ ಮಿನಿ ವಿಧಾನಸೌಧ ಬಳಿಯ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಕಚೇರಿ ಕಟ್ಟಡಕ್ಕೆ ತಾಗಿಕೊಂಡಿರುವ ಸಂಘದ ಒಡೆತನಕ್ಕೆ ಸೇರಿದ ಖಾಲಿ ನಿವೇಶನದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಅಕ್ರಮವಾಗಿ ಹಮ್ಮಿಕೊಂಡಿದ್ದ ಕಾಮಗಾರಿಗೆ ಜಿಲ್ಲಾ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. 

ಕಾಮಗಾರಿ ನಿಲ್ಲಿಸಲು ಸಂಘದ ವತಿಯಿಂದ ಮನವಿ ಮಾಡಿದರೂ, ನಿರ್ಲಕ್ಷಿಸಿದ ಸ್ಮಾರ್ಟ್ ಸಿಟಿ ಯೋಜನೆಯ  ಆಡಳಿತ ನಿರ್ದೇಶಕರ ವಿರುದ್ಧ ಆರಂಭದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ, ಕಾಮಗಾರಿ ನಿಲ್ಲಿಸುವುದಾಗಿ ಮೌಖಿಕ ಭರವಸೆ ನೀಡಿದರೂ ನಿಲ್ಲಿಸಿರಲಿಲ್ಲ. ಹೀಗಾಗಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಆಡಳಿತ ನಿರ್ದೇಶಕರು, ಮಂಗಳೂರಿನ ನಗರ ಮಾಪನ ಕಚೇರಿಯ ಯೋಜನಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರನ್ನು ಪ್ರತಿವಾದಿಗಳಾಗಿಸಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. 

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಆದೇಶ ಹೊರಡಿಸಿದ್ದು ಸಂಘದ ಒಡೆತನಕ್ಕೆ ಒಳಪಟ್ಟ ನಿವೇಶನವನ್ನು ಪ್ರವೇಶಿಸಿ ಅಕ್ರಮವಾಗಿ ಯಾವುದೇ ಕಾಮಗಾರಿ ನಡೆಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಮಂಗಳೂರಿನ ಮಿನಿ ವಿಧಾನಸೌಧ ಪಕ್ಕದಲ್ಲಿ ಸಂಘ 45 ಸೆನ್ಸ್ ಜಮೀನು ಹೊಂದಿದ್ದು ಹತ್ತು ವರ್ಷಗಳ ಹಿಂದೆ ನೂರು ವರ್ಷಗಳಿಗೂ ಹಳೆಯ ಇತಿಹಾಸ ಹೊಂದಿರುವ ಸೂಟರ್ ವಾಚನಾಲಯ ಮತ್ತು  ರಾಜಾರಾಮ್ ಬ್ಲಾಕ್ ಇದ್ದ ಎನ್.ಜಿ.ಒ. ಕಟ್ಟಡದ ಭಾಗವನ್ನು  ಕೆಡವಿ ಸದರಿ ಸ್ಥಳದಲ್ಲಿ ಸಿಟಿ ಸರ್ವೇ ಇಲಾಖೆಯ ಕಚೇರಿ ಕಟ್ಟಡ ನಿರ್ಮಿಸಲಾಗಿತ್ತು. ಇತ್ತೀಚೆಗೆ ಸಂಘದ ಕಾರ್ಯಕಾರಿ ಸಮಿತಿಯ ಅನುಮತಿ ಇಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯ ಅಡಿ ಸಂಘದ ಒಡೆತನದ ಜಮೀನಿನಲ್ಲಿ ರಸ್ತೆ ನಿರ್ಮಾಣ ಕಾರ್ಯ ಮಾಡಲಾಗಿದೆ. 

ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಣೆಯ ಈ ವರ್ಷದಲ್ಲಿ ಸಂಘದ ಹಲವಾರು ಹಿರಿಯರ ನಿಸ್ವಾರ್ಥ ತ್ಯಾಗದಿಂದ ಪಡೆದಿರುವ  ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಬಲವಂತವಾಗಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಾಗಿ ವಶಪಡಿಸಲು ಪ್ರಯತ್ನಿಸಿರುವುದು ತೀರಾ ವಿಷಾದನೀಯ ಸಂಗತಿಯಾಗಿದೆ ಜಿಲ್ಲಾ ಸರಕಾರಿ ನೌಕರರ ಸಂಘವು ಹೇಳಿಕೆಯಲ್ಲಿ ತಿಳಿಸಿದೆ. 

ಸಂಘದ ಒಡೆತನದ ಆಸ್ತಿಗಳನ್ನು ರಕ್ಷಿಸುವ ಜವಾಬ್ದಾರಿ ಆಡಳಿತ ಮಂಡಳಿಯದ್ದಾಗಿದೆ. ಸಂಘದ ಜಮೀನನ್ನು  ಯಾವುದೇ  ಅತಿಕ್ರಮಣದಿಂದ ರಕ್ಷಿಸುವ ನಿಟ್ಟಿನಲ್ಲಿ ಶಾಶ್ವತ ನಿರ್ಬಂಧಕಾಜ್ಞೆ ದಾವೆಯನ್ನು ಹೂಡಲಾಗಿದ್ದು ನ್ಯಾಯಾಲಯ, ಮುಂದಿನ ವಿಚಾರಣೆ ದಿನಾಂಕದ ವರೆಗೆ ತಾತ್ಕಾಲಿಕ  ತಡೆಯಾಜ್ಞೆ ನೀಡಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Dakshina Kannada District Government Employees Union has registered a complaint against the Mangaluru Smart City Limited (MSCL) for ignoring court’s order to stop work on its land.