ಆಮ್ ಆದ್ಮಿ ಬೆಳವಣಿಗೆ ಸಹಿಸದೆ ಬಿಜೆಪಿ ನಾಯಕರು ಸಿಸೋಡಿಯಾ ಬಂಧಿಸಿದ್ದಾರೆ ; ಅಶೋಕ್ ಎಡಮಲೆ ಆಕ್ರೋಶ

28-02-23 08:28 pm       Mangalore Correspondent   ಕರಾವಳಿ

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿರುವ ಸಿಬಿಐ ಕ್ರಮವನ್ನು ಆಮ್ ಆದ್ಮಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿ ನಾಯಕರು ಆಮ್ ಆದ್ಮಿ ಪಕ್ಷವು ದೇಶದಲ್ಲಿ ಬೆಳೆಯುತ್ತಿರುವುದನ್ನು ಸಹಿಸದೆ ನಮ್ಮ ನಾಯಕರನ್ನು ಬಂಧಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದ್ದಾರೆ.

ಮಂಗಳೂರು, ಫೆ.28: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿರುವ ಸಿಬಿಐ ಕ್ರಮವನ್ನು ಆಮ್ ಆದ್ಮಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿ ನಾಯಕರು ಆಮ್ ಆದ್ಮಿ ಪಕ್ಷವು ದೇಶದಲ್ಲಿ ಬೆಳೆಯುತ್ತಿರುವುದನ್ನು ಸಹಿಸದೆ ನಮ್ಮ ನಾಯಕರನ್ನು ಬಂಧಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ನೂತನ ಅಬಕಾರಿ ನೀತಿಯನ್ನು ಇನ್ನೂ ಜಾರಿಗೆ ತಂದಿಲ್ಲ. ಇದಲ್ಲದೆ, ಇದೇ ರೀತಿಯ ನಿಯಮಗಳು ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಹಾಗಿದ್ದರೂ, ಅಬಕಾರಿ ನೀತಿಯಲ್ಲಿ ಉಲ್ಲಂಘನೆಯಾಗಿದೆಯೆಂದು ಹೇಳಿ ಒಂದು ವರ್ಷದಿಂದ ಸಿಸೋಡಿಯಾರನ್ನು ಗುರಿಯಾಗಿಸಿ ಕೇಂದ್ರ ಸರಕಾರದ ತನಿಖಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಆರೋಪವನ್ನು ಸಾಬೀತು ಮಾಡಲು ಸಣ್ಣ ಸಾಕ್ಷ್ಯ ಸಿಗದೇ ಇದ್ದರೂ, ಸುದೀರ್ಘ ಕಾಲ ಕಿರುಕುಳ ಕೊಟ್ಟು ಬಂಧಿಸಿದ್ದಾರೆ. ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪಕ್ಷದ ನಾಯಕರನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಮಾತನಾಡಿ, ಸಿಸೋಡಿಯಾರನ್ನು ಬಿಜೆಪಿಗೆ ಸೇರಲು ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿ ಸೇರಿದರೆ ಎಲ್ಲವೂ ಬಂದ್ ಆಗುತ್ತದೆ. ಒಂದೇ ಕಾರಣಕ್ಕಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು. ಕರ್ನಾಟಕ ಸೇರಿದಂತೆ ದೇಶದಲ್ಲಿ ಆಮ್ ಆದ್ಮಿ ಪಾರ್ಟಿ ಪ್ರವರ್ಧಮಾನಕ್ಕೆ ಬರುತ್ತಿದ್ದು, ಜನರು ಪಕ್ಷದ ಪರವಾಗಿ ಇರುವುದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ನಮ್ಮ ನಾಯಕರನ್ನು ಬಂಧಿಸಿಟ್ಟು ಹಗರಣ ಎಂದು ಬಿಂಬಿಸಲು ಹೊರಟಿದೆ ಎಂದರು.

ದೆಹಲಿಯಲ್ಲಿ ಶಿಕ್ಷಣ ಸಚಿವರಾಗಿ ಮನೀಶ್ ಸಿಸೋಡಿಯಾ 25 ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಸುಮಾರು 20 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಇಂತಹವರ ವಿರುದ್ಧ ಬಿಜೆಪಿ ನಾಯಕರು ಕೀಳು ಮಟ್ಟದ ಕುತಂತ್ರ ಮಾಡುತ್ತಿದ್ದು, ಗಿಡ ಚಿವುಟಿದಷ್ಟು ಚಿಗುರುವಂತೆ ಆಮ್ ಆದ್ಮಿ ಪಾರ್ಟಿ ಕೂಡ ಬಿಜೆಪಿ ಕಿರುಕುಳ ನೀಡಿದಷ್ಟು ಹೆಚ್ಚಿನ ವೇಗದಲ್ಲಿ ಬೆಳೆಯಲಿದೆ ಎಂದರು. ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಸಂತೋಷ್ ಕಾಮತ್ ಮಾತನಾಡಿ, ಈ ರೀತಿಯ ಕಿರುಕುಳ ನಮಗೂ ಮುಂದೆ ಬರಲಿದೆ. ಆದರೆ ನಾವು ಎಂದಿಗೂ ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ. ಸಮಾಜ ಕಾರ್ಯಕ್ಕೆ ಇಳಿದಿದ್ದೇವೆ, ಎಂದಿಗೂ ಜನರ ಜೊತೆ ಇರುತ್ತೇವೆ ಎಂದರು.

ಮಂಗಳೂರಿನಲ್ಲಿ ಆಮ್ ಆದ್ಮಿ ಪ್ರತಿಭಟನೆ 

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನವನ್ನು ಖಂಡಿಸಿ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಆಪ್ ರಾಜ್ಯ ಜಂಟಿ ಕಾರ್ಯದರ್ಶಿ, ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಂತೋಷ್ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂಧರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಜಿಲ್ಲಾ ಕಾರ್ಯದರ್ಶಿ ಫ್ಲೋರಿನ್ ಗೋವಿಯಸ್, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಶು ಕುಮಾರ್, ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸ್ಟೀಫನ್ ಪಿಂಟೋ, ಜತೆ ಕಾರ್ಯದರ್ಶಿ ಜೇಮ್ಸ್ ಡಿಸೋಜ, ಸಂಘಟನಾ ಕಾರ್ಯದರ್ಶಿ ಪ್ರಸಾದ್ ಬಜಿಲಕೇರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಸ್ಫರ್ ರಜಾಕ್ ಹಾಗು ಇತರ ಮುಖಂಡರು ಭಾಗವಹಿಸಿದ್ದರು.

Manish Sisodia arrest, Mangalore AAP Ashok Edamale slams BJP party says BJP unable to tolerate growth of Aap. The Supreme Court on Tuesday refused to entertain arrested Delhi deputy chief minister Manish Sisodia's petition for quashing the FIR or in the alternative grant him bail from the custody of the Central Bureau of Investigation (CBI).