ಗಂಡ – ಹೆಂಡತಿ ಜಗಳದಲ್ಲಿ ಡೀಲ್ ಕುದುರಿಸಿದ್ದ ಮಹಿಳಾ ಕಾನ್ಸ್ ಟೇಬಲ್ ; ಕರ್ತವ್ಯ ಲೋಪ ಎಸಗಿದ ಶ್ರೀಲತಾ ಸಸ್ಪೆಂಡ್ !  

02-03-23 01:22 pm       Mangalore Correspondent   ಕರಾವಳಿ

ಭ್ರಷ್ಟಾಚಾರದ ಬಗ್ಗೆ ಆರೋಪ ಎದುರಿಸುತ್ತಿದ್ದ ಹಿಂದಿನ ಕಮಿಷನರ್ ಶಶಿಕುಮಾರ್ ಜಾಗಕ್ಕೆ ಹೊಸತಾಗಿ ಕುಲದೀಪ್ ಆರ್ ಜೈನ್ ವಾರದ ಹಿಂದಷ್ಟೇ ಬಂದು ಅಧಿಕಾರ ಸ್ವೀಕರಿಸಿದ್ದರು. ಭ್ರಷ್ಟಾಚಾರ ಸಹಿಸಲ್ಲ ಎನ್ನುತ್ತಲೇ ಬಂದ ಎರಡೇ ದಿನದಲ್ಲಿ ಮರಳು ದಂಧೆ ನಡೆಯುವಲ್ಲಿಗೆ ಪೊಲೀಸರಿಂದ ದಾಳಿ ಮಾಡಿಸಿದ್ದರು.

ಮಂಗಳೂರು, ಮಾ.2: ಭ್ರಷ್ಟಾಚಾರದ ಬಗ್ಗೆ ಆರೋಪ ಎದುರಿಸುತ್ತಿದ್ದ ಹಿಂದಿನ ಕಮಿಷನರ್ ಶಶಿಕುಮಾರ್ ಜಾಗಕ್ಕೆ ಹೊಸತಾಗಿ ಕುಲದೀಪ್ ಆರ್ ಜೈನ್ ವಾರದ ಹಿಂದಷ್ಟೇ ಬಂದು ಅಧಿಕಾರ ಸ್ವೀಕರಿಸಿದ್ದರು. ಭ್ರಷ್ಟಾಚಾರ ಸಹಿಸಲ್ಲ ಎನ್ನುತ್ತಲೇ ಬಂದ ಎರಡೇ ದಿನದಲ್ಲಿ ಮರಳು ದಂಧೆ ನಡೆಯುವಲ್ಲಿಗೆ ಪೊಲೀಸರಿಂದ ದಾಳಿ ಮಾಡಿಸಿದ್ದರು. ಇದೀಗ ಪ್ರಕರಣ ಒಂದರಲ್ಲಿ ಹಣ ಪಡೆದು ಡೀಲ್ ಕುದುರಿಸಿದ್ದ ಆರೋಪ ಎದುರಿಸುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಒಬ್ಬರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೇಬಲ್ ಆಗಿದ್ದ ಶ್ರೀಲತಾ ಅಮಾನತಾಗಿದ್ದಾರೆ. ಗಂಡ- ಹೆಂಡತಿ ನಡುವಿನ ಜಗಳದ ಕುರಿತು ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕ್ಲಾಕ್‌ ಟವರ್ ಬಳಿ 112 ವಾಹನದಲ್ಲಿ ಕರ್ತವ್ಯದಲ್ಲಿದ್ದ ಪಾಂಡೇಶ್ವರ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಶ್ರೀಲತಾ ತಮ್ಮ ಖಾಸಗಿ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದರು. ಅಲ್ಲದೆ, ದೂರು ನೀಡಿದ್ದ ಮಹಿಳೆಯ ಗಂಡನ ಜೊತೆಗೆ ಕಾರಿನಲ್ಲಿ ಕುಳಿತು ಡೀಲ್ ಕುದುರಿಸಲು ಮುಂದಾಗಿದ್ದರು.

ಇದನ್ನು ಗಮನಿಸಿದ ಮಹಿಳೆಯ ಕಡೆಯವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದರು. ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು ತಿಳಿಯುತ್ತಲೇ ಶ್ರೀಲತಾ ಕಾರಿನಿಂದ ಹೊರಗಿಳಿದು ವಾಗ್ವಾದ ನಡೆಸಿದ್ದರು. ಅಲ್ಲದೆ, ನಿಮ್ಮ ವಿರುದ್ಧ ಕೇಸು ಹಾಕ್ತೀನಿ ಎಂದು ಬೆದರಿಸಿದ್ದರು. ಪ್ರಕರಣಕ್ಕೆ ಸಂಬಂಧವೇ ಹೊಂದಿಲ್ಲದ ಶ್ರೀಲತಾ ಸ್ಥಳಕ್ಕೆ ಬಂದು ಡೀಲ್ ಮಾಡಲು ಯತ್ನಿಸಿದ್ದಲ್ಲದೆ, ತನ್ನ ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಮಹಿಳೆಯ ವಿರುದ್ದವೇ ಕರ್ತವ್ಯಕ್ಕೆ ಅಡ್ಡಿಯೆಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಗಂಡ- ಹೆಂಡತಿ ಜಗಳದಲ್ಲಿ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದ ತಂಡಕ್ಕೆ ಇದರಿಂದ ಮತ್ತಷ್ಟು ಸಿಟ್ಟು ಉಂಟಾಗಿತ್ತು. ಪಾಂಡೇಶ್ವರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಡೀಲ್ ಕುದುರಿಸಿದ್ದು ಮತ್ತು ಆ ಕುರಿತ ವಿಡಿಯೋ ಮುಂದಿಟ್ಟು ಮಹಿಳೆಯ ಜೊತೆಗಿದ್ದವರು ಫೆ.23ರಂದು ಡಿಸಿಪಿ ಅನ್ಶುಕುಮಾರ್ ಗೆ ದೂರು ನೀಡಿದ್ದರು. ತನಿಖೆ ನಡೆಸಿದ ವೇಳೆ ಶ್ರೀಲತಾ ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿದ್ದು ಕಂಡುಬಂದಿತ್ತು. ಇದೇ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ಆಗಿದ್ದ ಶಶಿಕುಮಾರ್ ವರ್ಗಾವಣೆ ಆದೇಶ ಬಂದಿತ್ತು. ಶ್ರೀಲತಾ ಲಂಚದ ಪ್ರಕರಣಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದರೂ, ಪ್ರಕರಣದ ಮೇಲ್ವಿಚಾರಣೆ ನಡೆಸಿದ ಹೊಸ ಕಮಿಷನರ್ ಕುಲದೀಪ್ ಜೈನ್ ನೇರವಾಗಿ ಬ್ಯಾಟ್ ಬೀಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಪೊಲೀಸ್ ಶ್ರೀಲತಾರನ್ನು ಸಸ್ಪೆಂಡ್ ಮಾಡಿ ಆದೇಶ ಮಾಡಿದ್ದಾರೆ.

