ವಿಧಾನಸಭೆ ಚುನಾವಣೆ ತಯಾರಿ ; ಜ.25ರಂದು ಮಂಗಳೂರಿನಲ್ಲಿ ಆರು ಜಿಲ್ಲೆಗಳ ಕಾಂಗ್ರೆಸ್ ನಾಯಕರ ಸಭೆ

24-01-23 10:42 pm       Mangalore Correspondent   ಕರಾವಳಿ

ವಿಧಾನಸಭೆ ಚುನಾವಣೆ ಪೂರ್ವಭಾವಿ ತಯಾರಿ ಕುರಿತಾಗಿ ಆರು ಜಿಲ್ಲೆಗಳ ವಿಧಾನಸಭೆ ಅಭ್ಯರ್ಥಿ ಆಕಾಂಕ್ಷಿಗಳು, ನಾಯಕರ ಜೊತೆಗೆ ಜ.25ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಮತ್ತು ಬಿಕೆ ಹರಿಪ್ರಸಾದ್ ಚರ್ಚೆ ನಡೆಸಲಿದ್ದಾರೆ.

ಮಂಗಳೂರು, ಜ.24: ವಿಧಾನಸಭೆ ಚುನಾವಣೆ ಪೂರ್ವಭಾವಿ ತಯಾರಿ ಕುರಿತಾಗಿ ಆರು ಜಿಲ್ಲೆಗಳ ವಿಧಾನಸಭೆ ಅಭ್ಯರ್ಥಿ ಆಕಾಂಕ್ಷಿಗಳು, ನಾಯಕರ ಜೊತೆಗೆ ಜ.25ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಮತ್ತು ಬಿಕೆ ಹರಿಪ್ರಸಾದ್ ಚರ್ಚೆ ನಡೆಸಲಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, 2019ರ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳು, 2018ರ ಚುನಾವಣೆಯ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಚುನಾವಣೆ ತಯಾರಿ, ಪ್ರಚಾರ ಕಾರ್ಯ, ಪ್ರಣಾಳಿಕೆ ವಿಚಾರಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಲಿದೆ ಎಂದು ಹೇಳಿದ್ದಾರೆ.

ಎಂಟು ವರ್ಷಗಳ ಬಿಜೆಪಿ ಆಡಳಿತದ ವೈಫಲ್ಯಗಳು, ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡುವುದು, ಕಾಂಗ್ರೆಸ್ ಅವಧಿಯ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯಕ್ರಮ ಏರ್ಪಡಿಸಲಾಗುವುದು. ಮುಂದಿನ ಹಂತದಲ್ಲಿ ವಿಧಾನಸಭೆ ಮಟ್ಟದಲ್ಲಿ ಸಭೆ ನಡೆಸುವ ಬಗ್ಗೆಯೂ ಚರ್ಚಿಸಲಾಗುವುದು. ಅಭ್ಯರ್ಥಿ ಬಗ್ಗೆ ಚಿಂತಿಸದೆ ಚುನಾವಣೆಗೆ ತಯಾರಿ ನಡೆಸುವುದಕ್ಕೆ ಪಕ್ಷವನ್ನು ಸಜ್ಜುಗೊಳಿಸಲಾಗುವುದು ಎಂದು ಹೇಳಿದರು.

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕರಾವಳಿಗೆ ಸೀಮಿತವಾಗಿ ಎಂಟು ಅಂಶಗಳ ವಿಶೇಷ ಕಾರ್ಯಕ್ರಮವನ್ನು ಮುಂದಿಟ್ಟಿದ್ದೇವೆ. ಅದಷ್ಟೇ ಅಲ್ಲದೆ, ಆಯಾ ಕ್ಷೇತ್ರಗಳ ಜನರ ಆಶೋತ್ತರಗಳ ಬಗ್ಗೆ ಚರ್ಚೆ ನಡೆಸಿ ಒಟ್ಟು 200 ಅಂಶಗಳ ಸಮಗ್ರ ಪ್ರಣಾಳಿಕೆ ರಚಿಸಲಾಗುವುದು. ಆ ನಿಟ್ಟಿನಲ್ಲಿ ಜನರ ಅಭಿಪ್ರಾಯ ಪಡೆಯಲಾಗುವುದು. ಪ್ರಜಾಧ್ವನಿ ಕಾರ್ಯಕ್ರಮ ಯಶಸ್ಸಿಗೆ ದುಡಿದ ಸರ್ವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹರೀಶ್ ಕುಮಾರ್ ಹೇಳಿದರು.

Election List of candidates to be announced on Jan 25th by Randeep Surjewala in Mangalore Manjunath Bhandary.