ಗ್ಯಾರಂಟಿ ಕಾರ್ಡ್ ಇಟ್ಕೊಂಡು ಉಪ್ಪಿನಕಾಯಿ ಮಾಡಕ್ಕಾಗುತ್ತಾ..? ಗ್ಯಾರಂಟಿ ಭರವಸೆ ಈಡೇರಿಸಿದರೆ ಉಳಿದೆಲ್ಲ ಯೋಜನೆ ಮುಚ್ಚಬೇಕಷ್ಟೇ ; ಸಿಎಂ ಬೊಮ್ಮಾಯಿ  

16-03-23 08:32 pm       Mangalore Correspondent   ಕರಾವಳಿ

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಇಟ್ಕೊಂಡು ಉಪ್ಪಿನಕಾಯಿ ಮಾಡೋಕ್ಕಾಗುತ್ತಾ.. ಅದಕ್ಕೇನು ಬೆಲೆ ಇದೆ, ಬ್ಯಾಂಕಿನಲ್ಲಿ ಇಡೋಕೆ ಬರುತ್ತಾ.. ಅದು ಎಕ್ಸಿಕ್ಯುಟಿವ್ ಗಳು ನಮ್ಮ ವಸ್ತುಗಳನ್ನೇ ಕೊಳ್ಳಿ ಅಂತ ಹೇಳಿ ಕೊಡುವ ವಿಸಿಟಿಂಗ್ ಕಾರ್ಡ್ ಅಷ್ಟೇ..

ಮಂಗಳೂರು, ಮಾ.16: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಇಟ್ಕೊಂಡು ಉಪ್ಪಿನಕಾಯಿ ಮಾಡೋಕ್ಕಾಗುತ್ತಾ.. ಅದಕ್ಕೇನು ಬೆಲೆ ಇದೆ, ಬ್ಯಾಂಕಿನಲ್ಲಿ ಇಡೋಕೆ ಬರುತ್ತಾ.. ಅದು ಎಕ್ಸಿಕ್ಯುಟಿವ್ ಗಳು ನಮ್ಮ ವಸ್ತುಗಳನ್ನೇ ಕೊಳ್ಳಿ ಅಂತ ಹೇಳಿ ಕೊಡುವ ವಿಸಿಟಿಂಗ್ ಕಾರ್ಡ್ ಅಷ್ಟೇ.. ಅದನ್ನು ಜನರೇ ಕಸದ ಬುಟ್ಟಿಗೆ ಎಸೆಯಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು. ಕಾಂಗ್ರೆಸಿನವರು ಪ್ರತಿ ತಿಂಗಳು ಮಹಿಳೆಯರ ಖಾತೆಗಳಿಗೆ ಎರಡು ಸಾವಿರ ಹಾಕ್ತೀವಿ ಎಂದಿದ್ದಾರೆ. ಎರಡು ಸಾವಿರ ಹಾಕಿದರೆ, ವರ್ಷಕ್ಕೆ 20 ಸಾವಿರ ಕೋಟಿ ಬೇಕಾಗುತ್ತದೆ. ಇದನ್ನು ಕೊಟ್ಟರೆ ರಾಜ್ಯ ಸರಕಾರದ ಉಳಿದೆಲ್ಲ ಯೋಜನೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದರು.

200 ಯೂನಿಟ್ ವಿದ್ಯುತ್ ಉಚಿತ ಎಂದಿದ್ದಾರೆ. ಸಾಮಾನ್ಯವಾಗಿ ಬಡವರು 50-70 ಯೂನಿಟ್ ಅಷ್ಟೇ ವಿದ್ಯುತ್ ಬಳಕೆ ಮಾಡುತ್ತಾರೆ. ಇವರು 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿ ಯಾರನ್ನು ಯಾಮಾರಿಸುತ್ತಿದ್ದಾರೆ. ಹಿಂದೆ ಛತ್ತೀಸ್ಗಢದಲ್ಲಿ ಇದೇ ರೀತಿ ಉಚಿತ ಘೋಷಣೆ ಮಾಡಿ, ನಾಲ್ಕು ವರ್ಷ ಆದರೂ ಈಡೇರಿಸಲಾಗಿಲ್ಲ. ಜನರನ್ನು ಎಲ್ಲ ಕಾಲದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ತುಪ್ಪದ ವಾಸನೆಯನ್ನು ತೋರಿಸಿ, ಜನರನ್ನು ಯಾಮಾರಿಸುತ್ತಿದ್ದಾರೆ. ಇದಕ್ಕೆಲ್ಲ ಜನರು ಬಗ್ಗಲ್ಲ ಎಂದು ಹೇಳಿದರು.  

