ಕಾರ್ಕಳದಲ್ಲಿ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ; ಕರಾವಳಿ ಟೂರಿಸಂ ಅಭಿವೃದ್ಧಿಗೆ ಯೋಜನೆ ; ಸಿಎಂ ಬೊಮ್ಮಾಯಿ ಘೋಷಣೆ 

27-01-23 11:07 pm       Udupi Correspondent   ಕರಾವಳಿ

ಕಾರ್ಕಳ ತಾಲೂಕಿನ ಬೈಲೂರಿನ ಉಮಿಕುಂಜ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಪರಶುರಾಮ ಥೀಂ ಪಾರ್ಕನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ.

ಉಡುಪಿ, ಜ.27 : ಕಾರ್ಕಳ ತಾಲೂಕಿನ ಬೈಲೂರಿನ ಉಮಿಕುಂಜ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಪರಶುರಾಮ ಥೀಂ ಪಾರ್ಕನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಪರಶುರಾಮನ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿ, ತುಳುನಾಡು ಬಂಗಾರದ ನಾಡು ಆಗಲಿ ಎಂದು ಬೊಮ್ಮಾಯಿ ಹಾರೈಸಿದ್ದಾರೆ. 

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಇಂಧನ ಸಚಿವ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಥೀಂ ಪಾರ್ಕ್ ಉದ್ಘಾಟಿಸಿದರು. 

ಸುಮಾರು 15 ಕೋಟಿ ವೆಚ್ಚದಲ್ಲಿ ಪರಶುರಾಮನ ಪ್ರತಿಮೆ, ಬಯಲು ರಂಗಮಂದಿರ, ಆರ್ಟ್ ಗ್ಯಾಲರಿ, ಭಜನಾ ಮಂದಿರ ನಿರ್ಮಾಣ ಮಾಡಲಾಗಿದೆ. ಶೇ.90ರಷ್ಟು ಕಾಮಗಾರಿ ಪೂರ್ಣವಾಗಿದೆ. ಇಂದು ಕರ್ನಾಟಕದ ಕರಾವಳಿಯ ಪಾಲಿಗೆ ಐತಿಹಾಸಿಕ ದಿನ. ಪರಶುರಾಮ ಥೀಂ ಪಾರ್ಕ್, ಪ್ರತಿಮೆ ಅನಾವರಣ ಮಾಡಿದ ನಾವು ಭಾಗ್ಯವಂತರು. ಇದೊಂದು ಇತಿಹಾಸ ಸೃಷ್ಟಿ ಮಾಡಿದ ದಿನ ಎಂದು ಹೇಳುತ್ತೇನೆ. ಪರಶುರಾಮ ರೋಚಕ ಕಥೆ ಇರುವ ಅವತಾರ ಪುರುಷ ಎಂದು ಬೊಮ್ಮಾಯಿ ಬಣ್ಣಿಸಿದರು. 

ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಕರಾವಳಿಗೆ ಟೂರಿಸಂ ನ ಮಾಸ್ಟರ್ ಪ್ಲ್ಯಾನ್ ಮಾಡಿದ್ದೇವೆ. ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇವೆ. ಈ ಭಾಗದ ಜನ ಪರಿಶ್ರಮಿಗಳು. ಕರಾವಳಿ ಭಾಗಕ್ಕೆ ಒಂದೂವರೆ ಲಕ್ಷ ಕೋಟಿ ರುಪಾಯಿ ಹೂಡಿಕೆಗೆ ಕಂಪನಿಗಳು ಮುಂದೆ ಬಂದಿವೆ. ಕರಾವಳಿಗೆ ಪ್ಯಾಕೇಜ್ ಕೊಡಲ್ಲ, ಬದುಕು ಕಟ್ಟಿಕೊಡುತ್ತೇವೆ. ಪರಶುರಾಮನ ಸ್ಥಾಪನೆ ನಂತರ ತುಳುನಾಡು ಬಂಗಾರದ ನಾಡು ಆಗಲಿದೆ ಎಂದು ಹೇಳಿದರು.

Udupi, Chief Minister Basavaraja Bommai inaugurates the Parashurama Theme Park in Karkala. Mr. Bommai said, “Coastal Karnataka has ample opportunities in the tourism front. Plans are underway to develop tourism in Coastal Karnataka and will be executed in the coming days. A master plan for Coastal Karnataka with emphasis on pilgrimage tourism, beach tourism, cultural tourism and hinterland tourism will be prepared to boost the economic growth of the region.”