ಪಚ್ಚನಾಡಿಯಲ್ಲಿ ತ್ಯಾಜ್ಯಕ್ಕೆ ನಿರಂತರ ಬೆಂಕಿ ; ಜನ ಹೊಗೆ ನುಂಗಿ ಸಾಯಬೇಕೇ? ಶಾಸಕರಿಗೆ ಜನರ ಕಷ್ಟ ಕಾಣುತ್ತಿಲ್ಲವೇ ? 

14-03-23 02:03 pm       Mangalore Correspondent   ಕರಾವಳಿ

ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಆಗಾಗ ಬೆಂಕಿ ಬೀಳುವುದರಿಂದ ಬೋಂದೆಲ್, ಪಚ್ಚನಾಡಿ, ವಾಮಂಜೂರು ನೀರುಮಾರ್ಗ ವರೆಗೂ ಜನರಿಗೆ ದೊಡ್ಡ ಸಮಸ್ಯೆ ಆಗಿದೆ. ಬೆಂಕಿ ಆರಿಸಿದರೂ ಮತ್ತೆ ಮತ್ತೆ ಉರಿಯುತ್ತಿಲ್ಲ.

ಮಂಗಳೂರು, ಮಾ.15 : ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಆಗಾಗ ಬೆಂಕಿ ಬೀಳುವುದರಿಂದ ಬೋಂದೆಲ್, ಪಚ್ಚನಾಡಿ, ವಾಮಂಜೂರು ನೀರುಮಾರ್ಗ ವರೆಗೂ ಜನರಿಗೆ ದೊಡ್ಡ ಸಮಸ್ಯೆ ಆಗಿದೆ. ಬೆಂಕಿ ಆರಿಸಿದರೂ ಮತ್ತೆ ಮತ್ತೆ ಉರಿಯುತ್ತಿಲ್ಲ. ಆದರೆ ಮಂಗಳೂರಿನ ಇಬ್ಬರು ಬಿಜೆಪಿ ಶಾಸಕರು ಎಲ್ಲಿದ್ದಾರೆ, ಇದುವರೆಗೆ ಯಾಕೆ ಘಟನಾ ಸ್ಥಳಕ್ಕೆ ಬಂದಿಲ್ಲ. ಜನ 24 ಗಂಟೆ ಹೊಗೆ ನುಂಗಿಕೊಂಡು ಸಾಯಬೇಕಾ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಮಂಗಳೂರಿನ ಇಬ್ಬರು ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯ, ಕೇಂದ್ರದಲ್ಲಿ ಮತ್ತು ಮಂಗಳೂರು ಪಾಲಿಕೆಯಲ್ಲೂ ನಿಮ್ಮದೇ ಅಧಿಕಾರ ಇದೆ. ಯಾಕೆ ನಿಮಗೆ ತ್ಯಾಜ್ಯಕ್ಕೆ ಬೆಂಕಿ ಬಿದ್ದಿರುವುದನ್ನು ನಿಲ್ಲಿಸಲು ಆಗುತ್ತಿಲ್ಲ. ಅಲ್ಲಿನ ಜನರಿಗೆ ಯಾಕೆ ತೊಂದರೆ ಕೊಡುತ್ತಿದ್ದೀರಿ ಎಂದು ಶಾಸಕರನ್ನು ಬಾವ ಪ್ರಶ್ನೆ ಮಾಡಿದರು. 

ಜಿಲ್ಲಾಧಿಕಾರಿ, ಶಾಸಕರು, ಇತರೇ ಅಧಿಕಾರಿಗಳು ಮಾಸ್ಕ್ ಹಾಕಿ ತೆರಳುತ್ತಿದ್ದಾರೆ. ಆದರೆ 24 ಗಂಟೆ ತ್ಯಾಜ್ಯ ಹೊಗೆ ಸೇವಿಸುವ ಜನರ ಬಗ್ಗೆ ಕಾಳಜಿ ಮಾಡಿದ್ದೀರಾ. ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ  ಆಗಬಹುದು, ಅವರ ಪಾಡು ಏನಾಗಬೇಕು ಯೋಚಿಸಿದ್ದೀರಾ. ನಾಡಿದ್ದು ಮಾ.17ರ ಶುಕ್ರವಾರ ಸಂಜೆ 4ಕ್ಕೆ ನಾವು ಸ್ಥಳೀಯ ಜನರನ್ನು ಒಟ್ಟು ಸೇರಿಸಿ ಪ್ರತಿಭಟನೆ ಮಾಡ್ತೇವೆ.‌ ತ್ಯಾಜ್ಯ ಬೆಂಕಿಗೆ ಕೊನೆ ಇಲ್ವಾ‌. ಮಂಗಳೂರಿನ ಇಬ್ಬರು ಶಾಸಕರು ಕನಿಷ್ಠ ಸ್ಥಳ ವೀಕ್ಷಣೆಗೂ ಹೋಗಿಲ್ಲ. ಜನರ ಬದುಕಿನ ಮೇಲೆ ಸವಾರಿ ಮಾಡುತ್ತಿದ್ದೀರಾ.. ಜನಸಾಮಾನ್ಯರ ಜೊತೆಗೆ ನಾವು ಇದ್ದೇವೆ ಎಂದರು ಬಾವ. 

ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಮತ್ತೆ ಹತ್ತು ಎಕರೆ ಭೂಮಿ ಗುರುತಿಸಿದ್ದಾರೆ. ಮತ್ತೆ ಹತ್ತೆಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡೋದು ಬೇಡ. ಅಲ್ಲಿ ಆಸುಪಾಸಿನ ದೇವಾಲಯ, ಪ್ರಾರ್ಥನಾಲಯಗಳಿಗೆ ಇದರಿಂದ ತೊಂದರೆ ಆಗಲಿದೆ. ಕಾಂಗ್ರೆಸ್ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. 

ಪಚ್ಚನಾಡಿಯಲ್ಲಿ ತ್ಯಾಜ್ಯ ಮಿಶ್ರಿತ ಮಲಿನ ನೀರು ಮರವೂರು ಡ್ಯಾಂಗೆ ಸೇರುತ್ತಿದೆ. ಅದೇ ನೀರನ್ನು ಕುಡಿಯುಲು ಕೊಡುತ್ತಿದ್ದಾರೆ. ಆ ಬಗ್ಗೆಯೂ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಪ್ರಶ್ನೆ ಒಂದಕ್ಕೆ ಬಾವ ಉತ್ತರಿಸಿದರು.

Mangalore Former congrese MLA Maideen Bava Slams Mla Bharath Shetty and Vedavyas over frequent fire at Pachanady dumpyard area.