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಿಆರ್ ಝಡ್ ವಲಯವನ್ನು ವಿಸ್ತರಣೆ ಮಾಡಿದ್ದೇವೆ. ಸಮುದ್ರ ಕೊರೆತ ತಡೆಯಲು ಉಳ್ಳಾಲದ ಬಟ್ಟಂಪಾಡಿಯಲ್ಲಿ ಅತ್ಯಾಧುನಿಕ ಬ್ರೇಕ್ ವಾಟರ್ ಮಾಡುತ್ತಿದ್ದೇವೆ. ಮೀನುಗಾರರ ಡೀಸೆಲ್ ಸಬ್ಸಿಡಿ ಹೆಚ್ಚಿಸಿದ್ದೇವೆ. ಮಂಗಳೂರು- ಮುಂಬೈ ನಡುವೆ ವಾಟರ್ ಸ್ಪೋರ್ಟ್ಸ್ ಮಾಡುತ್ತೇವೆ ಎಂದು ಹೇಳಿದ ಬೊಮ್ಮಾಯಿ, ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಪ್ರತಿ ಯೋಜನೆಯ 85 ಪರ್ಸೆಂಟ್ ಹಣವನ್ನು ನುಂಗಿ ಹಾಕುತ್ತಿದ್ದರು. ಕೇವಲ 15 ಪರ್ಸೆಂಟ್ ಮಾತ್ರ ಜನರ ಕೈ ಸೇರುತ್ತಿತ್ತು. ನಮ್ಮ ಪ್ರಧಾನಿ ಬಂದ ಬಳಿಕ ಫಲಾನುಭವಿಗಳಿಗೆ ನೇರವಾಗಿ ಹಣ ಹಾಕುವ ವ್ಯವಸ್ಥೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಲ್ಲಿ 500 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ 41,859 ಮಕ್ಕಳಿಗೆ ವಿದ್ಯಾನಿಧಿ ನೆರವು ಸಿಕ್ಕಿದೆ ಎಂದು ಹೇಳಿದರು.

ಹಿಂದುಳಿದ ಜಾತಿಗಳಿಗೆ ನಿಗಮ ಕೊಟ್ಟ ಬಗ್ಗೆ ಜೇನು ಗೂಡಿಗೆ ಕೈಹಾಕಬೇಡಿ ಎಂದು ಹೇಳಿದ್ದರು. ಆದರೆ ಈ ಬೊಮ್ಮಾಯಿಗೆ ಜೇನು ಗೂಡಿಗೆ ಕೈಹಾಕುವ ಧೈರ್ಯ ಇದೆ. ಜೇನು ಹುಳ ಕಡಿದರೆ ಬೊಮ್ಮಾಯಿಗೆ ಕಡಿಯಲಿ, ಆದರೆ ಜೇನಿನ ಸವಿ ನಮಗೆ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದ ಮುಖ್ಯಮಂತ್ರಿ, ಬಿಲ್ಲವರಿಗೆ ನಾರಾಯಣ ಗುರು ಅಭಿವೃದ್ಧಿ ನಿಗಮ ಮಾಡಿದ್ದೇವೆ. ಅದೇ ರೀತಿ ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ನಮ್ಮ ಸರಕಾರ ಯೋಜನೆ ತಯಾರಿಸಲು ಕಟಿಬದ್ಧ ಇದೆ ಎಂದರು.

ರಬ್ಬರ್ ಕಾರ್ಮಿಕರಿಗೆ ಬೋನಸ್ ಘೋಷಣೆ

ಸುಳ್ಯ, ಪುತ್ತೂರು ಭಾಗದ ರಬ್ಬರ್ ಕಾರ್ಮಿಕರಿಗೆ ಕೋವಿಡ್ ಬಳಿಕ ಬೋನಸ್ ಸಿಕ್ಕಿಲ್ಲ, ಈಡೇರಿಸಿ ಎಂಬ ಸಚಿವ ಎಸ್. ಅಂಗಾರ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ, ಹಿಂದೆ 12 ಪರ್ಸೆಂಟ್ ಬೋನಸ್ ಇತ್ತು. ಅದನ್ನು 20 ಪರ್ಸೆಂಟ್ ಏರಿಸುವ ಬೇಡಿಕೆ ಇರಿಸಿದ್ದರು. ನಾವು ಎಲ್ಲ ವಿಭಾಗದ ಬೇಡಿಕೆಯನ್ನು ಪರಿಗಣಿಸಿದ್ದೇವೆ. ರಬ್ಬರ್ ಕಾರ್ಮಿಕರ ಬೇಡಿಕೆಯನ್ನೂ ಪರಿಗಣಿಸಿ 20 ಪರ್ಸೆಂಟ್ ಬೋನಸ್ ನೀಡಲು ಇದೇ ವೇದಿಕೆಯಲ್ಲೇ ಘೋಷಣೆ ಮಾಡುತ್ತೇನೆ ಎಂದರು. ಜಿಲ್ಲಾಡಳಿತದ ವತಿಯಿಂದ ಕೇಂದ್ರ, ರಾಜ್ಯ ಸರಕಾರದ ಫಲಾನುಭವಿಗಳ ನೆಪದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸರಕಾರಿ ವೆಚ್ಚದಲ್ಲಿ ಬಿಜೆಪಿ ಸರಕಾರದ ಪ್ರಚಾರ ಕಾರ್ಯಕ್ರಮ ನಡೆಸಿದ್ದು, ಜಿಲ್ಲೆಯಾದ್ಯಂತ ಬಂದಿದ್ದ ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು, ಪುರುಷರು ಸೇರಿದ್ದರು.

Chief Minister Basavaraj Bommai in Mangalore has criticised the opposition Congress party in the State "for fooling the people with lies by issuing guarantee cards to the voters.