ಫಾಝಿಲ್ ಹತ್ಯೆ ಆರೋಪಿಯಿಂದ ಹಫ್ತಾ ಬೇಡಿಕೆ, ಜೀವ ಬೆದರಿಕೆ ;  ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು 

09-02-23 11:21 am       Mangalore Correspondent   ಕರಾವಳಿ

ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಹರ್ಷಿತ್ ಎಂಬಾತ ಕೋಟೆಕಾರು ಮಾಡೂರು ನಿವಾಸಿ ವ್ಯಕ್ತಿಯೊಬ್ಬರಲ್ಲಿ ಹಫ್ತಾಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಉಳ್ಳಾಲ, ಫೆ.9 : ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಹರ್ಷಿತ್ ಎಂಬಾತ ಕೋಟೆಕಾರು ಮಾಡೂರು ನಿವಾಸಿ ವ್ಯಕ್ತಿಯೊಬ್ಬರಲ್ಲಿ ಹಫ್ತಾಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಬಗ್ಗೆ ಆರೋಪಿ ಹರ್ಷಿತ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಫಾಝಿಲ್ ಕೊಲೆ ಆರೋಪಿ ಹರ್ಷಿತ್ ಫೆ.2ರಂದು ಮಾಡೂರು ನಿವಾಸಿ ಬಸ್ ನಿರ್ವಾಹಕ ವೃತ್ತಿ ಮಾಡುತ್ತಿರುವ ಉದಯ್ ಕುಮಾರ್ ಎಂಬವರಿಗೆ ಕರೆ ಮಾಡಿ, ನಾನು ಫಾಝಿಲ್ ಕೊಲೆ ಆರೋಪಿ ಆಗಿದ್ದು , ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ. ನನಗೆ ಧನ ಸಹಾಯ ನೀಡಬೇಕು ಎಂದು ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಉದಯ್ ಕುಮಾರ್ ನಿರಾಕರಿಸಿದ್ದರು. 

ಇದರ ಬಳಿಕ ಫೆ.6 ರಂದು ಹರ್ಷಿತ್ ಉದಯ್ ಗೆ ಮತ್ತೊಮ್ಮೆ ಕರೆ ಮಾಡಿ ನನಗೆ ಮತ್ತು ಜೈಲಿನಲ್ಲಿ ಇರುವವರಿಗೆ ಧನ ಸಹಾಯ ನೀಡಬೇಕು ಎಂದು ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಉದಯ್ ಕುಮಾರ್ ಒಪ್ಪದ ಕಾರಣ ಹರ್ಷಿತ್ ಜೀವ ಬೆದರಿಕೆ ಒಡ್ಡಿದ್ದಾನೆ. ಈ ಬಗ್ಗೆ ಉದಯ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangalore Surathkal Fazil murder accused Harshith demands hafta, complaint filed at Ullal police station by Bus owner Uday Kumar.