ಫೆ.5ರಿಂದ ಕರಾವಳಿಯಲ್ಲಿ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ, ಸುಳ್ಯದಿಂದ ಆರಂಭ ; ಆರ್ ವಿ ದೇಶಪಾಂಡೆ

03-02-23 08:48 pm       Mangalore Correspondent   ಕರಾವಳಿ

ಕರಾವಳಿ ಮತ್ತು ಮಲೆನಾಡಿನ ಐದು ಜಿಲ್ಲೆಗಳಲ್ಲಿ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಫೆ.5ರಿಂದ ಸುಳ್ಯದಲ್ಲಿ ಆರಂಭಗೊಳ್ಳಲಿದೆ. ಸುಳ್ಯ ತಾಲೂಕಿನ ನೆಲ್ಯಾಡಿಯಲ್ಲಿ ಮೊದಲ ಸಮಾವೇಶ ನಡೆಯಲಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ನಾಯಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ.

ಮಂಗಳೂರು, ಫೆ.3: ಕರಾವಳಿ ಮತ್ತು ಮಲೆನಾಡಿನ ಐದು ಜಿಲ್ಲೆಗಳಲ್ಲಿ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಫೆ.5ರಿಂದ ಸುಳ್ಯದಲ್ಲಿ ಆರಂಭಗೊಳ್ಳಲಿದೆ. ಸುಳ್ಯ ತಾಲೂಕಿನ ನೆಲ್ಯಾಡಿಯಲ್ಲಿ ಮೊದಲ ಸಮಾವೇಶ ನಡೆಯಲಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ನಾಯಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಫೆ.5ರಂದು ನೆಲ್ಯಾಡಿಯಲ್ಲಿ ಮೊದಲ ಸಭೆ ನಡೆಯಲಿದೆ. 6ರಂದು ಮೂಡುಬಿದ್ರೆ, 7ರಂದು ಕಾಪು, 8ರಂದು ಕುಂದಾಪುರ, 9ಕ್ಕೆ ಶೃಂಗೇರಿ ತಲುಪಲಿದೆ. ಐದು ಜಿಲ್ಲೆಗಳ ವ್ಯಾಪ್ತಿಯ 26 ಕ್ಷೇತ್ರಗಳಲ್ಲಿಯೂ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಈ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸೀಟು ಗಳಿಸುವುದೇ ಈ ಯಾತ್ರೆಯ ಉದ್ದೇಶ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರುವುದು ಖಂಡಿತ. ಅದಕ್ಕಾಗಿ ಕಾರ್ಯಕರ್ತರು ಮತ್ತು ಮತದಾರರನ್ನು ತಲುಪಲು ಯಾತ್ರೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು ನಿರುದ್ಯೋಗದಿಂದಾಗಿ 5 ಕೋಟಿಯಷ್ಟು ಯುವಕ- ಯುವತಿಯರು ಉದ್ಯೋಗ ಇಲ್ಲದಾಗಿದ್ದಾರೆ. ದೇಶದಲ್ಲಿ ನಿರುದ್ಯೋಗ ಹೆಚ್ಚಳ ಮಾಡಿದ್ದೇ ಪ್ರಧಾನಿ ಮೋದಿಯ ಸಾಧನೆ ಎಂದು ಟೀಕಿಸಿದ ದೇಶಪಾಂಡೆ, ಕರಾವಳಿಯಲ್ಲಿ ಕೋಮು ವೈಷಮ್ಯದ ರಾಜಕಾರಣದಿಂದಾಗಿ ಇಲ್ಲಿಂದ ಕೈಗಾರಿಕೆಗಳು, ಕಂಪನಿಗಳು ಊರು ಬಿಟ್ಟು ಹೋಗುತ್ತಿವೆ. ಇನ್ಫೋಸಿಸ್ ನಗರ ಬಿಟ್ಟು ಹೊರಗೆ ಹೋಗಿರುವುದನ್ನು ನೋಡಿದ್ದೇವೆ. ಸಾಮರಸ್ಯ ಕದಡುವ ಬಿಜೆಪಿಗೆ ಈ ಬಾರಿ ಜನರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಪರಮೇಶ್ವರ್ ಪ್ರಣಾಳಿಕೆ ಸಮಿತಿಗೆ ರಾಜಿನಾಮೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಅದು ಬರೀ ಊಹಾಪೋಹದ ಸುದ್ದಿ. ಅವರಲ್ಲಿ ಮಾತನಾಡಿದ್ದೇನೆ. ಅಂತಹ ಮಾತುಗಳನ್ನು ಆಡಿಯೇ ಇಲ್ಲ ಎಂದರು. ಅಭ್ಯರ್ಥಿಗಳ ಪಟ್ಟಿ ಯಾವಾಗ ಬಿಡುಗಡೆ ಎಂದು ಕೇಳಿದ್ದಕ್ಕೆ, ನಿನ್ನೆಯಷ್ಟೇ ಕೆಪಿಸಿಸಿ ಚುನಾವಣಾ ಸಮಿತಿ ಚರ್ಚೆ ನಡೆಸಿದೆ. ಯಾರು ಗೆಲ್ಲುತ್ತಾರೋ ಅವರಿಗೆ ಟಿಕೆಟ್ ಸಿಗಲಿದೆ. ಚುನಾವಣಾ ಸಮಿತಿಯಿಂದ ಕೇಂದ್ರ ಸಮಿತಿಗೆ ಪಟ್ಟಿ ನೀಡಿದ್ದು ಸದ್ಯದಲ್ಲೇ ಅಭ್ಯರ್ಥಿ ಯಾರೆಂದು ಗೊತ್ತಾಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜೆಆರ್ ಲೋಬೊ ಮತ್ತಿತರರಿದ್ದರು.

Congress leader R V Deshpande on Friday, February said that the Congress will commence its ‘Karavali-Malnad Dhwani Yatra’ from February 5. “The yatra will commence from the Sullia constituency, on February 6 from Moodbidri constituency, on February 7 from Kaup constituency, on February 8 from Kundapur and on February 9 from Sringeri. Though the yatra commences from the coastal region, it will visit 26 constituencies in the state,” he said.