ಪ್ರಖರ ಹಿಂದುತ್ವ, ಉಗ್ರ ಹೇಳಿಕೆಗಳನ್ನ ಮೋದಿ ಸಹಿಸಲ್ಲ ! ನಾಲಗೆ ಹರಿಯಬಿಟ್ಟ ಬಳಿಕ ರಾಗ ಬದಲಿಸಿದ ಕೆಎಸ್ ಈಶ್ವರಪ್ಪ 

13-03-23 05:57 pm       Mangalore Correspondent   ಕರಾವಳಿ

ಪ್ರಖರ ಹಿಂದುತ್ವ, ಯಾವುದೇ ಉಗ್ರ ಹೇಳಿಕೆಗಳನ್ನ ಪ್ರಧಾನಿ ಮೋದಿ ಸಹಿಸಲ್ಲ. ದೇಶ ಸ್ವಾತಂತ್ರ್ಯಗೊಳ್ಳಲು ಹಿಂದು, ಮುಸ್ಲಿಂ, ಕ್ರೈಸ್ತರ ಹೋರಾಟದ ಕೊಡುಗೆ ಇದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳುವ ಮೂಲಕ ತಮ್ಮ ಹರಿತ ನಾಲಗೆಯಿಂದಾಗಿರುವ ಡ್ಯಾಮೇಜನ್ನು ಒರೆಸಿಕೊಳ್ಳಲು ಮುಂದಾಗಿದ್ದಾರೆ. 

ಉಳ್ಳಾಲ, ಮಾ.13 : ಪ್ರಖರ ಹಿಂದುತ್ವ, ಯಾವುದೇ ಉಗ್ರ ಹೇಳಿಕೆಗಳನ್ನ ಪ್ರಧಾನಿ ಮೋದಿ ಸಹಿಸಲ್ಲ. ದೇಶ ಸ್ವಾತಂತ್ರ್ಯಗೊಳ್ಳಲು ಹಿಂದು, ಮುಸ್ಲಿಂ, ಕ್ರೈಸ್ತರ ಹೋರಾಟದ ಕೊಡುಗೆ ಇದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳುವ ಮೂಲಕ ತಮ್ಮ ಹರಿತ ನಾಲಗೆಯಿಂದಾಗಿರುವ ಡ್ಯಾಮೇಜನ್ನು ಒರೆಸಿಕೊಳ್ಳಲು ಮುಂದಾಗಿದ್ದಾರೆ. 

ನಿನ್ನೆ ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಸ್ಲಿಮರ ಆಜಾನ್ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಮೈಕ್ ಇಲ್ಲದಿದ್ದರೆ ಆಜಾನ್ ಅಲ್ಲಾನಿಗೆ ಕೇಳುವುದಿಲ್ಲವೇ ಎಂದು ಈಶ್ವರಪ್ಪ ಮಾತನಾಡಿದ್ದು ವಿರೋಧಕ್ಕೂ ಕಾರಣವಾಗಿತ್ತು. ಸೋಮವಾರ ತೊಕ್ಕೊಟ್ಟಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಹರಿತ ನಾಲಿಗೆಯನ್ನು ಸರಿಪಡಿಸಿಕೊಂಡಿದ್ದಾರೆ. 

ವಿಜಯ ಸಂಕಲ್ಪ ಯಾತ್ರೆಯ ರಥದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಮುಖಂಡ‌ ಫಝಲ್ ಅಸೈಗೋಳಿ ಸಮಕ್ಷಮದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ ಅವರು ಪಕ್ಷದಲ್ಲಿ ಪ್ರಖರ ಹಿಂದುತ್ವ, ಉಗ್ರ ಹೇಳಿಕೆಗಳನ್ನ ಪ್ರಧಾನಿ ಮೋದಿ ಸಹಿಸಲ್ಲ ಎಂದು ಹೇಳಿ ಉಲ್ಟಾ ಹೊಡೆದಿದ್ದಾರೆ. ಬೆಳಗ್ಗೆ ಸುದ್ದಿಗೋಷ್ಟಿಯಲ್ಲಿ ಆಜಾನ್ ಕುರಿತ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ, ಓಲೈಕೆಗಾಗಿ ಸಿದ್ಧಾಂತ ಬಲಿ ಕೊಡಲ್ಲ ಎಂದಿದ್ದರು. 

ರಾಜ್ಯದಾದ್ಯಂತ ಬಿಜೆಪಿ ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆ ಸೋಮವಾರ ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ತಲುಪಿತು. ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಿಂದ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದ ಮೈದಾನದ ವರೆಗೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು. ಈ ವೇಳೆ ಮಾತನಾಡಿದ ಈಶ್ವರಪ್ಪ ಹಿಂದುಗಳು, ಮುಸಲ್ಮಾನರು, ಕ್ರೈಸ್ತರು ಎಲ್ಲರು ಜೊತೆಗೂಡಿ ಪರಕೀಯರ ಜೊತೆ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದರು. ಸ್ವಾತಂತ್ರ್ಯ ನಂತರ ಅಧಿಕಾರ ನಡೆಸಿದ ಕಾಂಗ್ರೆಸ್  ಧರ್ಮಗಳನ್ನ ಒಡೆಯುವ ಕಾರ್ಯ ನಡೆಸಿದೆ. ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಸೌಹಾರ್ದದಿಂದ ಬಾಳುವ ಕಲ್ಪನೆ ಬಿಜೆಪಿಯದ್ದು. ಆದರೆ ಎಸ್ ಡಿಪಿಐ ಮತ್ತು ಕಾಂಗ್ರೆಸ್ ಜನರ ನಡುವೆ ಕೋಮು ಭಾವನೆ ಕೆರಳಿಸುವ ಕಾರ್ಯ ಮಾಡುತ್ತಿದೆ ಎಂದರು. 

ಆದರೆ ಬಿಜೆಪಿ ಆಡಳಿತದಲ್ಲಿ ಎಲ್ಲಾ ಧರ್ಮದವರಿಗೆ ಆದ್ಯತೆ ನೀಡಿದೆ.  ಡಾ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ , ಜಾರ್ಜ್ ಫೆರ್ನಾಂಡಿಸ್ ಅವರನ್ನು ರಕ್ಷಣಾ ಸಚಿವ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ. ಇತ್ತಿಚೀನ ದಿನಗಳಲ್ಲಿ ಮುಸ್ಲಿಂ, ಕ್ರೈಸ್ತರು, ದಲಿತರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ ಎಂದರು. ಉಳ್ಳಾಲ ಕ್ಷೇತ್ರದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಈ ಹಿಂದಿನ ಬಿಜೆಪಿ ಸರಕಾರ ಅನುದಾನ ಬಿಡುಗಡೆ ಮಾಡಿದ್ದರೂ ಸ್ಥಳೀಯ ಶಾಸಕ ಯು.ಟಿ. ಖಾದರ್ ಭವನ ನಿರ್ಮಾಣಕ್ಕೆ ಪ್ರಯತ್ನವೇ ಪಟ್ಟಿಲ್ಲ. ಅಬ್ಬಕ್ಕ ಭವನ ನಿರ್ಮಾಣಗೊಳ್ಳಲು ಉಳ್ಳಾಲದಲ್ಲಿ ಬಿಜೆಪಿ ಶಾಸಕ ಗೆದ್ದು ಬರಬೇಕೆಂದು ಹೇಳಿದರು.
 
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಸತೀಶ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.

Hindu Muslims Christians have given great tribute to India, Eshwarappa twists words after speaking against Azan in Mangalore. Modi doesn't like the religious hatred speech he added. Vijay Sankalp Yatra reached the Ullal constituency today.