ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚಳ ಕರಾವಳಿಗೆ ಆತಂಕ ; ಎನ್ಐಎ ಕಚೇರಿ ಸ್ಥಾಪನೆಗೆ ಮತ್ತೆ ವಿಹಿಂಪ ಒತ್ತಾಯ  

12-01-23 02:40 pm       Mangalore Correspondent   ಕರಾವಳಿ

ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ  (ಐಸಿಸ್) ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಸಂಚು ರೂಪಿಸುತ್ತಿರುವುದು ಮಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನದಿಂದ ಸಾಬೀತಾಗಿದೆ.

ಮಂಗಳೂರು, ಜ.12 : ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ  (ಐಸಿಸ್) ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಸಂಚು ರೂಪಿಸುತ್ತಿರುವುದು ಮಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನದಿಂದ ಸಾಬೀತಾಗಿದೆ. ಇಸ್ಲಾಮಿಕ್ ಭಯೋತ್ಪಾದಕ  ಸಂಘಟನೆಯ ಸಂಪರ್ಕದ ಹಿನ್ನೆಲೆಯಲ್ಲಿ ಕೊಣಾಜೆಯ ಪಿಎ ಕಾಲೇಜಿನ ವಿದ್ಯಾರ್ಥಿ ಉಡುಪಿ ಜಿಲ್ಲೆಯ ನಿವಾಸಿ ರಿಶಾನ್ ತಾಜುದ್ದೀನ್ ಶೇಖ್ ಮತ್ತು ನಿನ್ನೆ ತೊಕ್ಕೊಟ್ಟು ಬಬ್ಬುಕಟ್ಟೆ ನಿವಾಸಿ ಮಾಝಿನ್ ಅಬ್ದುಲ್ ರೆಹಮಾನ್ ಎಂಬವರನ್ನು ಎನ್ಐಎ ಬಂಧಿಸಿರುವುದು ಕರಾವಳಿ ಜನರಲ್ಲಿ ಆತಂಕ ಮೂಡಿಸಿದೆ. 

ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದಕ  ಕೃತ್ಯ ನಡೆದರೂ ಅದಕ್ಕೆ ಕರಾವಳಿಯ ಸಂಪರ್ಕವಿರುವುದು ಕರಾವಳಿ ಭದ್ರತೆಗೆ ಅಪಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶಾಶ್ವತವಾಗಿ ಎನ್ಐಎ  ಮತ್ತು ಭಯೋತ್ಪಾದಕ ನಿಗ್ರಹ ದಳದ ಕಚೇರಿ ಸ್ಥಾಪಿಸಲು ಸೂಕ್ತ ಸಂದರ್ಭವಾಗಿದ್ದು, ತಕ್ಷಣ ಕೇಂದ್ರ ಮತ್ತು ರಾಜ್ಯ ಸರಕಾರ, ಕರಾವಳಿಯ ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರ ಪರಿಗಣಿಸಿ ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ. 

ಭಯೋತ್ಪಾದಕ    ರ ಚಟುವಟಿಕೆಗಳು ಕರಾವಳಿಯಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಕರಾವಳಿಯಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ನೆಲೆಯೂರಲು ಪ್ರಯತ್ನಿಸುತ್ತಿದ್ದಾರೆ. ದೇಶ ವಿರೋಧಿ ಗೋಡೆ ಬರಹಗಳು, ಕಾಲೇಜು ವಿದ್ಯಾರ್ಥಿಗಳನ್ನು ವಿಧ್ವಂಸಕ ಕೃತ್ಯಗಳಿಗೆ ಜೋಡಿಸುತ್ತಿರುವುದು, ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯರನ್ನು ಮತಾಂತರಗೊಳಿಸಿ, ಲವ್ ಜಿಹಾದ್ ಮೂಲಕ ಅವರನ್ನು ಭಯೋತ್ಪಾದಕ ಕೃತ್ಯಗಳಿಗೆ ಉಪಯೋಗಿಸುತ್ತಿರುವುದು, ಬಾಂಬ್ ಸ್ಫೋಟ ತರಬೇತಿಗೆ ಸಂಚು ರೂಪಿಸುವುದು, ಹಿಂದುಗಳನ್ನೂ ಅಮಾನುಷವಾಗಿ ಹತ್ಯೆ ಮಾಡಿಸುವುದು, ಕುಕ್ಕರ್ ಬಾಂಬ್ ಸ್ಪೋಟಿಸಿ ಜನರಲ್ಲಿ ಭಯವನ್ನು ಹುಟ್ಟಿಸುವುದು, ಇದನ್ನೆಲ್ಲ ಕಂಡಾಗ ಜಿಲ್ಲೆಯಲ್ಲಿ ಇಸ್ಲಾಮಿಕ್ ಐಸಿಸ್ ಮೂಲಭೂತವಾದಿಗಳು ಕರಾವಳಿಯನ್ನು ಗುರಿಯಾಗಿಸಿರುವುದು ಸ್ಪಷ್ಟವಾಗಿದ್ದು ಇದು ಬಹಳ ಆತಂಕಕಾರಿ ವಿಚಾರವಾಗಿದೆ. ಈ ಬಗ್ಗೆ ಕರಾವಳಿಯ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ಕಿತ್ತೊಗೆಯಲು ಕೈಜೋಡಿಸಬೇಕಾಗಿದೆ ಎಂದು
ಶರಣ್ ಪಂಪುವೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Increase in number of terror activists in Mangalore, VHP Sharan Pumpwell demands NIA office. As Mangalore is witnessing arrest of those involved in Cooker blast and trail blast in Shivamogga VHP demands establishing NIA office.