ವಾಮಾಚಾರದ ಬಗ್ಗೆ ಶಂಕೆ ; ಪತ್ನಿ ಸಂಬಂಧಿಕರ ಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಪತಿ ಸಾವು !

19-03-23 11:11 pm       Mangaluru Staffer   ಕರಾವಳಿ

ವ್ಯಕ್ತಿಯೋರ್ವ ಪತ್ನಿಯ ಸಂಬಂಧಿಕರ ಮನೆಯಲ್ಲೇ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ನಂತರ ಆಸ್ಪತ್ರೆಗೆ ತೆರಳಲು ಖುದ್ದಾಗಿ ಆಂಬುಲೆನ್ಸ್ ಹತ್ತಿ ಕುಳಿತು ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಸಂಭವಿಸಿದೆ.

ಉಳ್ಳಾಲ, ಮಾ.19: ವ್ಯಕ್ತಿಯೋರ್ವ ಪತ್ನಿಯ ಸಂಬಂಧಿಕರ ಮನೆಯಲ್ಲೇ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ನಂತರ ಆಸ್ಪತ್ರೆಗೆ ತೆರಳಲು ಖುದ್ದಾಗಿ ಆಂಬುಲೆನ್ಸ್ ಹತ್ತಿ ಕುಳಿತು ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಸಂಭವಿಸಿದೆ.

ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ  ಹರೀಶ್ (33) ಆತ್ಮಹತ್ಯೆ ಮಾಡಿಕೊಂಡವರು. ಇವರು 10 ವರ್ಷಗಳಿಂದ ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಹರೀಶ್ ಅವರು ಸಿದ್ದಕಟ್ಟೆ ಸಂಗಬೆಟ್ಟು ನಿವಾಸಿ ಯುವತಿಯನ್ನು ವಿವಾಹವಾಗಿದ್ದರು.

ಇದೀಗ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಮಾ.12 ರಂದು ಹರೀಶ್ ತನ್ನ ತಾಯಿಯ ಅಕ್ಕನ ಮಗನಾಗಿರುವ ಕೊಣಾಜೆ ಮುಚ್ಚಿಲಕೋಡಿ ನಿವಾಸಿ ರಮೇಶ್ ಶೆಟ್ಟಿಗಾರ್ ಎಂಬವರಿಗೆ ಕರೆ ಮಾಡಿ  ತನ್ನ ಬ್ಯಾಗಿನಲ್ಲಿ ಭಸ್ಮ, ತಗಡು ದೊರೆತಿದ್ದು, ವಾಮಾಚಾರ ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಹೋದರ ರಮೇಶ್ ಮಾ.19ರ ಭಾನುವಾರ ಮನೆಗೆ ಬಂದು ಮಾತನಾಡು ಎಂದು ತಿಳಿಸಿರುವಂತೆ ಹರೀಶ್ ಅವರು ಮಾತುಕತೆಗೆ ಬಂದಿದ್ದರು. ಆದರೆ ಬರುವಾಗಲೇ ಹರೀಶ್ ಕೈಯಲ್ಲಿ ಪೆಟ್ರೋಲ್ ಅನ್ನು ಕ್ಯಾನಿನಲ್ಲಿ ತುಂಬಿಸಿ ಬಂದಿದ್ದಾರೆ. ಮಾತುಕತೆ ಆರಂಭವಾಗುವ ಮುನ್ನವೇ ಅಂಗಳದಲ್ಲಿ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಮಂದಿ ಗಾಬರಿಗೊಂಡು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊಣಾಜೆ ಪೊಲೀಸರು  ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಹರೀಶ್ ಸಾವನ್ನಪ್ಪಿದ್ದಾರೆ. ಅರೆಬೆಂದ ಸ್ಥಿತಿಯಲ್ಲಿದ್ದ ಹರೀಶ್ ಖುದ್ದಾಗಿಯೇ ಪೊಲೀಸರ ಜೊತೆಗೆ ಆಂಬ್ಯುಲೆನ್ಸ್  ಹತ್ತಿದ್ದರು. ರಮೇಶ್ ಶೆಟ್ಟಿಗಾರ್ ಹರೀಶ್ ಅವರ ಸಹೋದರನಾಗಿದ್ದರೆ, ರಮೇಶ್ ಅವರ ಪತ್ನಿಗೆ ಹರೀಶ್ ಅವರ ಪತ್ನಿ ಚಿಕ್ಕಮ್ಮನ ಮಗಳಾಗಿದ್ದಳು. ಸಂಬಂಧದ ಒಳಗಡೆ ಇಬ್ಬರಿಗೂ ವಿವಾಹ ನಡೆದಿತ್ತು. ಪತ್ನಿ ಸರಿಯಾಗಿ ಮಾತನಾಡುತ್ತಿಲ್ಲ , ಕಿವಿ ಕೇಳದಂತೆ ವರ್ತಿಸುತ್ತಾರೆ ಅನ್ನುವ ಆರೋಪವನ್ನು ಹರೀಶ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆರ್ಥಿಕವಾಗಿ ಯಾವುದೇ ರೀತಿಯ ಸಂಕಷ್ಟ ಇಲ್ಲದ ಹರೀಶ್ , ಇದೇ ತಿಂಗಳ ಒಳಗೆ ಪತ್ನಿಗೆ ಸೀಮಂತ ಮಾಡುವವರಿದ್ದರು.

Man sets himself on fire at his wifes house in Konaje in Mangalore, dies in ambulance. The deceased has been identified as Harish (33).