ವೃತ್ತಿಯಲ್ಲಿ ಪೊಲೀಸ್ ಆಗಿದ್ದರೂ ಶ್ರೀಲತಾ ಆಟಾಟೋಪ ಮಾಡುತ್ತಿರುವುದು ಇದು ಮೊದಲೇನಲ್ಲ. ಈಕೆಯ ವಿರುದ್ಧ ಭ್ರಷ್ಟಾಚಾರ ಆರೋಪಗಳು ಬಹಳಷ್ಟು ಬಾರಿ ಕೇಳಿಬಂದಿದ್ದವು. ಈ ಹಿಂದೆ ಮಹಿಳಾ ಠಾಣೆಯಲ್ಲಿದ್ದಾಗ ಇದೇ ರೀತಿ ಗಂಡ- ಹೆಂಡತಿ ಪ್ರಕರಣದಲ್ಲಿ ಉಲ್ಟಾ ಮಾತನಾಡಿದರೆಂಬ ಕಾರಣಕ್ಕೆ ತನ್ನ ಮೇಲೆ ಕೈಮಾಡಿದ್ದಾಗಿ ಹೇಳಿ ಕರ್ತವ್ಯಕ್ಕೆ ಅಡ್ಡಿಯೆಂದು ಕೇಸು ದಾಖಲಿಸಿದ್ದರು. ಠಾಣೆಯೊಳಗೆ ಕೈಮಾಡಿದ್ದರೆ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಬೇಕಿತ್ತು. ಸಿಸಿಟಿವಿ ಪ್ರಶ್ನೆ ಬಂದಾಗ, ಆಗ ಇದ್ದ ಇನ್ಸ್ ಪೆಕ್ಟರ್ ರೇವತಿ ಮತ್ತು ಶ್ರೀಲತಾ ಸೇರಿ ಸಿಸಿಟಿವಿ ರೆಕಾರ್ಡನ್ನೇ ಡಿಲೀಟ್ ಮಾಡಿಸಿದ್ದರು ಎಂಬ ಆರೋಪಗಳಿದ್ದವು.

ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಶ್ರೀಲತಾ

ಎರಡು ವರ್ಷಗಳ ಹಿಂದೆ ಹಾಸನದಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಶ್ರೀಲತಾ ಮತ್ತು ಈಕೆಯ ಮಗ ಪಾಲ್ಗೊಂಡಿದ್ದು ಭಾರೀ ಸುದ್ದಿಯಾಗಿತ್ತು. ಆಲೂರಿನ ನಂದಿಪುರ ರೆಸಾರ್ಟ್‌ನಲ್ಲಿ 2021ರ ಏ.9ರಂದು ರೇವ್ ಪಾರ್ಟಿ ನಡೆದಿತ್ತು. ವಿಷಯ ತಿಳಿದು ಹಾಸನ ಎಸ್ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಕೂಡ ಇದ್ದರು. ಈಕೆಯ ಮಗ ಅತುಲ್ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದ. ರೇವ್ ಪಾರ್ಟಿಯನ್ನು ಶ್ರೀಲತಾರ ಮಗನೇ ಆಯೋಜಿಸಿದ್ದ ಎನ್ನಲಾಗಿತ್ತು. ಪ್ರಕರಣದಲ್ಲಿ ಎಫ್ಐಆರ್ ಆಗಿದ್ದರಿಂದ ಶ್ರೀಲತಾರನ್ನು ಅಮಾನತು ಮಾಡಲಾಗಿತ್ತು.

ರೇವ್ ಪಾರ್ಟಿ ; ಸಿಸಿಬಿ ಎಎಸ್ಐ ಎಂದು ಪೋಸು ನೀಡಿದ್ದ ಲೇಡಿ ಪೊಲೀಸ್ ಸಸ್ಪೆಂಡ್ !

Mangalore pandeshwar woman head police constable Srilatha suspended for making a deal in a family dispute case after her video went viral. Mangalore police commissioner Kuldeep Kumar Jail has ordered for immediate suspension. Also Srilatha, attached to Economic Offences and Narcotics police Station earlier was placed under suspension for reportedly participating in a rave party organised at an estate on the outskirts of Alur taluk in Hassan district on April 10 by then Mangaluru Commissioner of Police N Shashi Kumar.